Breaking News

ಯಲ್ಲಾಪುರದಲ್ಲಿ ನಡೆದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಘಟಕದ ಪತ್ರಿಕಾ ದಿನಾಚರಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಪತ್ರಿಕೊದ್ಯಮಕ್ಕೆ ಉತ್ತರಕನ್ನಡದ ಕೊಡುಗೆ ಅತ್ಯಧಿಕ. ಇಲ್ಲಿನವರು ಪತ್ರಿಕೊದ್ಯಮವನ್ನು ವೃತ್ತಿಯಾಗಿಸಿಕೊಂಡವರಲ್ಲ. ನಂತರ ವೃತ್ತಿಯಾಗಿಸಿಕೊಂಡು ಬಹಳಷ್ಟು ಯಶಸ್ಸು ಸಾಧಿಸಿದ್ದಾರೆ. ಪತ್ರಕರ್ತನಾದವನು ಸತ್ಯ ಶೋಧಕನಾಗಿರಬೇಕು, ತಾನು ಅನುಭವಿಸಿ ಅಂತಿಮ ಸತ್ಯವೇನೆಂಬುದನ್ನು ಅರ್ಥ ಮಾಡಿಕೊಂಡು ವರದಿ ಮಾಡಬೇಕು. ಇಂತಹ ವ್ಯಕ್ತಿಗಳನ್ನು ಪತ್ರಕರ್ತರೆನ್ನಬಹುದು. ಪತ್ರಕರ್ತರು ಸಮಾಜದ ಆಗು ಹೋಗುಗಳನ್ನು ಅರಿಯುವಂತಿದ್ದು, ಇವರು ಸಂಚಾರಿಯಾಗಿರಬೇಕಲ್ಲದೇ, ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಅಲ್ಲದೇ ಪತ್ರಕರ್ತರಿಗೆ ತಮ್ಮ ನೆಲದ ಕುರಿತು ಹಾಗೂ ಇಲ್ಲಿನ ಸಂಸ್ಕೃತಿಯ ಕುರಿತು ಅಭಿಮಾನವಿರಬೇಕು ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ, ವಿಸ್ತಾರ ನ್ಯೂಸ್ ಮೀಡಿಯಾದ ಪ್ರಧಾನ ಸಂಪಾದಕರೂ ಆದ ಹರಿಪ್ರಕಾಶ ಕೋಣೆಮನೆ ಹೇಳಿದರು.


ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಯಲ್ಲಾಪುರದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಘಟಕ ಮತ್ತು ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಸಾರ್ವಜನಿಕರು ಯಾವುದೇ ಕಾರ್ಯಕ್ರಮಗಳನ್ನು ಕೇವಲ ಸಂಖ್ಯಾತ್ಮಕವಾಗಿ ನೋಡದೇ, ಗುಣಾತ್ಮಕವಾಗಿ ಅರಿಯುವ ಮನೋಭಾವ ಬೆಳೆಸಿಕೊಳ್ಳಬೇಕೆಂದ ಅವರು, ನಾಗರಾಜ ಇಳೇಗುಂಡಿಯವರ ಸಾರಥ್ಯದಲ್ಲಿ ಆರಂಭವಾಗಲಿರುವ ವಿಶ್ವದರ್ಶನ ಪತ್ರಿಕೋದ್ಯಮ ಡಿಪ್ಲೋಮಾ ಶಾಲೆ ರಾಜ್ಯದಲ್ಲಿಯೇ ಮಾದರಿಯಾಗುವುದೆಂದು ವಿಶ್ವಾಸವಿದೆ. ನಮ್ಮ ಪತ್ರಿಕೊದ್ಯಮ ಶಾಲೆ ಪ್ರತಿಯೋರ್ವ ಪತ್ರಕರ್ತರದಾಗಿದ್ದು, ಇದನ್ನು ಬೆಳೆಸುವ ಜವಾಬ್ದಾರಿ ಜಿಲ್ಲೆಯ ಸಮಸ್ತ ಜನತೆಯದಾಗಿದೆ ಎಂದರು


