

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಭುವನೇಶ್ವರದ ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯು
ಸ್ನಾತಕೋತ್ತರ ಪದವಿ ಹಾಗೂ ಪಿ.ಎಚ್.ಡಿ ಸಂಯೋಜಿತ ಕೋರ್ಸ್ಗಾಗಿ ನಡೆಸುವ ಪ್ರವೇಶಾತಿ ಪರೀಕ್ಷೆಯಲ್ಲಿ ಯಲ್ಲಾಪುರ ಮೂಲದ ವಿದ್ಯಾರ್ಥಿ ವಿನಾಯಕ ಗಾಂವ್ಕರ್ ದ್ವಿತೀಯ ರ್ಯಾಂಕ್ ಪಡೆಯುವ ಮೂಲಕ ಕೋರ್ಸ್ ಗೆ ಪ್ರವೇಶ ಪಡೆದಿದ್ದಾರೆ.
ಈ ಮೊದಲು ಸ್ನಾತಕೋತ್ತರ ಪದವಿಗಾಗಿ ನಡೆಯುವ ಜಂಟಿ ಪ್ರವೇಶಾತಿ ಪರೀಕ್ಷೆ (ಎಂಒ) ಯಲ್ಲಿ ಉತ್ತಮ ಅಂಕ ಗಳಿಸಿದ್ದ ವಿನಾಯಕ ಗಾಂವ್ಕರ್ ಭುವನೇಶ್ವರದ ನೈಸರ್ ಸಂಸ್ಥೆಯ ನೇರ ಪ್ರವೇಶಾತಿ ಸಂದರ್ಶನಕ್ಕಾಗಿ ಆಯ್ಕೆಯಾಗಿದ್ದರು. ಈ ನೇರ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ದೇಶದ ವಿವಿಧ ಭಾಗದ 60 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಪೈಕಿ ಯಲ್ಲಾಪುರದ ವಿನಾಯಕ ಗಾಂವ್ಕರ್ ಉತ್ತಮ ಸಾಧನೆ ಮಾಡಿದ್ದಾರೆ.
ಯಲ್ಲಾಪುರ ಪಟ್ಟಣದ ಸುಪ್ರಸಿದ್ಧ ಸಿವಿಲ್ ಇಂಜಿನಿಯರ್ ನರಸಿಂಹ ಗಾಂವ್ಕರ್ ಹಾಗೂ ಭಾರತಿ ಗಾಂವ್ಕರ್ ಅವರ ಪುತ್ರ ವಿನಾಯಕ ಸ್ಥಳೀಯ ವಿಶ್ವದರ್ಶನ ಸಂಸ್ಥೆಯಲ್ಲಿ ಹತ್ತನೆ ತರಗತಿಯವರೆಗೂ ಅಭ್ಯಸಿಸಿ ನಂತರ ಧಾರವಾಡದ ಜೆ ಎಸ್ ಎಸ್ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದರು. ಶಾಲಾದಿನಗಳಲ್ಲಿಯೇ ವಿಜ್ಞಾನದ ಆಳ ಅಧ್ಯಯನ ಮಾಡಬೇಕೆಂಬ ಹಂಬಲ ಇರಿಸಿಕೊಂಡಿದ್ದ ವಿನಾಯಕ ರಸಾಯನ ಶಾಸ್ತç ವಿಭಾಗದಲ್ಲಿ ಸಂಶೋಧನೆ ನಡೆಸಲು ಬಯಸಿದ್ದಾರೆ.
‘ಮೂಲ ವಿಜ್ಞಾನದ ಅಧ್ಯಯನ ಮತ್ತು ಸಂಶೋಧನೆಯು ಸುದೀರ್ಘವಾದುದು. ಆದರೂ ಇದರ ಇಂದಿನ ಅವಶ್ಯಕತೆಯನ್ನು ಅರಿತು ನಾನು ಈ ವಿಷಯದ ಅಧ್ಯಯನ ಆರಂಭಿಸಿದೆ’ ಎನ್ನುವ ವಿನಾಯಕ ಗಾಂವ್ಕರ್ ತಾವು ಕರೋನಾ ಸಂದರ್ಭದಲ್ಲಿ ಆನ್ ಲೈನ್ ಮೂಲಕವೂ ಬಿಡದೆ ನಡೆಸಿದ ಪರಿಶ್ರಮ ಹಾಗೂ ತನಗೆ ಬೆನ್ನೆಲುಬಾಗಿ ನಿಂತ ಶಿಕ್ಷಕರು ಮತ್ತು ಪೋಷಕರನ್ನು ಸ್ಮರಿಸಿಕೊಳ್ಳುತ್ತಾರೆ.
ರಾಷ್ಟçಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಯಲ್ಲಾಪುರ ನೆಲದ ಹಿರಿಮೆ ವಿನಾಯಕ ಗಾಂವ್ಕರ್ ಅವರನ್ನು ಧಾರವಾಡದ ಜೆ.ಎಸ್.ಎಸ್ ಕಾಲೇಜಿನ ಪ್ರಾಚಾರ್ಯ ವೈ ಜಯಮ್ಮ , ಯಲ್ಲಾಪುರ ತಾಲೂಕಿನ ಜನಪ್ರತಿನಿಧಿಗಳು, ಶಿಕ್ಷಣ ಸಂಸ್ಥೆಗಳು, ಶಿಕ್ಷಕ ವರ್ಗ, ಸಂಘ ಸಂಸ್ಥೆಗಳು ಹಾಗು ಸಮಸ್ತ ಜನರು ಹಾಗು ವಿವಿಧ ಕ್ಷೇತ್ರದ ಗಣ್ಯರು ಅಭಿನಂದಿಸಿದ್ದಾರೆ.
Prathidvani Yellapura