
ಯಲ್ಲಾಪುರ : ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿ ನಿರ್ವಹಿಸುತ್ತಿರುವ ಡಾ.ಮಂಜುನಾಥ ಆರ್ ನಾಯ್ಕ ಅವರ ಪುತ್ರ ಲಿಖಿತ್ ಮಂಜುನಾಥ ನಾಯ್ಕಗೆ ಮೂಕ ಪ್ರಾಣಿಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಉರಗಗಳನ್ನು ರಕ್ಷಿಸುವ ಪ್ರವೃತ್ತಿ.

ಬಿ.ಇ ನಾಲ್ಕನೇ ವರ್ಷದಲ್ಲಿ ಓದುತ್ತಿರುವ 21 ವರ್ಷದ ಲಿಖಿತ್ ಮಂಜುನಾಥ ನಾಯ್ಕ ಬಾಲ್ಯದಿಂದಲೂ ಮೂಕಪ್ರಾಣಿಗಳೊಂದಿಗೆ ಅನ್ಯೋನ್ಯವಾಗಿ ಬೆಳೆದವನು. ಬಾಲ್ಯದಲ್ಲಿ ಅಜ್ಜ ದಿ.ರಾಮಚಂದ್ರ ನಾಯ್ಕರೊಂದಿಗೆ ಸದಾ ಪ್ರಾಣಿಗಳನ್ನು ಆರೈಕೆ ಮಾಡುವುದರಲ್ಲೇ ತೊಡಗಿಕೊಂಡು ತನ್ನಲ್ಲೂ ಪ್ರಾಣಿ ಪ್ರೀತಿಯನ್ನು ಮೈಗೂಡಿಸಿಕೊಂಡವನು.

ಬೀದಿ ಬದಿಯಲ್ಲಿ ನಾಯಿಯೊಂದು ಅನಾರೋಗ್ಯದಿಂದ ಬಳಲುತ್ತಿದ್ದರೆ ನಮಗೇಕೆ ಎಂದು ಮುಖ ತಿರುಗಿಸಿ ಹೋಗುವವರ ನಡುವೆ ಸ್ಥಳಕ್ಕೆ ತೆರಳಿ ಆರೈಕೆಯಲ್ಲಿ ತೊಡಗಿಕೊಳ್ಳುವ ಲಿಖಿತ್ , ಗಾಯಗೊಂಡಿದ್ದಲ್ಲಿ ಬ್ಯಾಂಡೇಜ್ ಕಟ್ಟುವುದು, ಆರೋಗ್ಯ ಸರಿಯಾಗುವವರೆಗೂ ತಮ್ಮ ಮನೆಯಲ್ಲೆ ಇರಿಸಿಕೊಳ್ಳುತ್ತಾನೆ.

ಪೆಟ್ಟಾಗಿ ಬಂದ ಅಳಿಲುಗಳಿಗೆ ನೀರು, ಔಷಧಿ ನೀಡುವುದು, ರೆಕ್ಕೆ ಮುರಿತಕ್ಕೆ ಒಳಗಾದ ಹದ್ದಿನ ರಕ್ಷಣೆ ಮಾಡಿ ಮುರಿದ ಮೂಳೆ ಸರಿಯಾಗುವವರೆಗೂ ಆರೈಕೆ ಮಾಡಿ ಹಾರಲು ಶಕ್ತವಾದ ನಂತರ ಕಾಡಿಗೆ ಬಿಡುವುದು. ಮನೆಯಲ್ಲಿ ಉರಗಗಳು ಸೇರಿದಾಗ ಅವುಗಳಿಗೆ ತೊಂದರೆಯಾಗದಂತೆ ರಕ್ಷಿಸಿ ಕಾಡಿಗೆ ಬಿಡುವುದು, ಮೂಕಪ್ರಾಣಿಗಳಿಗೆ ತಾಯಿ ಪ್ರೀತಿಯನ್ನು ನೀಡುವಷ್ಟರ ಮಟ್ಟಿಗೆ ಆತ್ಮೀಯತೆ ಬೆಳೆಸಿಕೊಳ್ಳುತ್ತಾನೆ. ಮನೆಯಲ್ಲೇ ಸಾಕಿರುವ ನಾಯಿಯೊಂದಕ್ಕೆ ತುತ್ತು ಮಾಡಿ ಅನ್ನ ತಿನ್ನಿಸುವುದು ನೋಡಿದರೆ ಮೂಕಪ್ರಾಣಿಗಳ ಮೇಲಿನ ಪ್ರೀತಿಯ ಆಳ ತಿಳಿಯುತ್ತದೆ.


ಇತ್ತೀಚಿಗೆ ಹಾವೊಂದು ಚರಂಡಿಯಲ್ಲಿ ಸಿಲುಕಿ ಪೆಟ್ಟು ಮಾಡಿಕೊಂಡು ನೋವು ಅನುಭವಿಸುತ್ತಿದ್ದಾಗ ಸ್ಥಳಕ್ಕೆ ತೆರಳಿ ರಕ್ಷಿಸಿದ್ದಲ್ಲದೇ ಯಾವ ಭಯವಿಲ್ಲದೇ ಹಾವಿನ ಮೈಯನ್ನೆಲ್ಲಾ ತೊಳೆದು ಔಷಧಿ ಹಚ್ಚಿ ಕಾಡಿಗೆ ಬಿಟ್ಟಿದ್ದಾನೆ.

ಒಟ್ಟಿನಲ್ಲಿ ತಂದೆ ಡಾ.ಮಂಜುನಾಥ ಉತ್ತರಕನ್ನಡ ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾ ಅತಿ ಹೆಚ್ಚು ಆರೋಗ್ಯ ಸೇವೆ ಸಲ್ಲಿಸಿದ ವ್ಯಕ್ತಿಯಾಗಿದ್ದಾರೆ ಸದ್ಯ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು ಅನಾರೋಗ್ಯದಿಂದ ಬಳಲುವ ವ್ಯಕ್ತಿಗಳಿಗೆ ಆತ್ಮೀಯತೆಯ ಮಾತುಗಳನ್ನಾಡುತ್ತಾ ಉತ್ತಮ ಚಿಕಿತ್ಸೆ ನೀಡಿ ಜನರೊಂದಿಗೆ ಚಿರಪರಿಚಿತರಾಗಿದ್ದು ಅವರ ಮಗ ಮೂಕಪ್ರಾಣಿಗಳಿಗೆ ಅಕ್ಕರೆ ತೋರಿ ಆರೈಕೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ.
Prathidvani Yellapura