
ಪ್ರತಿಧ್ವನಿ ಯಲ್ಲಾಪುರ : ಕೈಗಾ ಅಣು ವಿದ್ಯುತ್ ಸ್ಥಾವರ ಪ್ರದೇಶದಲ್ಲಿ 5 ಹಾಗೂ 6 ನೇ ಘಟಕಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಸಾವಿರಾರು ಕೋಟಿ ರೂ. ವೆಚ್ಚದ ಹಾಗೂ ನಾಲ್ಕೈದು ವರ್ಷಗಳ ಕಾಲ ನಿರಂತರವಾಗಿ ನಡೆಯುವ ಕಾಮಗಾರಿ ಇದು. ಹೀಗಾಗಿ ಈ ಯೋಜನೆಯಲ್ಲಿ ಬಳಕೆಯಾಗುವ ಜಲ್ಲಿ ಕಲ್ಲು, ಇವುಗಳನ್ನು ಸಾಗಿಸುವ ವಾಹನಗಳು, ಲಭ್ಯ ಯಂತ್ರೋಪಕರಣಗಳನ್ನು ಉತ್ತರ ಕನ್ನಡ ಜಿಲ್ಲೆಗೇ ಮೊದಲ ಆಧ್ಯತೆ ನೀಡಿ ಪಡೆಯಬೇಕೆಂದು ಜಿಲ್ಲಾ ಲಾರಿ ಟ್ರಾನ್ಸಪೋರ್ಟ ಅಸೋಸಿಯೇಷನ್, ಕೈಗಾ ಮುಖ್ಯಸ್ಥರಿಗೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಿನಂತಿಸಿದೆ. ಈ ನ್ಯಾಯಯುತ ಬೇಡಿಕೆಯ ಬಗ್ಗೆ ಸಂಬಂಧಪಟ್ಟವರು ತುರ್ತು ಗಮನ ಹರಿಸಬೇಕೆಂದು ಯಲ್ಲಾಪುರದ ನಾಗರಿಕ ವೇದಿಕೆಯೂ ಆಗ್ರಹಿಸುತ್ತದೆ ಎಂದು ಯಲ್ಲಾಪುರ ನಾಗರಿಕ ವೇದಿಕೆ ಅಧ್ಯಕ್ಷ ರಾಮುನಾಯ್ಕ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ನಮ್ಮ ಜಿಲ್ಲೆಯಲ್ಲಿ ಬೇಕಾದಷ್ಟು ದೊಡ್ಡ,ದೊಡ್ಡ ಯೋಜನೆಗಳು ಬಂದಿವೆ. ಭೂಮಿ ನಮ್ಮದು, ಪರಿಸರ ನಮ್ಮದು, ನಾಳೆ ಹೆಚ್ಚು ಕಡಿಮೆಯಾದರೆ ಹಣೆಬರಹವೂ ನಮ್ಮದೇ. ಆದರೆ ಅದರ ಲಾಭ ಪಡೆಯುವವರು ಮಾತ್ರ ಹೊರಗಿನವರೇ ಹೆಚ್ಚು. ಉನ್ನತ ತಂತ್ರಜ್ಞರನ್ನು, ತಾಂತ್ರಿಕತೆಯನ್ನು ಹೊರಗಿನಿಂದ ತರಿಸಿಕೊಂಡರೂ ಜಿಲ್ಲೆಯಲ್ಲಿಯೇ ಸಾಕಷ್ಟು ಕಲಿತ ವಿದ್ಯಾವಂತ ನಿರುಧ್ಯೋಗಿಗಳಿದ್ದಾರೆ. ಯೋಜನೆಯಿಂದ ನಿರಾಶ್ರಿತರಾದವರಿದ್ದಾರೆ, ಅವರಿಗೂ ಉದ್ಯೋಗದ ಅವಕಾಶ ಸಿಗಬೇಕು. ಕೈಗಾ ಘಟಕದಲ್ಲಿ ಬಳಸುವ ಜಲ್ಲಿ,ಕಲ್ಲು,ಮಣ್ಣು ಇತ್ಯಾದಿಗಳನ್ನು ಸಾಗಿಸುವ ನೂರಾರು ಲಾರಿ,ಟಿಪ್ಪರ್,ಟ್ರ್ಯಾಕ್ಟರ್,ಜೆಸಿಬಿ,ಕೂಲಿಗಳನ್ನು ಸಾಗಿಸುವ ಕಾರು,ಟೆಂಪೋ ಇತ್ಯಾದಿ ವಾಹನಗಳು ನಮ್ಮ ಜಿಲ್ಲೆಯಲ್ಲಿವೆ. ಅವರ ಕೈಗೂ ಕೆಲಸ ಸಿಗಬೇಕು. ಆದರೆ ಅದಾಗುತ್ತಿಲ್ಲ, ಕೈಗಾದಲ್ಲಿ ಬೃಹತ್ ಕಾಮಗಾರಿಗಳನ್ನು ಗುತ್ತಿಗೆ ಪಡೆದ ಕಂಪನಿಗಳು, ಸಿವಿಲ್ ಕಾಮಗಾರಿಗಳ ನಿರ್ವಹಣೆಗೂ ಹೊರಗಿನ ಸಂಪನ್ಮೂಲಗಳನ್ನೇ ಬಳಸುತ್ತಿರುವುದಾಗಿ ಜಿಲ್ಲೆಯ ಲಾರಿ ಸಂಘ ಆರೋಪಿಸಿದೆ. ಹೀಗಾದರೆ, ಇಲ್ಲಿನ ಚಿಕ್ಕಪುಟ್ಟ ಉಧ್ಯಮಗಳ ಗತಿಯೇನು?. ಅವರನ್ನೇ ಅವಲಂಬಿರುವ ನೂರಾರು ಕುಟುಂಬಗಳ ಪರಿಸ್ಥಿತಿ ಏನಾಗಬಹುದು?. ಸಂಬಂಧಪಟ್ಟವರು ಇದರ ಬಗ್ಗೆಯೂ ಆಲೋಚಿಸಬೇಕು.

