
ಯಲ್ಲಾಪುರ : ದ್ವಿತೀಯ ಪಿಯುಸಿಯಲ್ಲಿ ಅಂಕಗಳು ಕಡಿಮೆ ಬಂದ ಕಾರಣ ವಿದ್ಯಾರ್ಥಿನಿಯೋರ್ವಳು ಕೆರೆಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ಬರಗದ್ದೆಯಲ್ಲಿ ನಡೆದಿದೆ.

ಏ.8 ರಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ತಾಲೂಕಿನ ಬರಗದ್ದೆಯ ಮಂಜುನಾಥ ಮಹಾದೇವ ಪೂಜಾರಿ ಎಂಬುವರ ಮಗಳಾದ ದೀಪಿಕಾ ಮಂಜುನಾಥ ಪೂಜಾರ(18) ಎಂಬಾಕೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ಶೇ.62ರಷ್ಟು ಅಂಕಗಳಿಸಿ ಉತ್ತೀರ್ಣಳಾಗಿದ್ದರೂ ಅಂಕಗಳು ಕಡಿಮೆಯಾಯಿತೆಂದು ನೊಂದು ತನ್ನ ಮನೆಯ ಸಮೀಪದ ತೋಟದಲ್ಲಿರುವ ಬಾವಿಗೆ ಬಿದ್ದು ಆ*ಹತ್ಯೆ ಮಾಡಿಕೊಂಡಿದ್ದಾಳೆ.

ಫಲಿತಾಂಶ ನೋಡಲು ಹೋದ ಮಗಳು ಮನೆಗೆ ಹಿಂತಿರುಗಲಿಲ್ಲ ಎಂದು ಕುಟುಂಬದವರು ಹುಡುಕಾಟ ನಡೆಸಿದರೂ ಪತ್ತೆಯಾಗದಿದ್ದು ಮನೆಯ ತೋಟದಲ್ಲಿದ್ದ ಬಾವಿಯಲ್ಲಿ ಹೆಣವಾಗಿ ಕಂಡುಬಂದಿದ್ದು ಅಗ್ನಿಶಾಮಕ ಇಲಾಖಾ ಸಿಬ್ಬಂದಿಗಳ ಸಹಾಯದಿಂದ ಶವವನ್ನು ಹೊರತೆಗೆಯಲಾಯಿತು.

ಮರಣೋತ್ತರ ಪರೀಕ್ಷೆಗಾಗಿ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ನಂತರ ಮೃತಳ ಕುಟುಂಬದ ಮೂಲಸ್ಥಳವಾದ ಬೈಂದೂರಿಗೆ ಅಂತ್ಯಕ್ರಿಯೆಗಾಗಿ ಕೊಂಡೊಯ್ಯಲಾಯಿತು. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Prathidvani Yellapura