
ಕೇಬಲ್ ನಾಗೇಶ್, ಯಲ್ಲಾಪುರ..🖋
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕೆಲ ದಿನಗಳಿಂದ ಹಾವು ಕಡಿತಕ್ಕೊಳಗಾದ ಪ್ರಕರಣಗಳು ಹೆಚ್ಚಾಗಿ ಬರುತ್ತಿದ್ದು ಸೂಕ್ತ ಚಿಕಿತ್ಸೆ ದೊರೆಯುತ್ತಿದೆ ಮತ್ತು ಅ್ಕ್ಕೆ ಸಂಬಂಧಿಸಿದ ಔಷಧಗಳು ತಾಲೂಕಿನ ಎಲ್ಲಾ ಪಿ.ಹೆಚ್.ಸಿ ಗಳಲ್ಲು ಸಹ ಲಭ್ಯ ಇರುವುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ಪ್ರತಿಧ್ವನಿಗೆ ಮಾಹಿತಿ ನೀಡಿದ್ದಾರೆ.

ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಮಲೆನಾಡಿನಲ್ಲಿ ಕೃಷಿ ಚಟುವಟಿಕೆ ವೇಗ ಪಡೆದುಕೊಳ್ಳುತ್ತದೆ ಅದಾಗಲೆ ತೋಟ,ಗದ್ದೆ,ಜಮೀನುಗಳಲ್ಲಿ ವಿವಿಧ ಜಾತಿ ಹಾವುಗಳ ಸಂಚಾರವು ಜೋರಾಗೆ ಇರುತ್ತದೆ. ರೈತರು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡ ಸಂದರ್ಭದಲ್ಲಿ ಹಾವುಗಳು ಕಚ್ಚುತ್ತವೆ. ಕೆಲವೊಂದು ತೀವ್ರ ವಿಷ ಪೂರಿತವಾದವುಗಳಿಂದ ಪ್ರಾಣಾಪಾಯವು ಸಂಭವಿಸುವುದರಿಂದ ರೈತರು ಕೃಷಿಕಾರ್ಮಿಕರು ತೀವ್ರ ಮುನ್ನೆಚ್ಚರಿಕೆ ವಹಿಸುವುದು ಮತ್ತು ಅರಣ್ಯದಲ್ಲಿ, ತೋಟ,ಗದ್ದೆಗಳಲ್ಲಿ ಮೊಣಕಾಲುನ ವರೆಗಿನ ಬೂಟುಗಳನ್ನು ಧರಿಸುವುದು ಮತ್ತು ದಪ್ಪಗಿನ ಜರ್ಕಿನ್ ಗಳನ್ನು ಬಳಸುವುದು ಉತ್ತಮ ಎಂಬುದು ಪ್ರಾಜ್ಞರ ಅಭಿಪ್ರಾಯವಾಗಿದೆ.