ಉತ್ತರ ಕನ್ನಡ ಲಾರಿ ಅಸೋಸಿಯೇಷನ್, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಳೆದ 2-3 ತಿಂಗಳುಗಳಿಂದ ಪ್ರಯತ್ನಿಸುತ್ತಿದೆ. ಈಗಾಗಲೇ ಎರಡು ಬಾರಿ ಕೈಗಾ ಸ್ಥಾವರ ಮುಖ್ಯಸ್ಥರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದೆ. ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ, ಜಿಲ್ಲಾಧಿಕಾರಿಗಳೂ ಈ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೈಗಾ ನಿರ್ದೇಶಕರಿಗೆ ಪತ್ರ ಬರೆದಿರುವುದಾಗಿಯೂ ತಿಳಿಸಿದ್ದಾರೆ. ಆದರೆ ಫಲಿತಾಂಶ ಮಾತ್ರ ಸೊನ್ನೆ. ಇಲ್ಲಿಯವರೆಗೆ ಯಾವ ಮನವಿಗಳಿಗೂ ಕೈಗಾ ಮುಖ್ಯಸ್ಥರಿಂದ ಸ್ಪಂಧನೆ ದೊರಕದ ಹಿನ್ನಲೆಯಲ್ಲಿ ಇದೇ ದಿನಾಂಕ 16 -9-2026, ಬುಧವಾರ ಬೆಳಿಗ್ಗೆಯಿಂದ ಕೈಗಾ ಪ್ರದೇಶದಲ್ಲಿ ಅನಿರ್ದಿಷ್ಟ ಅವಧಿ ಪ್ರತಿಭಟನೆ ನಡೆಸುವುದಾಗಿ ಲಾರಿ ಸಂಘವು ತಿಳಿಸಿದೆ.
ಇದು ಕೈಗಾ ವಿರೋಧಿ ಹೋರಾಟವಲ್ಲ. ಕೈಗಾದಲ್ಲಿ ಐದು ಹಾಗೂ ಆರನೇ ಘಟಕಕ್ಕೆ ಸರಕಾರ ಮಂಜೂರಾತಿಯೂ ನೀಡಿದೆ. ಈಗಾಗಲೇ ಕೆಲಸವೂ ಆರಂಭವಾಗಿದೆ. ಆದರೆ, ಈ ಬೃಹತ್ ಯೋಜನೆ ನಿರ್ಮಾಣ ಕಾಮಗಾರಿಯಲ್ಲಿ ತಮ್ಮ ಸಂತ್ರಸ್ತ ಜಿಲ್ಲೆಗೂ ಸೂಕ್ತ ಉದ್ಯೋಗವಕಾಶ ಸಿಗಬೇಕೆಂಬುದಷ್ಟೇ ಹೋರಾಟಗಾರರ ಬಯಕೆಯಾಗಿದೆ. ಜಿಲ್ಲೆಯ ಜನರ ಹೊಟ್ಟೆಪಾಡಿನ ಬೇಡಿಕೆಗಳೂ ಇದರಲ್ಲಿ ಸೇರ್ಪಡೆ ಆಗಿರುವ ಕಾರಣ, ಸಂಬಂಧಿತ ಇಲಾಖೆ, ಗುತ್ತಿಗೆ ಸಂಸ್ಥೆಗಳು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಯಲ್ಲಾಪುರ ನಾಗರಿಕ ವೇದಿಕೆ ವಿನಂತಿಸುತ್ತದೆ.




















Prathidvani Yellapura