
ಕೇಬಲ್ ನಾಗೇಶ್, ಯಲ್ಲಾಪುರ..🖋

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಈ ಬಾರಿ ಅತ್ಯಂತ ಕನಿಷ್ಟ ಮಟ್ಟದ ಮಳೆಯಾಗುತ್ತಿದ್ದು ರೈತರಲ್ಲಿ ದಿನದಿಂದ ದಿನಕ್ಕೆ ಆತಂಕ ಮನೆ ಮಾಡುತ್ತಿದೆ. ಕಳೆದ ವರ್ಷ 28-6-2025 ಇದೇ ದಿನಕ್ಕೆ 1216.2 ಮಿ.ಮೀ ಮಳೆ ಸುರಿದಿತ್ತು ಈ ವರ್ಷ 28-6-2026 ಇದೇ ದಿನಕ್ಕೆ 360.4 ಮಿ.ಮೀ ಮಳೆಯಾಗಿದೆ ಒಟ್ಟು 856 ಮಿ.ಮೀ ರಷ್ಟು ಮಳೆಯ ಪ್ರಮಾಣ ಕಡಿಮೆಯಾಗಿದೆ.

ವಿಶೇಷವಾಗಿ ಯಲ್ಲಾಪುರ ತಾಲೂಕಿನ ಬಹುತೇಕ ಭಾಗಗಳಲ್ಲಿ ಬೇರೆಡೆಗಿಂತ ಕೃಷಿ ಚಟುವಟಿಕೆ ಪ್ರಾರಂಭವಾಗುವುದೆ ತಡವಾಗಿ ಹಾಗಾಗಿ ಇನ್ನೂ ಕಾಲ ಮಿಂಚಿಲ್ಲ ಸಮೃದ್ದವಾಗಿ ಮಳೆಯಾಗುವ ನಿರೀಕ್ಷೆಯಲ್ಲಿ ರೈತಾಪಿ ವರ್ಗ ಆಗಸದೆಡೆಗೆ ಆಸೆ ಕಣ್ಗಳಿಂದ ಎದುರು ನೋಡುತ್ತಿದ್ದಾರೆ.

ವಾಣಿಜ್ಯ ಬೆಳೆಗಳ ಧಾರಣೆಯಲ್ಲಿ ಕೊಂಚ ವ್ಯತ್ಯಾಸ ಕಂಡರು ತೆಡೆದುಕೊಳ್ಳಬಹುದು ಆದರೆ ಆಹಾರ ಬೆಳೆಗಳ ಕೊರತೆಯಾದರೆ ಸಮಸ್ಯೆ ಎದುರಾಗುವುದು ಖಂಡಿತ. ಇದು ಸರಪಳಿ ವ್ಯವಸ್ಥೆ ಆದುದರಿಂದ ಒಂದರ ಮೇಲಿನ ಸಮಸ್ಯೆ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿ ಕೊನೆಗೆ ಬಡ ಮದ್ಯಮ ವರ್ಗದ ಜೀವನ ನಿರ್ವಹಣೆಗೆ ತೊಂದರೆ ಆಗಲಿದೆ.

ಸಾಮಾನ್ಯವಾಗಿ ಕೃಷಿಕ್ಷೇತ್ರದಲ್ಲಿ ಲವಲವಿಕೆ ಇದ್ದಾಗ ಮಾತ್ರ ದೇಶದ ಆರ್ಥಿಕ ಚಟುವಟಿಕೆ ಉತ್ತಮ ರೀತಿಯಲ್ಲಿ ಸಾಗುತ್ತದೆ ಇದು ಭಾರತೀಯ ನೆಲದಲ್ಲಿ ನಡೆದು ಬಂದ ಪದ್ದತಿಯಾಗಿದೆ. ಸುಭೀಕ್ಷವಾದ ಮಳೆ ಬೆಳೆ ಯಾದರೆ ಆ ವರ್ಷ ಪ್ರತಿ ಮನೆಗಳಲ್ಲಿ ಸಂತಸ ನೆಮ್ಮದಿ ತುಂಬಿರುತ್ತದೆ. ಬರ ಬಂದರೆ ಕೇವಲ ಕೃಷಿಕ್ಷೇತ್ರಕ್ಕೆ ಧಕ್ಕೆಯಾಗುವುದಲ್ಲ ಬದಲಾಗಿ ಸಂಪೂರ್ಣ ಮನುಕುಲದ ಸಂತಸದ ಮೇಲೆ ಬರೆ ಎಳೆದುಬಿಡುತ್ತದೆ. ಭಗವಂತ ದಯೆಯಿಂದ ಅಂತಹ ಬರದ ಛಾಯೆ ಎದುರಾಗದೆ ಸಮೃದ್ದ ಮಳೆಯಾಲಿ ಎಂಬುದೆ ದೇಶಕ್ಕೆ ಅನ್ನ ನೀಡುವ ” ರೈತ ದೇವರುಗಳ “ ಅಭಿಲಾಶೆಯಾಗಿದೆ ಹಾಗು ದೇಶ ವಾಸಿಗಳ ಪೂರಕ ಆಶಯವಾಗಿದೆ.

ಒಂದಾನು ವೇಳೆ ಅಂತಹ ಬರದ ಆತಂಕ ಎದುರಾದರೆ ಅದನ್ನು ಸಮರ್ಥವಾಗಿ ನಿಭಾಯಿಸುವ ಜವಾಬ್ದಾರಿ ಸರ್ಕಾರದ ಮೇಲಿದ್ದು ಇದನ್ನು ಗಂಭೀರವಾಗಿ ಸಮರೋಪಾದಿಯಲ್ಲಿ ಎದುರಿಸಬೇಕಿದೆ. ನೊಂದ ರೈತರ ಬೆನ್ನಿಗೆ ನಿಂತು ಧೈರ್ಯ ತುಂಬುವವಕೆಲಸವಾಗಬೇಕಿದೆ ಎಂಬುದು ಪ್ರತಿಧ್ವನಿ ಕಳಕಳಿಯಾಗಿದೆ.






Prathidvani Yellapura