
ಪ್ರತಿಧ್ವನಿ ಯಲ್ಲಾಪುರ : ಗ್ರಾಮೀಣ ಪ್ರದೇಶದಲ್ಲಿನ ಕಲಿಕೆ ಅನನ್ಯವಾದ ಅನುಭವ ನೀಡುತ್ತದೆ.
ಶಿಕ್ಷಕ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಿ ಸಮಾಜಕ್ಕೆ ಪರಿಚಯಿಸಿದರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ. ಸತತವಾದ ಪರಿಶ್ರಮದಿಂದ ಉತ್ತಮ ಫಲಶೃತಿ ದೊರಕುತ್ತದೆ.ಸುಪ್ತ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡುವ ಕೆಲಸ ನಿರಂತರವಾಗಿ ನಾವು ನೀಡಬೇಕಿದೆ. ಒತ್ತಡದ ಜೀವನದಲ್ಲಿ ಸೃಜನಶೀಲತೆಯ ಚಟುವಟಿಕೆಗಳ ಮೂಲಕ ಮಕ್ಕಳನ್ನು ಕ್ರಿಯಾಶೀಲರಾಗಿಸಬೇಕು. ಎಂದು ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯಕ ಅಭಿಪ್ರಾಯಪಟ್ಟರು.

ಅವರು ಬೀಗಾರ ಗ್ರಾಮದಲ್ಲಿ ಶುಕ್ರವಾರ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಸಾಧನಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತೆ ವಿನುತಾ ಹೆಗಡೆ ಕಾನಗೋಡು ಮಾತನಾಡಿ ಮಾನವೀಯತೆಯ ನೆಲೆ ಇನ್ನೂ ಈ ನೆಲದ ಗುಣದಲ್ಲಿ ಅಡಗಿದೆ. ಕೃಷಿ ತಪಸ್ಸಿನ ನೆಲದಲ್ಲಿ ಹುಟ್ಟಿದ ಮಗುವಿಗೆ ಬಾಲ್ಯದ ಕಲಿಕೆ ಜೀವನದ ಸ್ಮರಣೀಯ ಕ್ಷಣಗಳಾಗಿವೆ. ಉತ್ತಮ ಶಿಕ್ಷಣ ಪಡೆಯುವುದರಿಂದ ಸಮಾಜದ ಜೀವನಮಟ್ಟ ಏರಲು ಸಾಧ್ಯವಿದೆ ಎಂದರು.
ಶಿಕ್ಷಣ ಇಲಾಖೆಯ ಸಂಯೋಜಕ ಸುಧಾಕರ ನಾಯ್ಕ ಮಾತನಾಡಿ
ಮಕ್ಕಳೆಂದರೆ ಕೌತುಕದ ಕಣ್ಣಿಗೆ ಸಾಕ್ಷಿಯಾಗಿರಬೇಕು. ಸತತವಾದ ಓದಿನ ಪರಿಶ್ರಮವು ವ್ಯಕ್ತಿತ್ವದ ಸಾಧನೆಗೆ ಅಡಿಪಾಯ ಆಗಬಲ್ಲದು. ಸತತವಾದ ಛಲವು ನಮ್ಮತನ ಅರಳಿಸಬಲ್ಲದು ಎಂದರು.
ಕಾರ್ಯಕ್ರಮದಲ್ಲಿ ವರದಿಗಾರ ದತ್ತಾತ್ರೇಯ ಭಟ್ಟ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ವಿಜಯಾ ಗಾಂವ್ಕರ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ನರಸಿಂಹ ಕೋಮಾರ ಉಪ್ಪರಿಗೆಮನೆ
ವಹಿಸಿದ್ದರು.
ಇದೇ ಸಂದರ್ಭದಲ್ಲಿ ಏಳನೇ ತರಗತಿಯ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಬೀಳ್ಕೊಡಲಾಯಿತು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕ ಮಂಜುನಾಥ ಟಿ ನಾಯಕ ಸ್ವಾಗತಿಸಿದರು. ಶಿಕ್ಷಕ ಸುರೇಶ ಎಸ್ ಗೌಡ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜ್ಯೋತಿ ಡಯಾಸ್ ಕೊನೆಯಲ್ಲಿ ವಂದಿಸಿದರು. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಪ್ರಶಸ್ತಿ ಫಲಕ,ಪತ್ರಗಳ ಪ್ರದರ್ಶನವನ್ನು ಗಣ್ಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.





Prathidvani Yellapura