
ಕೇಬಲ್ ನಾಗೇಶ್, ಯಲ್ಲಾಪುರ..🖋
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿನಿ ಆಶಾ ಸಿ. ನಾಯಕ್ ಅವರು ಗದಗದ ಕೆ.ಎಲ್.ಇ ಜಗದ್ಗುರು ತೋಂಟದಾರ್ಯ ಕಾಲೇಜ್ ನಲ್ಲಿ ಆಯೋಜಿಸಲಾದ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ 71 ಪ್ರಬಂಧಕರಲ್ಲಿ ಅತ್ಯುತ್ತಮ ಪ್ರಬಂಧ ಪ್ರಸ್ತುತಿಕರಣ ಪ್ರಶಸ್ತಿ ಪಡೆದುಕೊಂಡಿದ್ದು ಕಾಲೇಜಿಗೆ ಮತ್ತು ಯಲ್ಲಾಪುರ ತಾಲೂಕಿಗೆ ಹೆನ್ಮೆ ತ.ದಿರುತ್ತಾಳೆ.
ಆಶಾ ಸಿ ನಾಯಕ್ ರಚಿಸಿದ “ಯಲ್ಲಾಪುರ ತಾಲ್ಲೂಕಿನಲ್ಲಿ ಮಾನವ–ವನ್ಯಜೀವಿ ಸಂಘರ್ಷ ಮತ್ತು ಬೆಳೆ ನಷ್ಟ: ರೈತರ ಅಭಿಪ್ರಾಯ ಹಾಗೂ ನಿರ್ವಹಣಾ ತಂತ್ರಗಳು” ಎಂಬ ಸಂಶೋಧನಾ ಪ್ರಬಂಧವು ಸಮಾಜಮುಖಿ ಮಹತ್ವದಿಂದ ಮೆಚ್ಚುಗೆ ಪಡೆದಿದ್ದು, ಪರಿಹಾರ ವಿಳಂಬ, ಮೌಲ್ಯಮಾಪನದ ಕೊರತೆ ಹಾಗೂ ಅಪರ್ಯಾಪ್ತ ಪರಿಹಾರ ರೈತರ ಮೇಲೆ ಭಾರ ಹೆಚ್ಚಿಸುತ್ತಿದೆ ಎಂಬುದನ್ನು ತಿಳಿಸಿದೆ. ಪ್ರಬಂಧದ ನೀತಿ ಶಿಫಾರಸುಗಳಲ್ಲಿ ಬೆಳೆ ನಷ್ಟವನ್ನು Pradhan Mantri Fasal Bima Yojana (ಪಿಎಂಎಫ್ಬಿವೈ) ಯೋಜನೆಗೆ ಸೇರಿಸುವುದು, ಡಿಜಿಟಲ್ ಮೌಲ್ಯಮಾಪನ, ತ್ವರಿತ ಪರಿಶೀಲನಾ ತಂಡಗಳು ಹಾಗೂ ಸಮುದಾಯ ಆಧಾರಿತ ತಡೆ ಕ್ರಮಗಳನ್ನು ಸೂಚಿಸಲಾಗಿದೆ. ಈ ವಿಷಯದ ಮೇಲೆ ಅವರ ಸಂಶೋಧನಾ ಲೇಖನವು ಪ್ರಕಟವಾಗಿರುವುದು ಗಮನಾರ್ಹವಾಗಿದೆ.
ಇದೇ ವೇಳೆ, ದಿವ್ಯಾ ಜಿ. ಗೌಡ ಅವರು “ಯಲ್ಲಾಪುರ ತಾಲ್ಲೂಕಿನ ಸಿದ್ದಿ ಸಮುದಾಯದಲ್ಲಿ ಡಿಜಿಟಲೀಕರಣ ಮತ್ತು ಆರ್ಥಿಕ ಸಬಲೀಕರಣ” ಎಂಬ ಪ್ರಬಂಧವನ್ನು ಪ್ರಸ್ತುತಪಡಿಸಿ ಗಮನ ಸೆಳೆದರು. ಅವರ ಅಧ್ಯಯನವು ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಆದಾಯ ವೃದ್ಧಿ ಮತ್ತು ಆರ್ಥಿಕ ಒಳಗೊಳ್ಳುವಿಕೆಯ ಮಹತ್ವವನ್ನು ವಿವರಿಸುತ್ತದೆ. ಇವರ ಸಂಶೋಧನಾ ಲೇಖನವೂ ಪ್ರಕಟಗೊಂಡಿದೆ.
ಈ ಇಬ್ಬರು ವಿದ್ಯಾರ್ಥಿನಿಯರು ಡಾ. ಓಂಪ್ರಕಾಶ ನಾಯಕ್ (ಐಕ್ಯುಎಸಿ ಸಂಯೋಜಕರು) ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದಾರೆ. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಆರ್. ಡಿ. ಜನಾರ್ಧನ್ ಅವರು ವಿದ್ಯಾರ್ಥಿಗಳಿಗೆ ಅಗತ್ಯ ಬೆಂಬಲ ಮತ್ತು ಪ್ರೋತ್ಸಾಹ ನೀಡಿದ್ದು, ಈ ಸಾಧನೆಗೆ ಪ್ರಮುಖ ಕಾರಣರಾಗಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಯಲ್ಲಾಪುರವು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸುವ ದಿಸೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮ್ಮೇಳನಗಳು, ಕಾರ್ಯಾಗಾರಗಳು ಹಾಗೂ ಐಕ್ಯುಎಸಿ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ.
ಈ ಸಾಧನೆ ಮಹಾವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ ಮತ್ತು ಸಂಶೋಧನಾ ವಾತಾವರಣಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.




Prathidvani Yellapura