

ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಡೊಮಗೇರಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ BSNL ಮೊಬೈಲ್ ನೆಟ್ವರ್ಕ್ ತೀವ್ರ ಸಮಸ್ಯೆ ಉಂಟಾಗಿದೆ. ಈ ಕುರಿತು ಯಲ್ಲಾಪುರ BSNL ಕಚೇರಿಗೆ ಹಲವಾರು ಬಾರಿ ದೂರು ನೀಡಿದ್ದರೂ, ಇಂದಿನವರೆಗೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ.
ಇತರೆ ಯಾವುದೇ ನೆಟ್ವರ್ಕ್ ಗಳೂ ಸಹ ಇಲ್ಲಿ ಲಭ್ಯವಿಲ್ಲ.
ಗ್ರಾಮದ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳು, ಪರೀಕ್ಷೆಗಳು ಹಾಗೂ ಅಧ್ಯಯನಕ್ಕೆ ಬೇಕಾದ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಉದ್ಯೋಗದಲ್ಲಿರುವವರು ಆನ್ಲೈನ್ ಸಭೆಗಳಲ್ಲಿ ಭಾಗವಹಿಸಲು ಆಗುತ್ತಿಲ್ಲ. ತುರ್ತು ಕರೆಗಳು, UPI ವಹಿವಾಟುಗಳು ಹಾಗೂ ಸರ್ಕಾರಿ ಸೇವೆಗಳನ್ನು ಬಳಸುವುದಕ್ಕೂ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಅತ್ಯಂತ ವಿಷಾದದ ಸಂಗತಿಯೆಂದರೆ, ಈ ಸಮಸ್ಯೆಯ ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ BSNL ಅಧಿಕಾರಿಗಳು ಜವಾಬ್ದಾರಿಯಿಂದ ಸ್ಪಂದಿಸುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬರುತ್ತಿದೆ. ಒಂದು ತಿಂಗಳಿನಿಂದ ಸಮಸ್ಯೆ ಮುಂದುವರಿದಿದ್ದರೂ, ಅಧಿಕಾರಿಗಳಿಂದ ಸ್ಪಷ್ಟ ಉತ್ತರ ಅಥವಾ ಪರಿಣಾಮಕಾರಿ ಕ್ರಮ ಕಾಣುತ್ತಿಲ್ಲ.
ಡೊಮಗೇರಿ ಗ್ರಾಮದ ಮಕ್ಕಳು ಸರಿಯಾಗಿ ಶಿಕ್ಷಣ ಪಡೆಯದಿದ್ದರೆ ಅದರ ಜವಾಬ್ದಾರಿ ಯಾರದು? ಗ್ರಾಮೀಣ ಜನರು ಮೂಲಭೂತ ಸಂಪರ್ಕ ಸೌಲಭ್ಯಕ್ಕಾಗಿ ಇನ್ನೆಷ್ಟು ದಿನ ಕಾಯಬೇಕು?

ಸಂಬಂಧಪಟ್ಟ BSNL ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ, ಡೊಮಗೇರಿ ಗ್ರಾಮದ BSNL ನೆಟ್ವರ್ಕ್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು ಎಂದು ಗ್ರಾಮಸ್ಥರ ಪರವಾಗಿ ವಿನಂತಿಸಿಕೊಳ್ಳುತ್ತೇವೆ. ಸಾರ್ವಜನಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇವೆ. ಎಂದು ಗುತ್ತಿಗೆದಾರ ಸ್ಥಳೀಯ ಪ್ರಮುಖ ನಾಗರಾಜ್ ಗೊಂದಳಿ ಆಗ್ರಹಿಸಿದ್ದಾರೆ.











Prathidvani Yellapura