ಮಹಿಳೆಯರು, ವಯೋವೃದ್ದರು,ಮಕ್ಕಳು ಹೆಚ್ಚಾಗಿ ಇಂತಹ ವಿಚಾರದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಇರಬೇಕು ಎಂಬುದು ಹಿರಿಯರ ಸಲಹೆಯಾಗಿದೆ.
ಹಾವು ಕಚ್ಚಿದ ತಕ್ಷಣ ಆತಂಕಕ್ಕೆ ಒಳಗಾಗದೆ, ರೋಗಿಯನ್ನು ಯಾವುದೇ ಚಲನೆಯಿಲ್ಲದೆ ನೇರವಾಗಿ ಮಲಗಿಸಿ, ಕೂಡಲೇ ಆಂಬ್ಯುಲೆನ್ಸ್ ಅಥವಾ ತುರ್ತು ವಾಹನದ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು.
ಪ್ರಥಮ ಚಿಕಿತ್ಸೆ ಮತ್ತು ಮಾಡಬೇಕಾದ ಕೆಲಸಗಳು
ಸ್ಥಿರತೆ: ರೋಗಿ ಓಡಾಡಿದರೆ ಅಥವಾ ಗಾಬರಿಯಾದರೆ ವಿಷವು ದೇಹದಲ್ಲಿ ವೇಗವಾಗಿ ಹರಡುತ್ತದೆ. ಹಾಗಾಗಿ ರೋಗಿಯನ್ನು ಸಂಪೂರ್ಣವಾಗಿ ನಿಶ್ಚಲವಾಗಿ (ಅಲುಗಾಡದಂತೆ) ಇರಿಸಿ.
ಬಟ್ಟೆ ಸಡಿಲಗೊಳಿಸಿ: ಕಚ್ಚಿರುವ ಜಾಗದಲ್ಲಿರುವ ಬಿಗಿಯಾದ ಆಭರಣಗಳು, ಕೈಗಡಿಯಾರ ಅಥವಾ ಬಟ್ಟೆಗಳನ್ನು ಸಡಿಲಗೊಳಿಸಿ.
ಗಾಯದ ಆರೈಕೆ: ಗಾಯವನ್ನು ಸ್ವಚ್ಛವಾದ ಬಟ್ಟೆಯಿಂದ ಮುಚ್ಚಿ. ಗಾಯದ ಮೇಲೆ ಯಾವುದೇ ಲೇಪನಗಳನ್ನು ಹಚ್ಚಬೇಡಿ.
ಆಸ್ಪತ್ರೆಗೆ ಧಾವಿಸಿ: ಹಾವಿನ ವಿಷಕ್ಕೆ ಇರುವ ಏಕೈಕ ನಿರ್ದಿಷ್ಟ ಮದ್ದು ಆಂಟಿವೀನಮ್ (Anti-Snake Venom). ಇದು ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿರುತ್ತದೆ.
ಮಾಡಬಾರದ ತಪ್ಪುಗಳು
ಗಾಯವನ್ನು ಕತ್ತರಿಸುವುದು ಅಥವಾ ಹೀರುವುದು: ವಿಷವನ್ನು ಹೊರತೆಗೆಯುವ ಉದ್ದೇಶದಿಂದ ಗಾಯವನ್ನು ಬಾಯಿಯಿಂದ ಹೀರಬೇಡಿ ಅಥವಾ ಬ್ಲೇಡ್ನಿಂದ ಕತ್ತರಿಸಬೇಡಿ. ಇದು ಸೋಂಕಿಗೆ ಕಾರಣವಾಗಬಹುದು.
ಟೂರ್ನಿಕೆಟ್ (Tourniquet) ಕಟ್ಟಬೇಡಿ: ರಕ್ತಸಂಚಾರವನ್ನು ಸಂಪೂರ್ಣವಾಗಿ ತಡೆಯಲು ಹಗ್ಗ ಅಥವಾ ಬಟ್ಟೆಯನ್ನು ಗಾಯದ ಮೇಲ್ಭಾಗಕ್ಕೆ ಬಿಗಿಯಾಗಿ ಕಟ್ಟಬಾರದು.
ಮನೆಮದ್ದುಗಳನ್ನು ನಂಬಬೇಡಿ: ಯಾವುದೇ ಜಾನಪದ ಚಿಕಿತ್ಸೆಗಳು, ಗಿಡಮೂಲಿಕೆಗಳು ಅಥವಾ ಮಂತ್ರವಾದಿಗಳ ಮೊರೆ ಹೋಗಿ ಸಮಯವನ್ನು ವ್ಯರ್ಥ ಮಾಡದೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು.
ಹಾವು ಕಡಿತ; ಆತಂಕ ಬೇಡ, ನಿರ್ಲಕ್ಷ್ಯವು ಬೇಡ!
ಹಾವು ಕಡಿತದ ಲಕ್ಷಣಗಳು
ಕಚ್ಚಿದ ಜಾಗದಲ್ಲಿ ಊತ, ತೀವ್ರವಾದ ನೋವು ಮತ್ತು ರಕ್ತಸ್ರಾವ.
ವಾಕರಿಕೆ, ವಾಂತಿ ಮತ್ತು ತಲೆನೋವು.
ಉಸಿರಾಟದ ತೊಂದರೆ ಮತ್ತು ದೃಷ್ಟಿ ಮಂಜಾಗುವುದು.
ದೇಹದಲ್ಲಿ ಮರಗಟ್ಟುವಿಕೆ.
ಆದಾಗ್ಯೂ, ಹಾವು ಕಚ್ಚಿದಾಗ ಸಂಪೂರ್ಣವಾಗಿ ಆತಂಕರಹಿತವಾಗಿರಲು ಸಾಧ್ಯವಿಲ್ಲ, ಆದರೂ ಲಭ್ಯವಿರುವ ಚಿಕಿತ್ಸಾ ವಿಧಾನಗಳ ಬಗ್ಗೆ ಹೆಚ್ಚು ತಿಳಿಯಿರಿ.










Prathidvani Yellapura