
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಪಟ್ಟಣದಲ್ಲಿ ಕಳೆದೆರಡು ದಿನಗಳಿಂದ ಮುಂಜಾನೆ ವಿಪರೀತ ಮಂಜು ಸುರಿಯುತ್ತಿದ್ದು ೮ಘಂಟೆಯವರೆಗೂ ರಸ್ತೆ ಕಾಣದಿರುವಷ್ಟು ಇಬ್ಬನಿ ತುಂಬಿಕೊಂಡಿರುತ್ತದೆ. ಈ ವೇಳೆ ವಾಹನ ಸಂಚಾರ ಅತ್ಯಂತ ಕಷ್ಟಕರವಾಗಿದ್ದು ಅಪಾಯಕಾರಿಯೂ ಆಗಿರುತ್ತದೆ.

ಮುಂಜಾನೆಯಲ್ಲಿ ಇಬ್ಬನಿ ತುಂಬಿದ ರಸ್ತೆಯಲ್ಲಿ ವಾಹನ ಸಂಚಾರ ಅಪಾಯಕಾರಿಯಾಗಿದ್ದು ಅಪಘಾತಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಸದ್ಯ ಕಳೆದೆರಡು ದಿನಗಳಿಂದ ವಿಪರೀತ ಮಂಜು ಸುರಿಯುತ್ತಿರುವುದರಿಂದ ವಾಹನ ಸವಾರರು ಮುನ್ನೆಚ್ಚರಿಕೆಯಿಂದ ಸ್ವಲ್ಪ ಸಮಯ ಮಂಜಿನ ವಾತಾವರಣ ತಿಳಿಯಾಗಿ ಹೆದ್ದಾರಿ ಸ್ಪಷ್ಟವಾಗಿ ಗೋಚರಿಸಿದ ನಂತರ ಪ್ರಯಾಣಿಸುವುದು ಸೂಕ್ತ ಎಂಬುದು ಹಿರಿಯ ವಾಹನ ಚಾಲಕರ ಅಭಿಪ್ರಾಯವಾಗಿದೆ.

ವಿಶೇಷವಾಗಿ ಮುಂಜಾನೆ ವೇಳೆ ವಾಯು ವಿಹಾರಕ್ಕೆಂದು ತೆರಳುವ ಹಿರಿಯ ನಾಗರೀಕರು, ಮಹಿಳೆಯರು, ಪುಟ್ಟ ಮಕ್ಕಳು ಹೆದ್ದಾರಿಯಲ್ಲಿ ಸಂಚರಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕಿದೆ. ಹಾಗೂ ಯುವಕ-ಯುವತಿಯರು ಇಯರ್ಫೋನ್ ಕಿವಿಗೆ ಹಾಕಿಕೊಂಡು ಹಾಡು ಕೇಳುತ್ತಾ ಸಂಚರಿಸುವುದೂ ಸಹ ಅಪಾಯಕಾರಿಯಾಗಿದೆ.

ಹೆದ್ದಾರಿಯಲ್ಲಿ ಬರುವ ವಾಹನಕ್ಕೆ ಮುಂಬದಿಯಿದ ಬರುವ ವಾಹನವಾಗಲೀ, ಪಾದಚಾರಿಗಳಾಗಲೀ ಗೋಚರಿಸದೇ ಅಪಘಾತವಾಗುವ ಸಂಭವ ಹೆಚ್ಚಿದ್ದು ಜಾಗೃತಿ ವಹಿಸಬೇಕಿದೆ.



Prathidvani Yellapura