
ಪ್ರತಿಧ್ವನಿ ಯಲ್ಲಾಪುರ : ಪ್ರತಿಯೊಬ್ಬರ ಮನೆಗಳಲ್ಲಿ ಹೂವು, ಹಣ್ಣಿನ ಗಿಡಗಳನ್ನು ಬೆಳೆಸುವ ಅಭ್ಯಾಸ ಶ್ರೇಷ್ಠವಾದದ್ದು. ಅದನ್ನು ಪ್ರತಿಯೊಬ್ಬ ಮಹಿಳೆಯರೂ ರೂಢಿಸಿಕೊಳ್ಳಬೇಕು. ಪರಿಸರಕ್ಕೂ ಪೂರಕವಾಗಿರುವುದಲ್ಲದೇ ಮಾನಸಿಕ ನೆಮ್ಮದಿಯ ಜೊತೆ ಆರ್ಥಿಕವಾಗಿ ಮಹಿಳೆಯರಿಗೆ ಸಬಲತೆಯನ್ನು ಉಂಟುಮಾಡುತ್ತದೆ ಎಂದು ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಹೇಳಿದರು.

ಅವರು, ಶನಿವಾರ ಪಟ್ಟಣದ ಎ.ಪಿ.ಎಂ.ಸಿ.ಯ ಶ್ರೀಮಾತಾ ಟ್ರೇಡಿಂಗ್ ಕಂಪೆನಿ ಆವಾರದಲ್ಲಿ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ಸಸ್ಯ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರಲ್ಲಿ ಪರಿಸರಕ್ಕೆ ಪೂರಕವಾದ ಇಂತಹ ಸಸ್ಯಗಳನ್ನು ಬೆಳೆಸುವ ಮೂಲಕ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಂಡು, ನಮ್ಮ ಆರೋಗ್ಯದ ರಕ್ಷಣೆಯನ್ನೂ ಮಾಡಿಕೊಳ್ಳಬಹುದು. ಆ ದೃಷ್ಟಿಯಲ್ಲಿ ನಮ್ಮ ಸಂಘಟನೆ ಕಳೆದ ೮ ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ವರ್ಷ ಹತ್ತನೇ ಕಾರ್ಯಕ್ರಮವನ್ನು ಅತ್ಯಂತ ವಿಶೇಷವಾಗಿ ಗಿಡಗಳ ಮಾರಾಟ ಪ್ರದರ್ಶನಗಳ ಜೊತೆ ಹಳ್ಳಿಯ ತಿಂಡಿ-ತಿನಿಸುಗಳ ವ್ಯಾಪಾರ ವಿನಿಮಯವನ್ನೂ, ಉಡುಪುಗಳ ಮಾರಾಟವನ್ನು ಏರ್ಪಡಿಸಿರುವುದು ಅತ್ಯಂತ ಮಹತ್ವದ್ದಾಗಿದೆ ಎಂದ ಅವರು, ನಮ್ಮ ತಾಲೂಕಿನವರೇ ಆದ ಗೀತಾ ವೈದ್ಯ ಹಲವು ರೀತಿಯ ಚಿಕಿತ್ಸೆಗಳನ್ನು ನೀಡಿ, ಅನೇಕ ಮಹಿಳೆಯರ ಆತ್ಮಬಲವನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿರುವುದು ನಮಗೆಲ್ಲ ಸಂತಸ ತಂದಿದೆ. ಆ ನೆಲೆಯಲ್ಲಿ ಅವರನ್ನು ನಮ್ಮ ಸಂಘಟನೆ ಸನ್ಮಾನಿಸಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ, ತ್ರಿಪುರಾಂಬಿಕಾ ಒಕ್ಕೂಟದ ನಿರ್ದೇಶಕಿ ಮುಕ್ತಾ ಶಂಕರ ಹೇಳಿದರು.

