
ಕೇಬಲ್ ನಾಗೇಶ್, ಯಲ್ಲಾಪುರ



ಪ್ರತಿಧ್ವನಿ ಯಲ್ಲಾಪುರ: ಸರ್ಕಾರಕ್ಕೆ ಬೇಡ್ತಿ ಯೋಜನೆ ಮಾಡುವುದಕ್ಕೆ ಬಹಳ ಅವಸರ ಮತ್ತು ಆಸಕ್ತಿ. ಆದ್ದರಿಂದ ನದಿ ತಟದಿಂದ ಗಂಗಾವಳಿ ತುದಿಯವರೆಗೂ ಜಾಗೃತಿ ನಡೆಸುವ ಕೆಲಸ ಮಾಡಬೇಕಿದೆ ಅದಕ್ಕಾಗಿ ಒಗ್ಗಟ್ಟಿನಿಂದ ಮುಂದಡಿ ಇಡಬೇಕಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಪರಿಸರ ಸಂರಕ್ಷಣೆಯ ಬದ್ದತೆಯ ಕರೆ ನೀಡಿದರು.

ಅವರು ಬುಧವಾರ ಬೇಡ್ತಿ ನದಿಯ ತಟದಲ್ಲಿ ಹೊಳೆ ಹುಲಿಯಪ್ಪ ಬಳಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವೃಕ್ಷಾರೋಪಣ ನೆರವೇರಿಸಿ ಹಸಿರು ಸಮಾರಂಭದ ದಿವ್ಯ ಸಾನ್ನಿದ್ಯ ವಹಿಸಿ ಆಶೀರ್ವಚನ ನೀಡಿದರು.
ಬಯಲುಸೀಮೆ ಪ್ರದೇಶಗಳಲ್ಲಿ 2-3 ಬೆಳೆ ಬೆಳೆಯಲಾಗುತ್ತದೆ. ಅಲ್ಲದೇ ಪ್ರತಿ ರೈತರಿಗೂ ನೂರಾರು ಏಕರೆ ಜಮೀನಿದೆ. ಮಲೆನಾಡಿನ ರೈತರಿಗೆ 3 ಏಕರೆ ಇದ್ದರೆ ಹೆಚ್ಚು. ಈ ನೀರನ್ನು ಅದರಷ್ಟಕ್ಕೇ ಹರಿಯಬಿಡುವುದೇ ಉತ್ತಮ. ಹೋರಾಟ ನಿರಂತರ ಮುಂದುವರೆಯಬೇಕು.ಹೋರಾಟದ ಯೋಜನೆಯ ಸರಪಳಿಯ ಕೊಂಡಿ ಕಳಚಿಕೊಳ್ಳಕೂಡದು ಎಂದ ಅವರು ಪ್ರಸ್ತಾಪಿತ ಯೋಜನೆ ಅವೈಜ್ಞಾನಿಕವಾದದ್ದು ಎಂಬುದು ಗೊತ್ತಿರುವ ಸಂಗತಿ.ಜಿಲ್ಲೆಯ ನದಿ,ಕಣಿವೆ,ಪ್ರದೇಶಗಳ ರಕ್ಷಣೆ ನಮ್ಮೆಲ್ಲರ ಹೊಣೆ.ಅತಾರ್ಕಿವಾದ ಸಂಗತಿಯಿಂದ ಭೂಕುಸಿತ ಸೇರಿದಂತೆ ಜಿಲ್ಲೆಯ ಹಲವೆಡೆ ಅವಘಡಗಳು ಹೆಚ್ಚಾಗುತ್ತಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ : ಜಿಲ್ಲೆಯ 6 ಶಾಸಕರು, ಸಂಸದರು, 2 ವಿಧಾನ ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳು ಒಂದೆಡೆ ಸೇರಿ ಗಟ್ಟಿ ನಿರ್ಣಯ ಕೈಗೊಂಡರೆ ಈ ಯೋಜನೆ ಬರಲು ಸಾಧ್ಯವಿಲ್ಲ ಎಂದರು
ಕೊಳ್ಳ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ : ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನಡೆದ ಎಲ್ಲ ಹೋರಾಟಗಳು ಯಶಸ್ವಿಯಾಗಿ ನಡೆದಿದೆ. 26 ಕೋಟಿ ರೂ ವೆಚ್ಚದಲ್ಲಿ ಬೇಡ್ತಿಯಿಂದ ಯಲ್ಲಾಪುರಕ್ಕೆ ನೀರು ತರುವ ಯೋಜನೆ ಸಂಪೂರ್ಣ ವಿಫಲವಾಗಿದೆ. ಯಲ್ಲಾಪುರಕ್ಕೆ ನೀರು ತರಲಾಗದ ಸರ್ಕಾರ ಬಯಲುಸೀಮೆಗೆ ನೀರು ಒಯ್ಯಬಹುದೇ ಜಿಲ್ಲೆಯಲ್ಲಿ 7 ಜಲವಿದ್ಯುತ್ ಯೋಜನೆ ಮಾಡಲಾಗಿದೆ. ಕಳಚೆ ಸೇರಿದಂತೆ ಅನೇಕ ಗುಡ್ಡಗಳು ಕುಸಿಯುತ್ತಿದೆ. ಇದು ಕೇವಲ ಸಾವಿರಾರು ಕೋಟಿ ರೂ ವೆಚ್ಚ ಮಾಡಿ ದುಡ್ಡು ಹೊಡೆಯುವ ಯೋಜನೆಯೇ ಹೊರತೂ ನೀರಾವರಿ ಯೋಜನೆಯಲ್ಲ ಎಂದರು.
ಸ್ವರ್ಣವಲ್ಲೀ ಶ್ರೀಮಠದ ಕಾರ್ಯಾಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ : ಹೋರಾಟದಲ್ಲಿ ನಮ್ಮ ಇಚ್ಚಾಶಕ್ತಿ ಹೆಚ್ಚಾಗಬೇಕು.ನಮ್ಮದು ಗುರುಗಳ ಮಾರ್ಗದರ್ಶನದ ಹೋರಾಟ.ಹೋರಾಟ ಹೇಗಿರುತ್ತದೆಂಬುದರ ಅರಿವು ಜನತೆಗಿದೆ ಎಂದರು.
ಕೊಳ್ಳ ಸಮಿತಿಯ ಪ್ರಮುಖ ಅನಂತ ಭಟ್ಟ ಹುಳಗೋಳ : ಹೋರಾಟದ ಮುಂದಿನ ಕಾರ್ಯಯೋಜನೆ ಮತ್ತು ಪತ್ರಚಳುವಳಿ ಮಾಹಿತಿ ನೀಡಿದರು.


