
ಪ್ರತಿಧ್ವನಿ ಯಲ್ಲಾಪುರ : ನಿತ್ಯ ಬದುಕಿನ ಒತ್ತಡದ ನಡುವೆಯೂ
ಸಾಮಾಜಿಕ ಚಟುವಟಿಕೆಗಳಲ್ಲಿ ಮಹಿಳೆಯರು ಭಾಗವಹಿಸುವ ಮೂಲಕ ಉತ್ತಮ ಕೊಡುಗೆ ನೀಡಲು ಸಶಕ್ತವಾಗಬೇಕಾದರೆ ಸಂಘಟನೆ ಸಾರ್ಥಕವಾಗಿರಬೇಕು.
ಜೀವನ ನಿರ್ವಹಣೆಯಲ್ಲಿ ಹೆಣ್ಣು ಜವಾಬ್ದಾರಿ ಹೊತ್ತು ನಿಂತಾಗ ಅದು ಪ್ರಾಮಾಣಿಕ ಸೇವೆಯ ಫಲ ಸಿಗುವಂತಾಗುತ್ತದೆ. ಸಂಜೀವಿನಿ ಒಕ್ಕೂಟದ ಮಹಿಳೆಯರ ಆರ್ಥಿಕ ಭದ್ರತೆಯ ಜೊತೆಗೆ ಜೀವ ವಿಮಾ ಸೌಲಭ್ಯ ಎಲ್ಲರಿಗೂ ಸಿಗುವಂತೆ ಆಗಬೇಕು.ಎಂದು ಸರ್ವೋದಯ ಶಿಕ್ಷಣ ಸಮಿತಿಯ ಅಧ್ಯಕ್ಷ ಡಿ.ಶಂಕರ ಭಟ್ಟ ಹೇಳಿದರು.

ತಾಲೂಕಿನ ವಜ್ರಳ್ಳಿಯ ಭಾಗ್ಯಶ್ರೀ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವಾರ್ಷಿಕ ಸರ್ವ ಸಾಧಾರಣ ಸಭೆ ಮತ್ತು ಮಹಿಳಾ ದಿನಾಚರಣೆಯನ್ನು ಶುಕ್ರವಾರ ವಜ್ರಳ್ಳಿಯ ಸರ್ವೋದಯ ಸಭಾಭವನದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.

ಕಾರ್ಯಕ್ರಮವನ್ನು ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ ಉದ್ಘಾಟಿಸಿ ಮಾತನಾಡಿದರು.

ಸಭೆಯಲ್ಲಿ ಆದರ್ಶ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕ ಜಿ.ವಿ.ಭಟ್ಟ ಅಡ್ಕೇಮನೆ, ಪತ್ರಕರ್ತ
ಸುಬ್ರಾಯ ಬಿದ್ರೆಮನೆ, ತಾಲೂಕು ಪಂಚಾಯಿತಿ ವಲಯ ಮೇಲ್ವಿಚಾರಕರು ಮತ್ತು ಕೌಶಲ್ಯ ಸಂಯೋಜಕಿ ಶರೀಫ್ ಮುಲ್ಲಾ ಉಪಸ್ಥಿತರಿದ್ದು ಮಾತನಾಡಿದರು.

ವೇದಿಕೆಯಲ್ಲಿ ವಲಯ ಮೇಲ್ವಿಚಾರಕರಾದ ರಾಜಾರಾಮ ವೈದ್ಯ ಮತ್ತು ಗೀತಾ ದಂಪತಿಗಳನ್ನು ಹಾಗು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಬಿದ್ರೆಮನೆ, ಭಾಗೀರತಿ ಭಟ್ಟ,ಗಿರಿಜಾ ಕೋಮಾರ, ರಾಧಾ ಕಾರಂತರವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಭಾಗ್ಯಶ್ರೀ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಅನ್ನಪೂರ್ಣ ಭಟ್ ವಹಿಸಿದ್ದರು.
ಮಹಿಳೆಯರಿಗೆ ಏರ್ಪಡಿಸಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಾಗರತ್ನ ಗಾಂವ್ಕರ್,ಯಮುನಾ ನಾಯ್ಕ,ಅಂಕಿತಾ ನಾಯ್ಕ, ಗಾಯತ್ರಿ ಗಾಂವ್ಕರ ಸನ್ಮಾನ ಪತ್ರ ವಾಚಿಸಿದರು.
ಸಂಜೀವಿನಿ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ರತ್ನಾ ಬಾಂದೇಕರ ಸ್ವಾಗತಿಸಿದರು. ಉಮಾ .ನಾ.ಭಟ್ಟ ನಿರೂಪಿಸಿದರು.
ನಾಗವೇಣಿ ಶೇಖರ್ ಗೌಡ ವಂದಿಸಿದರು.
ನಂತರ ಒಕ್ಕೂಟದ ಸದಸ್ಯರಿಂದ ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.






Prathidvani Yellapura