
ಪ್ರತಿಧ್ವನಿ ಯಲ್ಲಾಪುರ : ಉತ್ತರಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಾದ ಯಲ್ಲಾಪುರ, ಶಿರಸಿ, ಸಿದ್ದಾಪುರ ಹಾಗೂ ದಾಂಡೇಲಿಯ ಕೆಲ ಭಾಗಗಳಲ್ಲಿ ಹೇರಳವಾಗಿ ದೊರೆಯುತ್ತಿದ್ದ ಅಪ್ಪೆಮಿಡಿ ಹಾಗೂ ಜೀರಿಗೆ ಮಾವು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿರುವುದು ಮಿಡಿ ಉಪ್ಪಿನಕಾಯಿ ಸವಿಯುವವರಿಗೆ ಬೇಸರ ತಂದಿದೆ. ಸದ್ಯ ಈ ಬಾರಿ ಮಾರುಕಟ್ಟೆಗೆ ಅಪ್ಪೆ ಮಿಡಿಮಾವು ಲಗ್ಗೆ ಇಟ್ಟಿದ್ದು ನಿಧಾನವಾಗಿ ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿದೆ.

ನೂರು ಮಿಡಿಗಳಿಗೆ ಗರಿಷ್ಠ 200 ರುಪಾಯಿಯಂತೆ ಮಾರಾಟವಾಗುತ್ತಿದ್ದು ಲಭ್ಯತೆಯನ್ನಾಧರಿಸಿ ದರ ನಿಗದಿಯಾಗುತ್ತ ಸಾಗಲಿದೆ. ಮಾರುಕಟ್ಟೆಗೆ ಮಿಡಿ ಮಾವು ಬರುವ ಪ್ರಮಾಣವೆ ಕಡಿಮೆ ಎನಿಸಿದರು ಅಪ್ಪೆ ಮಿಡಿ ತನ್ನ ಮೌಲ್ಯ ಕಳೆದುಕೊಳ್ಳದೇ ಗ್ರಾಹಕರನ್ನು ಸೆಳೆಯುತ್ತಿದೆ. ಒಟ್ಟಿನಲ್ಲಿ ಊಟದ ಜೊತೆ ಉಪ್ಪಿನಕಾಯಿ ಇಲ್ಲದೇ ಊಟವೇ ಸೇರದ ಅನೇಕರಿಗೆ ಅಪ್ಪೆಮಿಡಿ ಬಲುಪ್ರೀತಿ..

ವರ್ಷದಿಂದ ವರ್ಷಕ್ಕೆ ಮಾವಿನ ಫಸಲು ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಅಪ್ಪೆಮಿಡಿ ಹಾಗೂ ಜೀರಿಗೆ ಮಿಡಿ ಉಪ್ಪಿನಕಾಯಿಗೆ ಯೋಗ್ಯವಾಗಿದ್ದು ಹೊಳೆಬದಿಯ ಹಳೆಯ ಮರಗಳಲ್ಲಿ ಸಿಗುವ ಮಿಡಿ ಮಾವು ರುಚಿಕರವಾಗಿರುತ್ತದೆ. ಆದರೆ ಮನುಷ್ಯನ ಆಸೆಗೆ ಕೇವಲ ಮಿಡಿಗಳನ್ನು ಕೀಳದೇ ರೆಂಬೆಗಳನ್ನೇ ಕತ್ತರಿಸುತ್ತಿರುವುದು ಮತ್ತು ಗಾಳಿ-ಮಳೆಗೆ ಮರಗಳೇ ಉರುಳುತ್ತಿರುವುದು ರುಚಿಕರವಾದ ಮಾವಿನ ಮಿಡಿಗೆ ಧಕ್ಕೆ ತಂದೊಡ್ಡಿದೆ.





Prathidvani Yellapura