




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲೇ ವಿಶಿಷ್ಟ ಯುಗಾದಿ ಆಚರಣೆಗೆ ಹೆಸರಾದ ಯಲ್ಲಾಪುರದ ಯುಗಾದಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ತನ್ನಿಮಿತ್ತ ಪಟ್ಟಣದಲ್ಲಿ ಯುಗಾದಿ ಉತ್ಸವದ “ಜಾಗೃತಿ ಬೈಕ್ ರ್ಯಾಲಿ” ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಕಾಳಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಿರ್ವಿಘ್ನವಾಗಿ ಬೈಕ್ ರ್ಯಾಲಿ ಯಶಸ್ವಿಯಾಗಲೆಂದು ಪ್ರಾರ್ಥಿಸಲಾಯಿತು.

ಬೈಕ್ ರ್ಯಾಲಿಗೆ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ ಮಾಜಿ ಉಪಾಧ್ಯಕ್ಷೆ ಶಾಮಿಲಿ ಪಾಟಣಕರ, ಸದಸ್ಯ ಸೋಮೇಶ್ವರ ನಾಯ್ಕ, ಕಾಳಮ್ಮ ದೇವಸ್ಥಾನದ ಪ್ರಮುಖ ಉದಯ ನಾಯ್ಕ, ಪ್ರದೀಪ ಯಲ್ಲಾಪುರಕರ, ಪ್ರಸಾದ ಹೆಗಡೆ, ರಜತ್ ಬದ್ದಿ, ರವಿ ದೇವಾಡಿಗ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ಸಂಜೆ ವೇಳೆಗೆ ಚಾಲನೆಯಾದ ಬೈಕ್ ರ್ಯಾಲಿಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಅಂತಿಮವಾಗಿ ಗ್ರಾಮದೇವಿ ದೇವಸ್ಥಾನದ ಆವಾರದಲ್ಲಿ ಸಮಾಪ್ತಿಗೊಂಡಿತು. ದೇವಸ್ಥಾನದ ಆವರಣದಲ್ಲಿ ರ್ಯಾಲಿಯಲ್ಲಿ ಭಾಗವಹಿಸಿದವರಿಗೆ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಮತ್ತು ಬಳಗದವರಿಂದ ತಂಪು ಪಾನಿಯ ವ್ಯವಸ್ಥೆ ಮಾಡಲಾಗಿತ್ತು.

ಐನೂರಕ್ಕೂ ಅಧಿಕ ಬೈಕುಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು. ಕೇಸರಿ ಪತಾಕೆ, ಕೇಸರಿ ಶಲ್ಯ ಧರಿಸಿದ ಯುವಕ ಯುವತಿಯರು ಹಿಂದುತ್ವ, ಭಾರತ ಮಾತೆ, ಶ್ರೀರಾಮ, ಶಿವಾಜಿ ನಾಮಕ್ಕೆ ಜಯಘೋಷ ಹಾಕುತ್ತಾ ಸಾಗಿದರು. ಒಟ್ಟಿನಲ್ಲಿ ಕೇಸರಿಮಯ ರಂಗಿನಲ್ಲಿ ಹೊಸ ಸಂವತ್ಸರದ ಯುಗಾದಿ ಸ್ವಾಗತಕ್ಕೆ ಯಲ್ಲಾಪುರ ಸಜ್ಜಾಗಿತ್ತು.
ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.





Prathidvani Yellapura