
ಪ್ರತಿಧ್ವನಿ ಯಲ್ಲಾಪುರ : ಇಂದ್ರಿಯಗಳು ಸದೃಢವಾದರೆ ಮನಸ್ಸು ಸದೃಢವಾಗುತ್ತದೆ. ಯೋಗಕ್ಕೆ ಭಾರತವೇ ಪ್ರಧಾನ. ಯೋಗ ಇದ್ದರೆ ರೋಗ ಇರುವುದಿಲ್ಲ , ಹಿರಿಯರನ್ನು ಗೌರವಿಸುವುದು ನಮ್ಮ ಭಾರತೀಯ ಪರಂಪರೆ. ಮಾತೃ ದೇವೋ ಭವ ಎಂದು ಹೆತ್ತ ತಾಯಿಯನ್ನು ದೇವರ ಸ್ಥಾನದಲ್ಲಿ ನೋಡುವ ಸಂಸ್ಕೃತಿ ನಮ್ಮದು. ನಾವು ತಾಯಿ ತಂದೆಗೆ ಪ್ರತಿದಿನವೂ ನಮಸ್ಕರಿಸಬೇಕು. ಗುರುಗಳನ್ನು ದೇವರ ಸ್ಥಾನದಲ್ಲಿ ನೋಡಬೇಕು. ಇದು ನಮ್ಮ ಭಾರತೀಯ ಸಂಸ್ಕೃತಿ. ಇದು ಬೆಳಕನ್ನು ಕಾಣುವ ಸಂಸ್ಕೃತಿ. ಗುರು ಹಿರಿಯರಿಗೆ ತಲೆ ಬಾಗಿಸಿ ನಮಿಸಬೇಕು. ಗುರುಗಳು ಮಕ್ಕಳ ಜೀವನವನ್ನು ತಿದ್ದಿ ರೂಪಿಸುವುದಕ್ಕಾಗಿ ಅವರನ್ನು ದೇವರಿಗೆ ಹೋಲಿಸಲಾಗುತ್ತದೆ ಎಂದು ಸಂಸ್ಕೃತ ವಿದ್ವಾಂಸ ಗೋಪಾಲಕೃಷ್ಣ ಭಟ್ ಹಂಡ್ರಮನೆ ಹೇಳಿದರು.

ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಆವರಣದಲ್ಲಿ ಆಯೋಜಿಸಿದ್ದ ಭಾರತೀಯ ಜೀವನ ಶಿಕ್ಷಣ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ವಿಶ್ವದರ್ಶನ ಸಂಸ್ಥೆಯ ಮೂಲ ಆಶಯವೇ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವುದು. ಅಂತಹ ಸಂಸ್ಕಾರ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ಅನೇಕರಲ್ಲಿ ಹುಟ್ಟುತ್ತದೆ. ಅಂತಹ ಪ್ರಶ್ನೆಗಳು ಎದ್ದಾಗ ಹುಟ್ಟಿಕೊಂಡಿದ್ದು ಈ ಶಿಬಿರದ ಯೋಜನೆ. ಶಿಬಿರದಲ್ಲಿ ಪಠ್ಯಕ್ಕೆ ಹೊರತಾದ ಅನೇಕ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಎಲ್ಲರಿಂದ ಗೌರವಿಸಲ್ಪಡಬೇಕು ಎಂಬುದು ಎಲ್ಲರ ಬಯಕೆ. ಆದರೆ ಅಂತಹ ಜ್ಞಾನ, ಸಂಸ್ಕಾರ, ವ್ಯಕ್ತಿತ್ವವನ್ನು ನಾವು ಬೆಳೆಸಿಕೊಳ್ಳಬೇಕು. ಯಾರೊಡನೆ ಹೇಗೆ ಮಾತಾಡಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಒಳ್ಳೆಯ ನಾಗರಿಕರಾದರೆ ನಮ್ಮಿಂದ ಕುಟುಂಬ, ಸಮಾಜ, ದೇಶಕ್ಕೆ ಒಳ್ಳೆಯದಾಗುತ್ತದೆ. ಆಗ ಭಾರತ ವಿಶ್ವಗುರುವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಟಿ ಶಂಕರ ಭಟ್, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ಮಹಾದೇವಿ ಭಟ್, ಸಿ.ಎ ವಿಘ್ನೇಶ್ವರ ಗಾಂವ್ಕರ, ಶಿಬಿರಾಧಿಕಾರಿಗಳು, ಮಕ್ಕಳು ಪಾಲಕರು ಉಪಸ್ಥಿತರಿದ್ದರು.
ವಿಶ್ವದರ್ಶನ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಿ ಕೆ ಗಾಂವ್ಕರ ಸ್ವಾಗತಿಸಿದರು. ಕೇಂದ್ರೀಯ ಶಾಲೆಯ ಅಧ್ಯಾಪಕ ಶಿವಪ್ರಸಾದ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು.








Prathidvani Yellapura