
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಬಾಯಲ್ಲಿ ರಾಮಮಂತ್ರ ನಡೆಯಲ್ಲಿ ಬಡವರ ರಕ್ತ ಹೀರುವ ರಾವಣ ತಂತ್ರ ಬಿಜೆಪಿ ಕುತಂತ್ರವಾಗಿದೆ. ಬಡವರ ಪರವಾಗಿ ಧ್ವನಿ ಎತ್ತುವ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ ಗೆಲ್ಲಿಸಿ, ದೇಶ ಉಳಿಸಿ ‘ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಹೇಳಿದರು.
ಅವರು ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಭಾವಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಪ್ರಮುಖ ಎಂ.ಜಿ.ಭಟ್ಟ ನಂದೊಳ್ಳಿ ಇವರ ನೇತ್ರತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಬಂದರೆ, 10 ಕೆಜಿ. ಅಕ್ಕಿ, 200 ಯುನಿಟ್ ವಿದ್ಯುತ್, ಮಹಿಳೆಯರಿಗೆ 2 ಸಾವಿರ, ನಿರುದ್ಯೋಗಿಗಳಿಗೆ 3 ಸಾವಿರ ರೂ. ಹಾಗೂ ಇನ್ನೂ ಹಲವಾರು ಗ್ಯಾರಂಟಿ ನೀಡಿದ ಯೋಜನೆಗಳ ಮೊತ್ತ ಪ್ರತಿ ಕುಟುಂಬಕ್ಕೆ 3 ಲಕ್ಷ ರೂಪಾಯಿ ಆಗುತ್ತದೆ ಎಂದ ಅವರು 40% ಕಮೀಶನ್ ಸರ್ಕಾರದವರು ರಾತ್ರಿ ಬಂದು ಹಣ ಹಂಚಿ ಆಣೆ ಮಾಡಿಸುತ್ತಾರೆ. ಆಮಿಷಕ್ಕೆ ಬಲಿಯಾಗಬೇಡಿ. ಹಣಕೊಟ್ಟರೆ ತೆಗೆದುಕೊಳ್ಳಿ, ಮತ ಕಾಂಗ್ರೆಸ್ ಗೆ ಹಾಕಿ ಎಂದರು.
ಕಾಂಗ್ರೆಸ ಮುಖಂಡ ದಿಲೀಪ್ ರೋಖಡೆ ಮಾತನಾಡಿ ‘ ಮೀಸಲಾತಿ ಕಾರಣದಿಂದ ಗ್ರಾಮ ಪಂಚಾಯಿತಿಗೆ ಎಲ್ಲೆಲ್ಲಿಯವರೋ, ಎಲ್ಲೋ ಬಂದು ಚುನಾವಣೆಗೆ ನಿಲ್ಲುತ್ತಾರೆ. ಇವರಿಂದ ಗ್ರಾಮದ ಅಭಿವೃದ್ಧಿ ಹೇಗೆ ಸಾಧ್ಯ. ಆಮಿಷಕ್ಕೆ ಬಲಿಯಾಗಿ ಕೆಲಸ ಮಾಡದವರನ್ನು ಮನೆಗೆ ಕಳಿಸುತ್ತಾರೆ, ಬಣ್ಣದ ಮಾತಿಗೆ ಮರುಳಾಗಿ ಅಂತವರನ್ನು ಆಯ್ಕೆ ಮಾಡುತ್ತೇವೆ. ಈ ಪ್ರಜ್ಞೆ ಮತದಾರರಲ್ಲಿ ಬಂದರೆ ಕೆಲಸಗಾರರನ್ನು ಆಯ್ಕೆ ಮಾಡುತ್ತಾರೆ’ ಎಂದರು.
ಪ್ರಚಾರ ಸಮಿತಿ ಅಧ್ಯಕ್ಷ ಅನಿಲ ನಾಯ್ಕ, ಉಸ್ತುವಾರಿ ಎಂ.ಜಿ.ಭಟ್ಟ ನಂದೊಳ್ಳಿ ಮಾತನಾಡಿದರು. ಜಿಲ್ಲಾ ಸೇವಾ ದಳದ ಅಧ್ಯಕ್ಷ ಪ್ರಶಾಂತ ಸಭಾಹಿತ ಸ್ವಾಗತಿಸಿ ನಿರೂಪಿಸಿದರು.




Prathidvani Yellapura