`ಮಾಧ್ಯಮದಲ್ಲಿ ಇಂದಿನ ಸವಾಲುಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ವಿಜಯವಾಣಿ ದೈನಿಕದ ಸುದ್ದಿ ಸಂಪಾದಕರೂ, ವಿಶ್ವದರ್ಶನ ಪತ್ರಿಕೋದ್ಯಮ ವಿಭಾಗದ ನಿಯೋಜಿತ ಪ್ರಾಂಶುಪಾಲರೂ ಆದ ನಾಗರಾಜ್ ಇಳೇಗುಂಡಿನ ಮಾತನಾಡಿ, ಹಿಂದಿನಿಂದಲೂ ಮುದ್ರಣ ಮಾಧ್ಯಮ ಮನುಷ್ಯನ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಇಂದು ಮುದ್ರಣ, ಡಿಜಿಟಲ್ ಹಾಗೂ ಟಿವಿ ಮಾಧ್ಯಮಗಳ ಸಂಖ್ಯೆ ಅಪಾರವಾಗಿದ್ದು, ಡಿಜಿಟಲ್ ಹಾಗೂ ಟಿವಿಗಳಲ್ಲಿ ಕ್ಷಣಾರ್ಧದಲ್ಲಿ ಪ್ರ‍್ರಕಟಗೊಳ್ಳುವ ಸುದ್ದಿ ವಿಶ್ವಾಸಾರ್ಹತೆಯ ಕೊರತೆ ಎದುರಿಸುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ನಿರ್ಬಂಧಗಳ ನಡುವೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ದೊರೆಯಿತು. ಡಿಜಿಟಲ್ ಮಾಧ್ಯಮ ಜನರ ಪರ್ಯಾಯ ಮಾಧ್ಯಮವಾಗಿ ಅವರಿಗೆ ಶಕ್ತಿ ನೀಡಲಾರಂಭಿಸಿತು. ದೂರದರ್ಶನ ಮತ್ತು ಗಣಕೀಕೃತ ಮಾಧ್ಯಮಗಳಲ್ಲಿ ತಕ್ಷಣ ಪ್ರಸಾರವಾಗುವ ಸುದ್ದಿಗಳನ್ನು ಮರುದಿನ ಪತ್ರಿಕೆಯಲ್ಲಿ ಯಾರು ಓದುತ್ತಾರೆಂಬುದು ಮುದ್ರಣ ಮಾಧ್ಯಮದ ಸವಾಲಾಗಿದೆ.
ಅನೇಕ ಪತ್ರಿಕೆಗಳು ಸ್ಥಗಿತವಾಗುತ್ತಿವೆ. ಆದರೂ ಮುದ್ರಣ ಮಾಧ್ಯಮ ತರಾತುರಿಯ ವರದಿ ನೀಡುವ ಬದಲಿಗೆ ಸತ್ಯಾನ್ವೇಷಣೆಯ ಸುದ್ದಿಗಳನ್ನು ಪ್ರಕಟಿಸುವುದು ಹಲವು ಸವಾಲುಗಳ ನಡುವೆ, ಓದುಗರ ವಿಶ್ವಾಸಗಳಿಸಲು ಸಾಧ್ಯವಾಗಿದೆ. ಇದನ್ನು ಉಳಿಸಿಕೊಳ್ಳಬೇಕೆಂದರೆ ಸುದ್ದಿಗಳ ಪ್ರಕಟಣೆಗೂ ಮುನ್ನ ಸಾಧ್ಯವಿದ್ದಷ್ಟು ಸತ್ಯತೆಯಿಂದ ಕೂಡಿರಬೇಕು. ಡಿಜಿಟಲ್ ಮಾಧ್ಯಮ ಕೆಲವು ವಿವಾದಗಳಿಂದ ಕೂಡಿದ್ದು, ಸೂಕ್ಷ್ಮತೆಯನ್ನರಿತು ಸತ್ಯ ಹಾಗೂ ನೈಜತೆಯ ವಾಸ್ತವಿಕ ವರದಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ಪ್ರಕಟಿಸುವುದರಿಂದ ಓದುಗರ ವಿಶ್ವಾಸ ಉಳಿಸಿಕೊಳ್ಳುಬಹುದು ಎಂದರು.


ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಘಟಕಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿ, ವಾಟ್ಸಪ್ ಮತ್ತು ಇನ್ನಿತರ ಮೂಲಗಳಿಂದ ಸುದ್ದಿ ಸಿಗುತ್ತಿರುವ ಕಾರಣ ಇಂದು ವರದಿಗಾರರು ಸ್ಥಳಕ್ಕೆ ತೆರಳಿ ವರದಿ ಮಾಡಲು ಆಲಸಿಗಳಾಗುತ್ತಿದ್ದಾರೆ. ನಾವು ಬೇರೆಯವರ ಬಗ್ಗೆ ಬರೆಯುವಾಗ, ನಮ್ಮ ಬಗ್ಗೆ ಸ್ವತಃ ಅರಿವು ಹೊಂದಬೇಕು ಎಂದ ಅವರು, ಇಂದು ಪ್ರಶಸ್ತಿಗಳೂ ಕೂಡ ತಮಗೆ ಬೇಕಾದರವರಿಗೆ ನೀಡುವ ವ್ಯವಸ್ಥೆ ಆಗುತ್ತಿರುವುದು ವಿಪರ್ಯಾಸ. ಪತ್ರಕರ್ತರು ಯಾವುದೇ ಸುದ್ದಿ ಪ್ರಕಟಿಸುವಾಗ ಕಾರ್ಯಕ್ರಮದ ಸಂದೇಶ ಜನರಿಗೆ ತಲುಪಿಸುವ ಕುರಿತು ಯೋಚಿಸಬೇಕು ಎಂದರು.


ಮಲೇನಾಡು ಸೊಸೈಟಿ ಅಧ್ಯಕ್ಷ ಎಂ.ಅರ್ ಹೆಗಡೆ ಕುಂಬ್ರೀಗುಡ್ಡೆ, ತಾಳಮದ್ದಲೆ ಅರ್ಥಧಾರಿ ಎಂ.ಎನ್ ಹೆಗಡೆ ಹಳವಳ್ಳಿ, ನಿವೃತ್ತ ತಹಶೀಲ್ದಾರ ಡಿ.ಜಿ ಹೆಗಡೆ, ವೈದ್ಯೆ ಡಾ.ಸುಚೇತಾ ಮದ್ಗುಣಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಅಜಯ ಭಾರತೀಯ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ, ವಿಶ್ವದರ್ಶನ ಕೇಂದ್ರೀಯ ಶಾಲೆಯ ಪ್ರಾಚಾರ್ಯ ಮಹಾದೇವಿ ಭಟ್ಟ, ಮತ್ತಿತರರು ಉಪಸ್ಥಿತರಿದ್ದರು.


ಕೆ.ಜೆ.ಯು ಉಪಾಧ್ಯಕ್ಷ ವಿ.ಜಿ ಗಾಂವ್ಕರ ಸ್ವಾಗತಿಸಿದರು, ಕಾರ್ಯದರ್ಶಿ ಕೇಬಲ್ ನಾಗೇಶ ನಿರ್ವಹಿಸಿದರು. ರಾಜ್ಯ ಸಮಿತಿ ಸದಸ್ಯ ನಾಗರಾಜ ಮದ್ಗುಣಿ ವಂದಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *