

ಪ್ರತಿಧ್ವನಿ ಯಲ್ಲಾಪುರ : ಹೊಸ ಪೀಳಿಗೆಯು ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತಿ ಹೆಚ್ಚಿಸಿಕೊಳ್ಳಬೇಕಿದೆ ಮತ್ತು ಅವುಗಳಲ್ಲಿ ಭಾಗವಹಿಸುವ ಅವಕಾಶ ಸಂಘಟಕರು ನೀಡಬೇಕಿದೆ ಕೇಂದ್ರ ಸಾಹಿತ್ಯ ವೇದಿಕೆಯ ಕಾರ್ಯಕ್ರಮಗಳು ಹಲವಾರು ಹೊಸ ಪ್ರತಿಭೆಗೆ ಅವಕಾಶ ನೀಡುವ ಕಾರ್ಯ ಮಾಡುತ್ತಿದ್ದು. ಇದರಿಂದ ಹೊಸಬರಲ್ಲಿ ಹೆಚ್ಚಿನ ಪ್ರೋತ್ಸಾಹ ಮೂಡಿಸಿ ಕವನ ರಚನೆಗೆ ಉತ್ಸಾಹ ಮೂಡಿಸುತ್ತದೆ. ಈ ಮೂಲಕ ಇನ್ನೂ ಹೆಚ್ಚಿನ ಸಾಹಿತ್ಯ ರಚನೆಗೆ ಅವಕಾಶವಾಗುತ್ತದೆ. ಎಂದು ಪತ್ರಕರ್ತ ಜಗದೀಶ ನಾಯಕ ಹೇಳಿದರು.

ಅವರು ಪಟ್ಟಣದ ಶಿವ ಶಂಕರ ನಿಲಯದಲ್ಲಿ ಕೇಂದ್ರ ಸಾಹಿತ್ಯ ವೇದಿಕೆಯ ಜಿಲ್ಲಾ ಮತ್ತು ತಾಲೂಕು ಘಟಕ ಆಯೋಜಿಸಿದ್ದ ಕಾವ್ಯಾವಲೋಕನ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ಬಿಚ್ಚಿಟ್ಟ ಮನಸು’ ಕವನಸಂಕಲನದ ಕಾವ್ಯಾವಲೋಕನ ಮಾಡಿದ ಜ್ಯೋತಿ ಆಚಾರಿ ಮಾತನಾಡಿ ‘ ಕವನ ಸಂಕಲನದಲ್ಲಿ ಬಾಲ್ಯದ ಸವಿ ನೆನಪುಗಳನ್ನು ಕವಿ ಮೆಲಕು ಹಾಕಿದ್ದಾರೆ. ಜೀವನದಲ್ಲಾಗುವ ಬದಲಾವಣೆಯ ಪರ್ವ, ಈ ಸಂರ್ಭದಲ್ಲಿನ ಕನವರಿಕೆ, ಸ್ಪೂರ್ತಿ, ಪರಿಸರ, ಪ್ರಾಣಿ ಪಕ್ಷಿಗಳ ಜೀವನ ಕಲ್ಪನೆ ಹಾಗೂ ಜೀವನದ ಪ್ರತಿಬಿಂಬ ಕವನ ರೂಪದಲ್ಲಿ ಸುಂದರವಾಗಿ ಬಿಚ್ಚಿಟ್ಟಿದೆ.ಬದುಕಿನ ಬಾಲ್ಯದಿಂದ ಆರಂಭವಾಗಿ ಜೀವನದ ಅನುಭೋಗದ ಪ್ರತಿ ಕ್ಷಣವನ್ನು ಈ ಕವನ ಸಂಕಲನ ಬಿಂಬಿಸಿದೆ. ಎಂದರು.

ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ ಮಾತನಾಡಿ ‘ಮಕ್ಕಳಲ್ಲಿ ಓದು, ಬರವಣಿಗೆ ದೂರವಾಗಿದೆ . ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸುವ ಕಾರ್ಯ ಎಲ್ಲಾ ಸಾಹಿತ್ಯಿಕ ವೇದಿಕೆಗಳಿಂದಾಗಬೇಕು. ಸಾಹಿತಿಗಳು ತಾವು ಭಾಗವಹಿಸುವ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ನಮ್ಮ ಮಕ್ಕಳನ್ನು ತೊಡಗಿಸಿಕೊಂಡಲ್ಲಿ ಅವರಲ್ಲೂ ಸಾಹಿತ್ಯ ಪ್ರಜ್ಞೆ ಮೂಡುತ್ತದೆ’ ಎಂದರು.

‘ಭಾರತದ ಭಾವೈಕ್ಯತೆ’ ಕುರಿತಾದ ಕವಿಗೋಷ್ಠಿಯಲ್ಲಿ ಕವಿಗಳಾದ ಯಮುನಾ ನಾಯ್ಕ,ರಾಘವೇಂದ್ರ ನಾಯ್ಕ,ಡಾ.ನವೀನಕುಮಾರ ಎ.ಜಿ.,ಗಂಗಾಧರ ಎಸ್.ಪಿ.,ಡಾ.ಸುಚೇತಾ ಮದ್ಗುಣಿ, ಎಲ್.ರವಿಕುಮಾರ, ಸುರೇಶ್ ಶೆಟ್ಟಿ, ಪುಷ್ಪಲತಾ ನಾಯಕ, ಕೇಬಲ್ ನಾಗೇಶ ,ಜ್ಯೋತಿ ಆಚಾರಿ,ಆಶಾ ಶೆಟ್ಟಿ, ಕುಮಾರಿಯರಾದ ಶ್ರೀರಕ್ಷಾ ವೆರ್ಣೆಕರ, ಸಿಂಚನಾ ನಾಯ್ಕ, ದಿಗ್ವಿ ಶೆಟ್ಟಿ ಕವನ ವಾಚನ ಮಾಡಿದರು.
ಸವಿತಾ ನಾಯ್ಕ ಪ್ರಾರ್ಥನೆ ಹಾಡಿದರು, ಡಾ. ಸುಚೇತಾ ಮದ್ಗುಣಿ ಸ್ವಾಗತಿಸಿದರು, ಭಾರತಿ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿದರು, ಸುಮಂಗಲಾ ವೆರ್ಣೇಕರ್, ರಾಘವೇಂದ್ರ ಪಟಗಾರ ನಿರೂಪಿಸಿದರು.

Prathidvani Yellapura