
ಪ್ರತಿಧ್ವನಿ,ಯಲ್ಲಾಪುರ : ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳ ಜನರ ಅನುಕೂಲಕ್ಕಾಗಿ ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಆರಂಭಿಸಲು ಸರಕಾರ ಮುಂದಾಗಿದ್ದು, ಅದಕ್ಕೆ ನಮ್ಮ ವಿರೋಧವಿಲ್ಲ.

ಈ ಪೀಠದ ವ್ಯಾಪ್ತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಸೇರಿಸಲು ಹೊರಟಿದ್ದು ಮಾತ್ರ ಸರ್ವತಾ ಸಮರ್ಥನೀಯವಲ್ಲ. ಉತ್ತರ ಕನ್ನಡ ಜಿಲ್ಲೆ, ವಿಶೇಷವಾಗಿ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳು ಈ ಸೇರ್ಪಡೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ಕಳೆದ ಹತ್ತಾರು ವರ್ಷಗಳಿಂದ ನಾವು ಧಾರವಾಡ ಸಂಚಾರಿ ಪೀಠದ ಜೊತೆಗೆ ಗುರುತಿಸಿಕೊಂಡಿದ್ದೇವೆ. ಇದಕ್ಕೆ ಮುಖ್ಯ ಕಾರಣ, ನಾವು ಧಾರವಾಡ ಜಿಲ್ಲೆಗೆ ಬಹಳ ಹತ್ತಿರದಲ್ಲಿದ್ದೇವೆ, ಹಾಗೂ ವ್ಯಾವಹಾರಿಕವಾಗಿಯೂ ಹುಬ್ಬಳ್ಳಿ-ಧಾರವಾಡದ ಜೊತೆ ಒಳ್ಳೆಯ ನಂಟನ್ನು ಹೊಂದಿದ್ದೇವೆ. ನಮ್ಮ ಜಿಲ್ಲೆಯ ಕರಾವಳಿ ತುದಿಯಲ್ಲಿರುವ ಭಟ್ಕಳ ತಾಲೂಕು ಒಂದನ್ನು ಹೊರತುಪಡಿಸಿ, ಉಳಿದ ಎಲ್ಲ ಹನ್ನೊಂದು ತಾಲೂಕುಗಳಿಗೆ ಧಾರವಾಡ ನೂರಾರು ಕಿ.ಮಿ. ಹತ್ತಿರದ ಸ್ಥಳವಾಗಿದೆ. ನಮ್ಮ ಜಿಲ್ಲೆಯ ಹಳಿಯಾಳ ತಾಲೂಕಿನಿಂದ ಧಾರವಾಡ ಕೇವಲ 35-40 ಕಿ.ಮಿ.ದೂರದಲ್ಲಿದ್ದರೆ ಮಂಗಳೂರು 340 ಕಿ.ಮಿ.ದೂರದಲ್ಲಿದೆ. ಬರೋಬ್ಬರಿ 300 ಕಿ.ಮಿ. ಅಂತರ!. ಅದೇ ರೀತಿ ದಾಂಡೇಲಿಯಿಂದ ಧಾರವಾಡಕ್ಕೆ 56 ಕಿ.ಮಿ.ಇದ್ದರೆ, ಮಂಗಳೂರಿಗೆ 365 ಕಿ.ಮಿ., ಜೋಯಡಾದಿಂದ ಧಾರವಾಡಕ್ಕೆ 85 ಕಿ.ಮಿ.ಇದ್ದರೆ ಮಂಗಳೂರಿಗೆ 390 ಕಿ.ಮಿ., ಮುಂಡಗೋಡದಿಂದ ಧಾರವಾಡ 56 ಕಿ.ಮಿ. ದೂರ ಇದ್ದರೆ ಮಂಗಳೂರಿಗೆ 315 ಕಿ.ಮಿ. ಅದೇ ರೀತಿ ಯಲ್ಲಾಪುರದಿಂದ ಧಾರವಾಡ 76 ಕಿ.ಮಿ.ದೂರದಲ್ಲಿದ್ದರೆ ಮಂಗಳೂರು 290 ಕಿ.ಮಿ. ದೂರದಲ್ಲಿದೆ. ಪಕ್ಕದ ಶಿರಸಿ, ಸಿದ್ದಾಪುರ ತಾಲೂಕುಗಳ ಕಕ್ಷಿದಾರರೂ ಸಹ ತಮ್ಮ ವ್ಯಾಜ್ಯಗಳಿಗಾಗಿ ಧಾರವಾಡವನ್ನು ಬಿಟ್ಟು ಮಂಗಳೂರಿಗೆ ಹೋಗಬೇಕಾದರೆ ಕನಿಷ್ಠ150 ರಿಂದ 160 ಕಿ.ಮಿ. ಹೆಚ್ಚು ದೂರ ಕ್ರಮಿಸಬೇಕಾಗುತ್ತದೆ. ಶ್ರಮ, ವೇಳೆ, ಆರ್ಥಿಕ ವೆಚ್ಚ ಎಲ್ಲವೂ ಹೆಚ್ಚಾಗುತ್ತದೆ. ಯಾರನ್ನೋ ತೃಪ್ತಿಪಡಿಸಲು ಇನ್ಯಾರನ್ನೋ ಬಲಿಕೊಡುವ ಈ ಅವಾಸ್ತವಿಕ ತೀರ್ಮಾನವೇ ತಪ್ಪು. ಅಧಿಕಾರ ವಿಕೇಂದ್ರಿಕರಣದ ಹೆಸರಿನಲ್ಲಿ, ಜಿಲ್ಲೆಯ ಅಭಿಪ್ರಾಯ ಪಡೆಯದೇ ಸರಕಾರ ಏಕಪಕ್ಷೀಯ ನಿರ್ಣಯ ಕೈಗೊಂಡರೆ, ಉತ್ತರ ಕನ್ನಡ ಜಿಲ್ಲೆ, ವಿಶೇಷತವಾಗಿ ಘಟ್ಟದ ಮೇಲಿನ ತಾಲೂಕುಗಳ ಜನರಿಂದ ತೀವೃ ಪ್ರತಿಭಟನೆ ಎದುರಿಸಬೇಕಾಗುತ್ತದೆ.

ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರು ಹಾಗೂ ಸ್ಥಳಿಯ ಶಾಸಕ ಶಿವರಾಮ ಹೆಬ್ಬಾರ್ ಅವರುಗಳು ಜಿಲ್ಲೆಯ ಘಟ್ಟದ ಮೇಲಿನ ಭಾಗವನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸುವುದು ಸರಿಯಲ್ಲ ಎಂದು ತಮ್ಮ ಅನಿಸಿಕೆಯನ್ನೆನೋ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗೆ ನಮ್ಮ ಸ್ವಾಗತವಿದೆ. ಆದರೆ ಈ ಅನುಭವಿ ಜನಪ್ರತಿನಿಧಿಗಳು ಕೇವಲ ತಮ್ಮ ಹೇಳಿಕೆಗಳಿಗಷ್ಟೇ ಸೀಮಿತವಾಗಬಾರದು. ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರ ಗಮನಕ್ಕೆ ತಂದು, ನಮ್ಮ ಜಿಲ್ಲೆಯನ್ನು ಮಂಗಳೂರು ನ್ಯಾಯಾಲಯ ವ್ಯಾಪ್ತಿಯಿಂದ ಕೈಬಿಡುವಂತೆ ಮಾಡುವ ಸಾಮರ್ಥ್ಯ ಅವರಲ್ಲಿದೆ. ಅವರು ಮುನ್ನುಗ್ಗಬೇಕು. ಈ ವಿಷಯದಲ್ಲಿ ಜಿಲ್ಲೆಯ ಜನರು ಅವರ ಜೊತೆಯಲ್ಲಿದ್ದಾರೆ. ಇಷ್ಟರ ಮೇಲೂ ನಮಗೆ ನ್ಯಾಯ ಸಿಗದಿದ್ದರೆ, ಸಾರ್ವಜನಿಕರೇ ರಸ್ತೆಯ ಮೇಲೆ ಇಳಿಯುವುದು ಅನಿರ್ವಾಯವಾಗುತ್ತದೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮುನಾಯ್ಕ್ ಅಸಮಧಾನವನ್ನು ಮಾದ್ಯಮ ಪ್ರಕಟಣೆ ಮೂಲಕ ಹೊರ ಹಾಕಿದ್ದಾರೆ.
ಈ ಸಮಸ್ಯೆ ಯನ್ನು ಜನರು ಪಕ್ಷಾತೀತವಾಗಿ,ಧರ್ಮಾತೀತವಾಗಿ ಸಂಘಟಿತರಾಗಿ ಎದುರಿಸಿದಾಗ ಮಾತ್ರ ಭವಿಷ್ಯದಲ್ಲಾಗಬಹುದಾದ ಸಮಸ್ಯೆ ಬಗೆಹರಿಸಬಹುದಾಗಿದೆ ಇಲ್ಲವಾದಲ್ಲಿ ಘಟ್ಟದ ಮೇಲಿನ ತಾಲೂಕುಗಳ ಬಡ ಜನರ ಜೇಬಿಗೆ ಕತ್ತರಿ ಬೀಳುವುದು ಖಂಡಿತ ಎಂಬುದು ಪ್ರಾಜ್ಞರ ಅಭಿಪ್ರಾಯವಾಗಿದೆ.


Prathidvani Yellapura