
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಕಳೆದ ವರ್ಷ ಬಾರಿ ಚರ್ಚೆಗೆ ಗ್ರಾಸವಾಗಿದ್ದ ” ಹುಟಕ ಮನೆ ” ಗುಡ್ಡ ನೆಲಸಮ, ಅರಣ್ಯ ನಾಶ,ಭೂ ಕಬಳಿಕೆ ಮಹಾ ಪ್ರಕರಣ ನಿಧಾನವಾಗಿ ತಣ್ಣಗಾಗಿತ್ತು ಆದರೆ ಸಾಮಾಜಿಕ ಹೋರಾಟಗಾರ ಮಂಜುನಾಥ ಹೆಗಡೆ ಬಿಡದ ಛಲದಿಂದ ಪ್ರಕರಣ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಂಗಳಕ್ಕೆ ಅಧಿಕೃತವಾಗಿ ತಲುಪಿಸಿದ್ದು ಸತ್ಯಾಸತ್ಯತೆ ಹೊರ ಬರಲಿದೆ ಅಲ್ಲದೆ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಲಿದೆ ಎಂಬುದು ಪ್ರಕರಣದ ಬೆನ್ನು ಬಿದ್ದಿರುವ ಮಂಜುನಾಥ ಹೆಗಡೆಯ ನಂಬಿಕೆಯ ನುಡಿಗಳಾಗಿವೆ.

ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಪ್ರಕರಣವನ್ನು ಸ್ವೀಕರಿಸಿದ್ದು ಅರ್ಜಿಯೊಂದಿಗೆ ಸಂಪೂರ್ಣ ದಾಖಲೆಗಳನ್ನು ಸಲ್ಲಿಸಲಾಗಿದೆ. ಪ್ರಕರಣಕ್ಕೆ ಸುಲುಕಿರುವ ಭೂಮಿಯ ಅಂದಾಜು ಮೌಲ್ಯ 1 ಕೋಟಿ ಎಂದು ಅಂದಾಜಿಸಲಾಗಿದ್ದು ಕಾಣೆಯಾದ ಮರಗಳ ಸಂಖ್ಯೆ ಲೆಕ್ಕವಿರದಷ್ಟು ಎನ್ನಲಾಗಿದೆ.

ಪ್ರಮುಖಾಂಶಗಳು
>> ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹುಟಕಮನೆ ಗ್ರಾಮದ ಸರ್ವೆನಂಬರ್ 61/6 1-10-00 ಮಾಲ್ಕಿ ಕ್ಷೇತ್ರ
>> ಪ್ರಕರಣಕ್ಕೆ ಸಂಬಂಧಿಸಿದ ಕ್ಷೇತ್ರ ಸ,ನಂ 61/6 ಕ್ಕೆ ಲಗ್ತಾ ಇರುವ ಅರಣ್ಯ ಸ.ನಂ- 43/ಅ ಕ್ಷೇತ್ರ 1-00-00 ಮತ್ತು ಸ.ನಂ 61/6 ರ ಅ ಖರಾಬು 00-02-00 ದರಲ್ಲಿಇದ್ದ ಬೆಲೆ ಬಾಳುವ ಮರಗಳನ್ನು ಜೆಸಿಬಿ ಬಳಸಿ ನಾಶ ಪಡಿಸಿ ಪ್ರಕೃತಿದತ್ತ ಭೂಮಿಯನ್ನು ಸಮಟ್ಟುಗೊಳಿಸಿ ಅರಣ್ಯ ಇಲಾಖೆಗೆ ಸೇರಿದ ಸರ್ಕಾರಿ ಜಾಗವನ್ನು ಕಬಳಿಸಿದ್ದು.
>> ಧಾವೆ ಹೂಡಿರುವುದು ಸ.ನಂ61/6 ಜಾಗಕ್ಕೆ ಲಗ್ತಾ ಇರುವ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ಜೆಸಿಬಿ ಬಳಸಿ ಮರಗಳ ಹನನ ಮತ್ತು ಅರಣ್ಯ ಭೂಮಿ ಅತಿಕ್ರಮಣ ಮಾಡಿದ 1) ದೀಪಕ್ ಪುಂಡಲೀಕ ನಾಯ್ಕ 2) ತಾಲೂಕು ದಂಢಾಧಿಕಾರಿ ಯಲ್ಲಾಪುರ 3) ವಲಯ ಅರಣ್ಯಾಧಿಕಾರಿ ಇಡಗುಂದಿ ವಲಯ 4) ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಒಟ್ಟು ನಾಲ್ವರ ವಿರುದ್ದ ನ್ಯಾಯಾಲಯದಲ್ಲಿ ಧಾವೆ ಹೂಡಲಾಗಿದೆ.
ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ದ ಸಾಮಾಜಿಕ ಹೋರಾಟಗಾರ ಮಂಜುನಾಥ ಹೆಗಡೆ ಭೂ ಕಬಳಿಕೆಯಾಗುವ ಪ್ರಾರಂಭದಲ್ಲೆ ಜಿಲ್ಲಾಧಿಕಾರಿಗಳಿಗೆ, ತಹಶಿಲ್ದಾರರಿಗೆ, ವಲಯ ಅರಣ್ಯಾಧಿಕಾರಿಗಳಿಗೆ ಮೌಕಿಕವಾಗಿ ಮತ್ತು ಲಿಖಿತವಾಗಿ ಭೂ ಕಬಳಿಕೆ ಮಾಡಿದ ವ್ಯಕ್ತಿಯ ಮೇಲೆ ದೂರು ನೀಡಿದರು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಸಂಪೂರ್ಣ ದಾಖಲೆ ಸಹಿತ ನ್ಯಾಯಾಲಯದ ಮೆಟ್ಟಿಲೇರಲಾಗಿದೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಹಣಬಲ,ತೋಳ್ಬಲ,ಅಧಿಕಾರದ ಬಲ ಬಳಸಿ ಸರ್ಕಾರದ ಸ್ವತ್ತು ಅಂದರೆ ನಮ್ಮ ಸ್ವತ್ತು ಸಾರ್ವಜನಿಕ ಸ್ವತ್ತನ್ನು ಕಬಳಿಸಲು ಹೊರಟಿರುವರ ವಿರುದ್ದ ದಾಖಲೆ ಸಹಿತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದೇನೆ. ಇಷ್ಟೆಲ್ಲಾ ಅನ್ಯಾಯವನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ತಂದರು ಯಾವ ಪ್ರಯೋಜನ ಆಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗ ಬೇಕಾಯಿತು. ಈ ನ್ಯಾಯ ಪರ ಹೋರಾಟದಲ್ಲಿ ನನ್ನ ಮೇಲಿನ ಅಪ ಪ್ರಚಾರ ಮತ್ತು ಸುಮ್ಮನಾಗಿಸುವ ಹುನ್ನಾರ ಯಾವುದು ಫಲಿಸಲಿಲ್ಲ ಘನ ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸವಿದ್ದು ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ಸರ್ಕಾರದ ಬೆಲೆ ಬಾಳುವ ಅರಣ್ಯ ಸ್ವತ್ತನ್ನು ಮರಳಿ ಪಡೆಯಬೇಕಿದೆ.
ಮಂಜುನಾಥ ಹೆಗಡೆ, ಸಾಮಾಜಿಕ ಹೋರಾಟಗಾರ










Prathidvani Yellapura