
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಜೇನುಕಲ್ಲು ಗುಡ್ಡದಿಂದ ಯುವಕನೋರ್ವ ಹಾರಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
ಧಾರವಾಡ ಮೂಲದ ಶ್ರೀನಿಧಿ ಕೃಷ್ಣ ಕಡಕೋಳ(೨೩) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಫೆ.೪ರಂದು ಗೋಕರ್ಣಕ್ಕೆ ಹೋಗಿಬರುವುದಾಗಿ ಮನೆಯಲ್ಲಿ ಹೇಳಿ ಸ್ಕೂಟಿಯಲ್ಲಿ ಪ್ರಯಾಣ ಬೆಳೆಸಿದ್ದಾನೆ. ನಂತರ ಸಂಪರ್ಕಕ್ಕೆ ಸಿಗದಾದಾಗ ಪೋಷಕರು ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ತನಿಖೆಗಿಳಿದ ಪೊಲೀಸರು ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿದಾಗ ಯಲ್ಲಾಪುರಕ್ಕೆ ಬಂದ ನಂತರ ಪೋನ್ ಸ್ವಿಚ್ ಆಫ್ ಆಗಿರುವುದಾಗಿ ತಿಳಿದು ಬಂದಿದೆ. ಇದೇ ಸಮಯದಲ್ಲಿ ಜೇನುಕಲ್ಲು ಗುಡ್ಡಕ್ಕೆ ತರಳುವ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಿ ನಿಂತಿರುವ ಮಾಹಿತಿ ದೊರೆತಿದ್ದು ಸುತ್ತಮುತ್ತಲೂ ಹುಡುಕಾಟ ನಡೆಸಿ ಶನಿವಾರ ಮುಂಜಾನೆ ಗುಡ್ಡದ ಕೆಳಭಾಗದಲ್ಲಿ ಮೃತದೇಹವೊಂದು ಪತ್ತೆಯಾಗಿದೆ.

ಕಡಿದಾದ ಗುಡ್ಡದ ಕೆಳಭಾಗಕ್ಕೆ ತೆರಳಿ ಮೃತದೇಹವನ್ನು ಮೇಲಕ್ಕೆ ತರುವುದು ಸಾಹಸ ಕಾರ್ಯವಾಗಿದ್ದು ಯಲ್ಲಾಪುರ ಪಿಐ ರಮೇಶ ಹಾನಾಪುರ ನೇತೃತ್ವದಲ್ಲಿ ಪಿಐ ಸಿದ್ದು ಗುಡಿ , ಸಿಬ್ಬಂದಿಗಳಾದ ಪ್ರವೀಣ, ನೀಲಪ್ಪ, ಶಫಿ ಮತ್ತು ಅಗ್ನಿಶಾಮಕ ದಳದ ಸುಧೀರ್ ಹಾಗೂ ಸಿಬ್ಬಂದಿಗಳು ಅರಣ್ಯ ಇಲಾಖೆಯ ಸಂತೋಷ ಮತ್ತು ಸಿಬ್ಬಂದಿಗಳು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಶವವನ್ನು ಹೊತ್ತು ಮೇಲಕ್ಕೆ ಸಾಗಿಸಲಾಯಿತು.

ನಂತರ ಧಾರವಾಡ ಮೂಲದ ಕಾಣೆಯಾದ ಶ್ರೀನಿಧಿ ಕಡಕೋಳ ಎಂಬ ಯುವಕನ ಮೃತದೇಹವೆಂದು ತಿಳಿದು ಬಂದಿದ್ದು ಮೃತದೇಹವನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.




Prathidvani Yellapura