
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ಧಿ, ರಾಜಕಾರಣಿ , ಮಾಜಿ ಸಚಿವ ಆರ್.ವಿ ದೇಶಪಾಂಡೆ ಯಲ್ಲಾಪುರ ವಿಧಾನಸಭಾ ಚುನಾವಣಾ ಕಣಕ್ಕೆ ಎಂಟ್ರಿ ಕೊಟ್ಟಿದ್ದು ಈ ಬಾರಿ ಚುನಾವಣೆ ಘೋಷಣೆಯ ನಂತರ ಯಲ್ಲಾಪುರ ಕಾಂಗ್ರೆಸ್ ಕಚೇರಿಗೆ ಇದೇ ಮೊದಲ ಬಾರಿ ಆಗಮಿಸಿ ಬಹುಸಮಯದ ವರೆಗೆ ಕಾರ್ಯಕರ್ತರೊಂದಿಗೆ ನೇರಾನೇರ ಚರ್ಚೆ ನಡೆಸಿದರು.
ಉತ್ತರಕನ್ನಡ ಜಿಲ್ಲೆಯ ರಾಜಕಾರಣದಲ್ಲಿ ಆರ್.ವಿ.ಡಿ ಅವರಿಗೆ ವಿಶೇಷ ಸ್ಥಾನಮಾನವಿದೆ. ಅದರಲ್ಲೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ವಿಚಾರ ಬಂದರೆ ಆರ್.ವಿ ದೇಶಪಾಂಡೆ ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಯಾವುದೇ ನಿರ್ಧಾರ ಅಸಾಧ್ಯ. ಸದ್ಯ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ವಿ.ಎಸ್.ಪಾಟೀಲ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದು ಇದೇ ಮೊದಲ ಬಾರಿಗೆ ಯಲ್ಲಾಪುರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಅಭ್ಯರ್ಥಿ ವಿ.ಎಸ್.ಪಾಟೀಲ ಮತ್ತು ಟಿಕಟ್ ಆಕಾಂಕ್ಷಿಯಾಗಿದ್ದ ಉದ್ಯಮಿ ಶ್ರೀನಿವಾಸ ಭಟ್ಟ ಧಾತ್ರಿ ಅವರೊಂದಿಗೆ ಸ್ಥಳೀಯ ಮುಖಂಡರೊಡಗೂಡಿ ಹಲವು ಸುತ್ತಿನ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್ ಗಾಂವ್ಕರ್, ಪಕ್ಷದ ಪ್ರಮುಖ ಶ್ರೀನಿವಾಸ ಭಟ್ಟ ಧಾತ್ರಿ, ಡಿಸಿಸಿ ಸದಸ್ಯ ಉಲ್ಲಾಸ ಶಾನಭಾಗ, ಸೇವಾದಳ ಪ್ರಮುಖ ಪ್ರಶಾಂತ ಸಬಾಹಿತ, ದಿಲೀಪ್ ರೋಖಡೆ, ಅನಿಲಕುಮಾರ ನಾಯ್ಕ, ಅಣ್ಣಪ್ಪ ಮರಾಠಿ, ರವಿ ನಾಯ್ಕ ಇಂಜಿನಿಯರ್, ಮಹಿಳಾ ಪ್ರಮುಖರಾದ ಪೂಜಾ ನೇತ್ರೇಕರ, ಸರಸ್ವತಿ ಗುನಗಾ, ಮುಷರತ್ ಹಾಗೂ ಇನ್ನಿತರ ಪ್ರಮುಖರು, ಎಲ್ಲಾ ಬೂತ್ಮಟ್ಟದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದೊಂದೇ ನಮ್ಮ ಮುಂದಿರುವ ಗುರಿಯಾಗಿದ್ದು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಚುನಾವಣೆ ಎದುರಿಸಬೇಕಿದೆ. ಪ್ರತಿ ಬೂತ್ ಮಟ್ಟದಿಂದಲೂ ಕಾರ್ಯಕರ್ತರು ಅವಿಶ್ರಾಂತ ಕಾರ್ಯ ನಿರ್ವಹಿಸಬೇಕಿದ್ದು ರಾಜ್ಯ ಮತ್ತು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರ ಅಲೆ ಇದ್ದು ಗೆಲುವಿನ ಉತ್ತಮ ವಾತಾವರಣವಿದೆ. ಇಂತಹ ಸನ್ನಿವೇಶದಲ್ಲಿ ಕಾರ್ಯಕರ್ತರು ಪಕ್ಷದ ಬದ್ಧತೆಗಾಗಿ ಅಭ್ಯರ್ಥಿಯ ಗೆಲುವಿಗಾಗಿ ಪಣತೊಟ್ಟು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ.ಈ ಚುನಾವಣಾ ಯಜ್ಞದಲ್ಲಿ ಪ್ರತಿಹಂತದಲ್ಲೂ ನಿಮ್ಮೊಂದಿಗೆ ನಾನಿದ್ದೇನೆ. ಎಲ್ಲರೂ ಒಂದಾಗಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶ್ರಮಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.




Prathidvani Yellapura