

ಪ್ರತಿಧ್ವನಿ ಯಲ್ಲಾಪುರ : ಸಮಾಜಕ್ಕೆ ಹಿತವನ್ನೇ ಬಯಸುವ ಆಶಯವನ್ನು ಕೇವಲ ಮಾತಿಗೆ ಸೀಮಿತವಾಗಿಸದೇ, ಕೃತಿಯ ಮೂಲಕ ವಿಶ್ವದರ್ಶನ ಸೇವಾ ತೋರಿಸುತ್ತಿದೆ. ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡುತ್ತಿದೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳಲ್ಲಿಯೂ ಮುಂಚೂಣಿಯಲ್ಲಿದೆ ಎಂದು ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್ ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.

ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವದರ್ಶನ ಸೇವಾ, ಹುಬ್ಬಳ್ಳಿಯ ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಹೃದಯರೋಗ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ವಿಶ್ವದರ್ಶನ ಸೇವಾ ಮೂಲಕ ಅನೇಕ ಆರೋಗ್ಯ ಸಂಬಂಧಿ ಸೇವೆಗಳನ್ನು, ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಅನಾರೋಗ್ಯಕ್ಕೆ ಒಳಗಾದ ಮೇಲೆ ಚಿಕಿತ್ಸೆಗೆ ಹೋಗುವ ಬದಲು, ಶಿಸ್ತುಬದ್ಧ ಜೀವನ, ಮುನ್ನೆಚ್ಚರಿಕೆಯ ಮೂಲಕ ರೋಗ ಬರದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಪ್ರತಿಯೊಬ್ಬರೂ ಗಂಭೀರವಾಗಿ ಗಮನ ಹರಿಸಬೇಕು. ಗಟ್ಟಿಯಾದ ಮನಸ್ಸಿನಿಂದ ಶಿಸ್ತುಬದ್ಧ ಜೀವನ ಶೈಲಿ ರೂಢಿಸಿಕೊಂಡರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಆರೋಗ್ಯ ವಿಮೆಯನ್ನು ಪ್ರತಿಯೊಬ್ಬರೂ ಮಾಡಿಸಿಕೊಂಡಲ್ಲಿ, ಅನಾರೋಗ್ಯದ ಸಂದರ್ಭದಲ್ಲಿ ಅನುಕೂಲವಾಗುತ್ತದೆ ಎಂದರು.
ಎಲ್ಎಸ್ಎಂಪಿ ಸೊಸೈಟಿ, ವಿಶ್ವದರ್ಶನ ಸೇವಾದ ಸಹಯೋಗದಲ್ಲಿ ವಿಹಾನ್ ಆಸ್ಪತ್ರೆಯ ಆರೋಗ್ಯ ಕಾರ್ಡ್ ಮಾಡಿಸುವ ಆಲೋಚನೆಯಿದೆ. ಅದರ ಮೂಲಕ ವಿಹಾನ್ ಆಸ್ಪತ್ರೆಯಲ್ಲಿ ಯಲ್ಲಾಪುರ ಭಾಗದ ರೋಗಿಗಳಿಗೆ ಆದ್ಯತೆಯ ಹಾಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವಂತೆ ಮಾಡುವ ಕುರಿತು ಪ್ರಸ್ತಾಪಿಸಿ, ಇದಕ್ಕೆ ಕೈಜೋಡಿಸುವಂತೆ ಆಸ್ಪತ್ರೆಯ ಪ್ರಮುಖರಲ್ಲಿ ಮನವಿ ಮಾಡಿದರು.
ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಮಹಾಂತೇಶ ಉಳ್ಳಾಗಡ್ಡಿ, ಪುಂಡಲೀಕ ಪೂಜಾರ, ಮದನೂರು ಸಹಕಾರಿ ಸಂಘದ ಅಧ್ಯಕ್ಷ ಮಹೇಶ ದೇಸಾಯಿ ಉಪಸ್ಥಿತರಿದ್ದರು.
ವಿಶ್ವದರ್ಶನ ಸೇವಾದ ಸಂಯೋಜಕ ಶ್ರೀರಾಮ ಲಾಲಗುಳಿ ಸ್ವಾಗತಿಸಿದರು. ಶಿವಪ್ರಸಾದ ನಿರ್ವಹಿಸಿದರು. ಮುಕ್ತಾ ಶಂಕರ ವಂದಿಸಿದರು.
ನಂತರ ನಡೆದ ಶಿಬಿರದಲ್ಲಿ ಶಿಬಿರದಲ್ಲಿ 132 ಜನರು ತಪಾಸಣೆಗೆ ಒಳಗಾಗಿದ್ದು 20 ಜನರಿಗೆ ಹೆಚ್ಚಿನ ಚಿಕಿತ್ಸೆ ಪಡೆಯುವಮತೆ ಸೂಚಿಸಲಾಗಿದೆ.








Prathidvani Yellapura