
ಪ್ರತಿಧ್ವನಿ ಯಲ್ಲಾಪುರ : ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಆರಂಭಿಸಲು ಸರಕಾರ ಮುಂದಾಗಿದ್ದು ಉತ್ತರ ಕನ್ನಡ ಜಿಲ್ಲೆಯನ್ನು ಅದರ ವ್ಯಾಪ್ತಿಗೆ ಸೇರಿಸಲು ಹೊರಟಿರುವುದಕ್ಕೆ ನಮ್ಮ ವಿರೋದವಿದೆ ಈ ಸಂಬಂಧ ಮುಖ್ಯ ನ್ಯಾಯ ಮೂರ್ತಿಗಳಿಗು, ರಾಜ್ಯಪಾಲರಿಗೆ ಹಾಗು ಮುಖ್ಯಮಂತ್ರಿಗಳಿಗೆ ಪತ್ರ ವಕೀಲರಿಂದ ಪತ್ರ ಚಳುವಳಿ ಪ್ರಾರಂಭಿಸಲಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ವಿ.ಟಿ.ಭಟ್ ಹೇಳಿದರು.

ಅವರು ಪಟ್ಟಣದ ನ್ಯಾಯಾಯಲದ ಆವರಣದಲ್ಲಿ ಹಮ್ಮಿಕೊಂಡ ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಉತ್ತರಕನ್ನಡ ಜಿಲ್ಲೆ ಸೇರ್ಪಡೆ ವಿರೋಧಿಸಿ ನಡೆಸಿದ ಪತ್ರ ಚಳುವಳಿಯಲ್ಲಿ ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆ, ವಿಶೇಷವಾಗಿ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳು ಈ ಸೇರ್ಪಡೆಯನ್ನು ತೀವ್ರವಾಗಿ ವಿರೋಧಿಸುತ್ತವೆ. ಕಳೆದ ಹತ್ತಾರು ವರ್ಷಗಳಿಂದ ನಾವು ಧಾರವಾಡ ಸಂಚಾರಿ ಪೀಠದ ಜೊತೆಗೆ ಗುರುತಿಸಿಕೊಂಡಿದ್ದೇವೆ. ಇದಕ್ಕೆ ಮುಖ್ಯ ಕಾರಣ, ನಾವು ಧಾರವಾಡ ಜಿಲ್ಲೆಗೆ ಬಹಳ ಹತ್ತಿರದಲ್ಲಿದ್ದೇವೆ, ಹಾಗೂ ವ್ಯಾವಹಾರಿಕವಾಗಿಯೂ ಹುಬ್ಬಳ್ಳಿ-ಧಾರವಾಡದ ಜೊತೆ ಒಳ್ಳೆಯ ನಂಟನ್ನು ಹೊಂದಿದ್ದೇವೆ. ನಮ್ಮ ಜಿಲ್ಲೆಯ ಕರಾವಳಿ ತುದಿಯಲ್ಲಿರುವ ಭಟ್ಕಳ ತಾಲೂಕು ಒಂದನ್ನು ಹೊರತುಪಡಿಸಿ, ಉಳಿದ ಎಲ್ಲ ಹನ್ನೊಂದು ತಾಲೂಕುಗಳಿಗೆ ಧಾರವಾಡ ಹತ್ತಿರದ ಸ್ಥಳವಾಗಿದೆ.

ನಮ್ಮ ಜಿಲ್ಲೆಯ ಹಳಿಯಾಳ ತಾಲೂಕಿನಿಂದ ಧಾರವಾಡ ಕೇವಲ 35-40 ಕಿ.ಮಿ.ದೂರದಲ್ಲಿದ್ದರೆ ಮಂಗಳೂರು 340 ಕಿ.ಮಿ.ದೂರದಲ್ಲಿದೆ. ಬರೋಬ್ಬರಿ 300 ಕಿ.ಮಿ. ಅಂತರ!. ಅದೇ ರೀತಿ ದಾಂಡೇಲಿಯಿಂದ ಧಾರವಾಡಕ್ಕೆ 56 ಕಿ.ಮಿ.ಇದ್ದರೆ, ಮಂಗಳೂರಿಗೆ 365 ಕಿ.ಮಿ., ಜೋಯಡಾದಿಂದ ಧಾರವಾಡಕ್ಕೆ 85 ಕಿ.ಮಿ.ಇದ್ದರೆ ಮಂಗಳೂರಿಗೆ 390 ಕಿ.ಮಿ., ಮುಂಡಗೋಡದಿಂದ ಧಾರವಾಡ 56 ಕಿ.ಮಿ. ದೂರ ಇದ್ದರೆ ಮಂಗಳೂರಿಗೆ 315 ಕಿ.ಮಿ. ಅದೇ ರೀತಿ ಯಲ್ಲಾಪುರದಿಂದ ಧಾರವಾಡ 76 ಕಿ.ಮಿ.ದೂರದಲ್ಲಿದ್ದರೆ ಮಂಗಳೂರು 290 ಕಿ.ಮಿ. ದೂರದಲ್ಲಿದೆ. ಪಕ್ಕದ ಶಿರಸಿ, ಸಿದ್ದಾಪುರ ತಾಲೂಕುಗಳ ಕಕ್ಷಿದಾರರೂ ಸಹ ತಮ್ಮ ವ್ಯಾಜ್ಯಗಳಿಗಾಗಿ ಧಾರವಾಡವನ್ನು ಬಿಟ್ಟು ಮಂಗಳೂರಿಗೆ ಹೋಗಬೇಕಾದರೆ ಕನಿಷ್ಠ150 ರಿಂದ 160 ಕಿ.ಮಿ. ಹೆಚ್ಚು ದೂರ ಕ್ರಮಿಸಬೇಕಾಗುತ್ತದೆ. ಶ್ರಮ, ವೇಳೆ, ಆರ್ಥಿಕ ವೆಚ್ಚ ಎಲ್ಲವೂ ಹೆಚ್ಚಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ತರುವುದಕ್ಕೆ ಜಿಲ್ಲೆಯ ಎಲ್ಲಾ ವಕೀಲರ ವಿರೋದವಿದೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಅಪರ ವಕೀಲರಾದ ಎನ್.ಟಿ.ಗಾಂವ್ಕರ್ ಸೇರಿದಂತೆ ಹಲವು ವಕೀಲರು ಉಪಸ್ಥಿತರಿದ್ದರು.















Prathidvani Yellapura