
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕನ್ನಡ ವೈಶ್ಯ ಸಮಾಜ ಬಾಂಧವರ ಪ್ರೀತಿಯ “ದಾಮಣ್ಣಾ”, ಯಲ್ಲಾಪುರ ಸಮಸ್ತ ನಾಗರಿಕರ ಪ್ರೀತಿಯ “ಅಂಕೋಲೆ ಶೆಟ್ರು” ಎಂದೇ ಪ್ರಸಿದ್ದಿ ಪಡೆದಿದ್ದ ದಾಮೋದರ್ ಶೆಟ್ಟಿ ಅವರು ಬುಧವಾರ ನಿಧನರಾಗಿದ್ದು ಅಪಾರ ಬಂಧುಬಳಗ ಹಿತೈಷಿಗಳನ್ನು ಅಗಲಿದ್ದಾರೆ.
ಮೃತರು ಯಲ್ಲಾಪುರದ ಹಿರಿಯರು ದಿವಂಗತರಾದ ಕಾಮಾಕ್ಷಿ ಗಜಾನನ ಭಟ್, ನಾಗೇಶ್ ಶಾನಬಾಗ್ ಹಾಗು ಇನ್ನಿತರ ಪ್ರಮುಖರ ಶಾಲಾ ಜೀವನದ ಗೆಳೆಯರಾಗಿದ್ದರು.
ಯಲ್ಲಾಪುರದ ಹೃದಯಭಾಗದಲ್ಲಿ ಕಿರಾಣಿ ಅಂಗಡಿಯನ್ನು ನಡೆಸುತ್ತಾ ತಾಲೂಕಿನ ನಾಗರಿಕರ ಪರಿಚಯ-ಪ್ರೀತಿಯನ್ನು ಸಂಪಾದಿಸಿದ್ದರು. ಯಲ್ಲಾಪುರದಲ್ಲಿ ಕನ್ನಡ ವೈಶ್ಯ ಸಮಾಜದ ಸಂಸ್ಥಾಪಕ ಅಧ್ಯಕ್ಷರಾಗಿ ಸಂಘವನ್ನು ಕಟ್ಟಿ ಬೆಳೆಸಿದ್ದರು. ವೈಶ್ಯ ಸಮಾಜದ ಶೃಂಗೇರಿ ಪ್ರವಾಸ, ಮಾಘಶುದ್ಧ ಪ್ರತಿಪದೆ ಕಾರ್ಯಕ್ರಮದಲ್ಲಿ ಅವರ ಮುಂದಾಳತ್ವ, ಆಸಕ್ತಿ, ಪರಿಶ್ರಮ ಎಲ್ಲರಿಗೂ ಮಾರ್ಗದರ್ಶಕವಾಗಿರುತ್ತಿತ್ತು. ಕಾರ್ಯಕ್ರಮ ತಯಾರಿಗಾಗಿ ಮನೆಮನೆಯನ್ನು ಸಂಪರ್ಕಿಸಿ ಎಲ್ಲರನ್ನೂ ಹುರುದುಂಬಿಸುತ್ತಿದ್ದರು. ಸದಾ ನಗುಮೊಗ, ಪ್ರೀತಿ ತುಂಬಿದ ಮಾತು ಇವರ ಸಹಜ ಸ್ವಭಾವವೇ ಆಗಿತ್ತು. ಹಣ ಸಂಪಾದನೆಗಿಂತ ಜನರ ಪ್ರೀತಿ ಸಂಪಾದನೆಯೇ ಶ್ರೇಷ್ಠ ಎಂದು ಹೇಳುತ್ತಿದ್ದರು. ಬದುಕಿನುದ್ದಕ್ಕೂ ಪ್ರಾಮಾಣಿಕತೆ, ವಿಶ್ವಾಸವನ್ನು ಸಂಪಾದಿಸಿದ್ದರು.
ಮೃತರಿಗೆ 84 ವರ್ಷ ವಯಸ್ಸಾಗಿದ್ದು, ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಕಿರಣ್ ಮತ್ತು ಅರುಣ್ ಹಾಗು ಅಪಾರ ಬಂಧುಗಳು ಹಿತೈಷಿಗಳನ್ನು ಅಗಲಿದ್ದಾರೆ. ಸಮಾಜದ ಬಂಧುಗಳು, ಸಾರ್ವಜನಿಕರು,ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
Prathidvani Yellapura