ವೇ.ಲಕ್ಷ್ಮೀನಾರಾಯಣ ಭಟ್ಟ ತಾರಿಮಕ್ಕಿಮತ್ತು ಹರೀಶ ಹೆಗಡೆ ವೇದಘೋಷಗೈದರು.ಮಳಲಗಾಂವ್ ಗ್ರಾಮದ ವತಿಯಿಂದ ನಾಗೇಶ ಸುಬ್ರಾಯ ಭಟ್ಟ ದಂಪತಿ ಶ್ರೀಗಳಿಗೆ ಫಲಸಮರ್ಪಿಸಿದರು.
ಶ್ರೀಲತಾ ರಾಜೀವ ಹೆಗಡೆ ಪರಿಸರಗೀತೆ ಹಾಡಿದರು.
ಕೊಳ್ಳ ಸಂರಕ್ಷಣಾ ಸಮಿತಿ ಸಂಚಾಲಕ ನರಸಿಂಹ ಸಾತೊಡ್ಡಿ ಸ್ವಾಗತಿಸಿ ತಾಲೂಕಿನಲ್ಲಿ ಕೈಗೊಳ್ಳಲಿರುವ ವೃಕ್ಷಾರೋಪಣ ದ ರೂಪುರೇಷೆ ತಿಳಿಸಿದರು. ಎಂ.ಕೆ.ಭಟ್ಟ ಯಡಳ್ಳಿ ನಿರ್ವಹಿಸಿದರು. ಸುಬ್ಬಣ್ಣ ಉದ್ದಾಬೈಲ್ ವಂದಿಸಿದರು.

ಕೆ.ಎಂ.ಎಫ್ ಉಪಾಧ್ಯಕ್ಷ ಸುರೇಶ್ಚಂದ್ರ ಕೇಶಿನಮನೆ,ಸೀಮಾಧ್ಯಕ್ಷ ಶ್ರೀಪಾದ ಹೆಗಡೆ,ನಾಗೇಶ ಪಣತಗೇರಿ,ಸಮಿತಿಯ ವಿಶ್ವನಾಥ ಹೆಗಡೆ ಶೀಗೆಮನೆ,ಕೇಂದ್ರ ಮಾತೃ ಮಂಡಳಿಯ ಗೀತಾ ಶಿಗೆಮನೆ ಸೇರಿದಂತೆ ವಿವಿಧ ಸಹಕಾರಿ ಸಂಸ್ಥೆಯ ಅಧ್ಯಕ್ಷರುಗಳು,ಮಾತೃಮಂಡಳಿಯವರು,ಪರಿಸರ ಕಾರ್ಯಕರ್ತರು,ಸೀಮಾಧ್ಯಕ್ಷರು,ವೈದಿಕಪರಿಷತ್,ವಿವಿಧ ಸಂಘ ಸಂಸ್ಥೆ ಪ್ರಮುಖರುಶಿರಸಿ ಯಲ್ಲಾಪುರ ವಿವಿಧ ಭಾಗಗಳಿಂದ ಸೇರಿದಂತೆ 540 ರಷ್ಟು ಜನ ಸೇರಿದ್ದರು.


Prathidvani Yellapura