ಇದೇ ಸಂದರ್ಭದಲ್ಲಿ ಚಿಕಿತ್ಸಕಿ ಗೀತಾ ರಾಜಾರಾಮ ವೈದ್ಯ ಅವರನ್ನು ಸನ್ಮಾನಿಸಲಾಯತು. ನಂತರ ಮಾತನಾಡಿದ ಅವರು ಯಲ್ಲಾಪುರದಲ್ಲೂ ಇಂತಹ ಸಸ್ಯ ಮೇಳವನ್ನು ಆಯೋಜಿಸಿರುವುದು ಸಂತಸ ತಂದಿದೆ. ಎಲ್ಲ ಮಹಿಳೆಯರಿಗೂ ಇದೊಂದು ಪ್ರೇರಣೆಯಾಗಲಿದೆ. ಇಂತಹ ಸಂದರ್ಭದಲ್ಲಿ ನನ್ನನ್ನು ಗುರುತಿಸಿ, ಸನ್ಮಾನ ನೀಡಿರುವುದು ನನಗೆ ಸಂತಸ. ಸಂಘಟಕರನ್ನು ನಾನು ಹೃದಯತುಂಬಿ ಅಭಿನಂದಿಸುತ್ತೇನೆ ಎಂದರು.
ಶ್ರೀಮಾತಾ ಟ್ರೇಡಿಂಗ್ ಕಂಪನಿ ಮಾಲಕ ಶ್ರೀಪಾದ ಭಟ್ಟ ಮಾತನಾಡಿ, ಮಹಿಳೆಯರು ಆಸಕ್ತಿ, ಶ್ರದ್ಧೆಯಿಂದ ಇಂತಹ ಉತ್ತಮ ಕಾರ್ಯ ಮಾಡುತ್ತಿರುವುದನ್ನು ಗಮನಿಸಿ, ನಮ್ಮ ಸಂಸ್ಥೆಯಿಂದ ಎಲ್ಲ ರೀತಿಯ ನೆರವನ್ನು ನೀಡುತ್ತಿದ್ದೇವೆ. ಇದು ರಾಜ್ಯ, ದೇಶ ವ್ಯಾಪ್ತಿಯಲ್ಲಿ ಪಸರಿಸುವಂತಾಗಲಿ ಎಂದರು.




ಮನೆಯಂಗಳದಲ್ಲಿ ಗಿಡಗಳನ್ನು ಬೆಳೆಸುವಲ್ಲಿ ಸಾಧನೆ ಮಾಡಿದ ಶ್ವೇತಾ ಗೇರಗದ್ದೆ ಗಿಡಗಳನ್ನು ಹೇಗೆ ಬೆಳೆಸಬೇಕೆಂಬ ಬಗ್ಗೆ ವಿವರಿಸಿದರು.
ಕುಮಾರ ಅಕ್ಷಯ ಭಟ್ಟ ಮಣ್ಮನೆ ಪ್ರಾರ್ಥಿಸಿದನು. ಒಕ್ಕೂಟದ ಉಪಾಧ್ಯಕ್ಷೆ ಸಂಧ್ಯಾ ಕೊಂಡದಕುಳಿ ಸ್ವಾಗತಿಸಿದರು. ಅಧ್ಯಕ್ಷೆ ಜಾಹ್ನವಿ ಮಣ್ಮನೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಗಾಯತ್ರಿ ಬೋಳಗುಡ್ಡೆ ನಿರ್ವಹಿಸಿದರು. ನಿರ್ದೇಶಕಿಯರಾದ ಆಶಾ ಪಟೇಲ ಸನ್ಮಾನ ಪತ್ರ ವಾಚಿಸಿದರು. ಅನಿತಾ ಹೆಗಡೆ ವಂದಿಸಿದರು.

ಎ.ಪಿ.ಎಂ.ಸಿ.ಯ ಶ್ರೀಮಾತಾ ಟ್ರೇಡಿಂಗ್ ಕಂಪೆನಿ ಆವಾರದಲ್ಲಿ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡ ಸಸ್ಯ ಸಂಭ್ರಮದಲ್ಲಿ ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ವಿವಿಧ ಸಸ್ಯ ಮಳಿಗೆಗಳನ್ನು ಉದ್ಘಾಟಿಸಿದರು.














Prathidvani Yellapura