
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಸುಮಾರು 300 ವರ್ಷಗಳ ಹಿಂದಿನಿಂದ ಶ್ರದ್ಧಾ ಭಕ್ತಿಯಿಂದ ಪೂಜಿಸಲ್ಪಡುತ್ತಾ ಜಾತ್ರೋತ್ಸವವಾಗಿ ಆಚರಿಸಲ್ಪಡುವ ತಾಲೂಕಿನ ಕೋಳಿಕೇರಿಯ ಕಾಳು ಘಾಡಿ-ಬಾಳು ಘಾಡಿ ಜಾತ್ರೆಯು ಅತ್ಯಂತ ಸಂಭ್ರಮ ಸಡಗರದಿಂದ ಶ್ರದ್ಧಾ ಭಕ್ತಿಯಿಂದ ಪೂಜಿಸಲ್ಪಡುವುದರೊಂದಿಗೆ ಸಂಪನ್ನಗೊಂಡಿತು.

ಮುಂಜಾನೆಯಿಂದಲೇ ಪೂಜಾ ವಿಧಿ ವಿಧಾನಗಳ ಸಿದ್ಧತೆ ಜರುಗಿ ಹಿರಿಯರ ಸಮ್ಮುಖದಲ್ಲಿ ಆಚಾರ , ಸಂಪ್ರದಾಯಗಳೊಂದಿಗೆ ಪೂಜಿಸಲ್ಪಟ್ಟು ಪ್ರಾರಂಭಗೊಂಡ ಜಾತ್ರೆಗೆ ಸಂಜೆಯವರೆಗೂ ಭಕ್ತರ ದಂಡೇ ಹರಿದು ಬಂದಿತ್ತು. ಪ್ರತಿ ವರ್ಷಕ್ಕಿಂತ ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿತತ್ತು. ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಭಕ್ತರು ಇಷ್ಟಾರ್ಥ ನೆರವೇರಿಸಕೊಳ್ಳಲು,ಹೊತ್ತ ಹರಿಕೆಯನ್ನು ತೀರಿಸಲು ಭಕ್ತರು ಸಾಲುಗಟ್ಟಿ ನಿಂತು ಪೂಜೆ ಸಲ್ಲಿಸಿದರು.

ವಿಜಯ್ ವಿ ಮಿರಾಶಿ, ವಿನೋದ್ ಎಚ್ ಮಿರಾಶಿ, ಪ್ರಕಾಶ್ ಆರ್ ಮಿರಾಶಿ, ಆನಂದ ಮಿರಾಶಿ ಹಾಗೂ ಮಿರಾಶಿ ಬಂಧುಗಳು ಆಪ್ತರ ನೇತೃತ್ವದಲ್ಲಿ ಜಾತ್ರೋತ್ಸವದ ಸಕಲ ಸಿದ್ಧತೆಗಳನ್ನೂ ಕೈಗೊಂಡು ಭಕ್ತರಿಗೆ ಪೂಜಾ ವ್ಯವಸ್ಥೆ ಮತ್ತು ಪ್ರಸಾದ ವಿನಿಯೋಗ ನೆರವೇರಿಸಿದರು.

ನಮ್ಮ ಪೂರ್ವಜರ ಕಾಲದಿಂದಲೂ ಕಾಳು ಘಾಡಿ – ಬಾಳು ಘಾಡಿ ಎಂಬ ಸತ್ಪುರುಷರ ಸಮಾಧಿಗಳಿಗೆ ಪೂಜೆ ಸಲ್ಲಿಸುತ್ತಾ ಬಂದಿರುತ್ತೇವೆ. ಪೂರ್ವಜರ ಹೇಳಿಕೆಯಂತೆ ಇಬ್ಬರೂ ಯೋಧರಾಗಿದ್ದು ಸಾತ್ವಿಕ ಕಾರ್ಯಕ್ಕಾಗಿ ಸೆಣಸಾಡಿ ವೀರ ಮರಣವನ್ನಪ್ಪಿದ್ದು ಅವರ ಪಾರ್ಥಿವ ಶರೀರಗಳನ್ನು ಕೋಳಿಕೇರಿಯಲ್ಲಿ ಸಂಸ್ಕಾರ ಮಾಡಿದ ನಂತರ ಅನೇಕ ಪವಾಡಗಳು ನಡೆಯಲಾರಂಭಿಸಿದ ಕಾರಣ ದೈವ ಸ್ವರೂಪಿಗಳಾಗಿ ಅವರನ್ನು ಕಂಡು ಪ್ರತಿ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಅವರ ಇಷ್ಟಾರ್ಥ ನೆರವೇರಿದರೆ ಹರಕೆ ತೀರಿಸುತ್ತಾರೆ. – ವಿಜಯ್ ಮಿರಾಶಿ, ಜಾತ್ರೋತ್ಸವ ಪ್ರಮುಖರು

ಮಳೆಯ ಸಿಂಚನದ ನಡುವೆಯೂ ಜಾತಿ,ಮತ ಬೇಧ ಮರೆತು ಸರತಿ ಸಾಲಿನಲ್ಲಿ ಗದ್ದೆ ಕಾನನ ದಾಟಿ ಸಹಸ್ರಾರು ಸಂಖ್ಯೆಯಲ್ಲಿ ಸತ್ಪುರುಷರ ಜಾತ್ರೋತ್ಸವದಲ್ಲಿ ಭಕ್ತಾದಿಗಳು ಪಾಲ್ಗೊಂಡರು. ಕೋಳೀಕೇರಿ ಪುಟ್ಟ ಊರಾದರೂ ಜಾತ್ರೋತ್ಸವದ ಸಂಭ್ರಮದಲ್ಲಿ ದೊಡ್ಡ ಪಟ್ಟಣದಂತೆ ಭಾಸವಾಯಿತು.
Prathidvani Yellapura