




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಬಡವರ, ರೈತರ, ಕಾರ್ಮಿಕರ ಪರವಾದ ಸುಭದ್ರವಾದ ಆಡಳಿತ ನೀಡುವ ಜನಸಾಮಾನ್ಯರ ಪಕ್ಷ ಕಾಂಗ್ರೆಸ್ ಎಂಬುದು ಈ ದೇಶದ ಹೆಮ್ಮೆಯಾಗಿದೆ. ಈಗಲು ಈ ಭಾಗದ ಜ್ವಲಂತಸಮಸ್ಯೆ ಅತಿಕ್ರಮಣದ ಕಷ್ಟಗಳನ್ನು ಪ್ರಸ್ತುತ ಕೇಂದ್ರ ಸರ್ಕಾರ ಬಗೆಹರಿಸುವಲ್ಲಿ ವಿಫಲವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಮೈತ್ರಿ ಸರ್ಕಾರ ಬಂದಲ್ಲಿ ಅತಿಕ್ರಮಣ ಸಮಸ್ಯೆ ಕಟಿಬದ್ದವಾಗಿ ಬಗೆಹರಿಸಲಿದ್ದೇವೆ. ಇದು ಕಾಂಗ್ರೆಸ್ ವಾಗ್ದಾನ ಎಂದು ಕಾಂಗ್ರೆಸ್ ಹಿರಿಯ ರಾಜಕಾರಣಿ ಹಳಿಯಾಳ ಶಾಸಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.

ಅವರು ಪಟ್ಟಣದ ಎಪಿಎಂಸಿ ಅಡಿಕೆ ಭವನದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ರಾಜ್ಯದಲ್ಲಿ ಪಂಚ ಗ್ಯಾರಂಟಿ ಜಾರಿಗೆ ತಂದುದರಿಂದ ಹಣದ ಕೊರತೆಯಾಗಿ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಬಿಜೆಪಿ ಸುಳ್ಳು ಪ್ರಚಾರಕ್ಕೆ ಯಾರು ಬೆಲೆಕೊಡದೇ ವಸ್ತು ಸ್ಥಿತಿ ಅರ್ಥ ಮಾಡಿಕೊಳ್ಳಿ. ಅಭಿವೃದ್ಧಿಗೆ ಯಾವುದೆ ಹಣದ ಕೊರತೆಯಾಗಿಲ್ಲ ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಸಾಗುತ್ತಿವೆ. ಕಾಂಗ್ರೆಸ್ ನುಡಿದಂತೆ ನಡೆವ ಪಕ್ಷ, ಅದಕ್ಕಾಗಿ ನಮ್ಮ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಗೆಲ್ಲಿಸಲು ಶ್ರಮವಹಿಸಬೇಕಿದೆ ಎಂದು ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಹೇಳಿದರು.

ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಪ್ರತಿ ಮನೆಗು ತಲುಪುವಂತೆ ಅನುಷ್ಟಾನ ಗೊಳಿಸುತ್ತಿರುವ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಬಡವರ ಮತ್ತು ರೈತರ ಪರವಾಗಿದ್ದು ಜನತೆ ಇದರ ಋಣ ತೀರಿಸಲು ಲೋಕ ಸಭಾ ಚುನಾವಣೆಯಲ್ಲಿ ತಮ್ಮ ಕೃತಜ್ಞತೆಯ ಮತಗಳನ್ನು ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ನೀಡಿ ಅತ್ಯಧಿಕ ಬಹುಮತದಿಂದ ಆರಿಸ ತರುವುದು ಶತ ಸಿದ್ದ ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಗೆದ್ದು ಲೋಕಸಭೆಗೆ ತೆರಳಿದ ಬಿಜೆಪಿ ಸಂಸದರು ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಹೊರತು ಯಾವುದೆ ನ್ಯಾಯ ಒದಗಿಸಲಿಲ್ಲ ಜನತೆ ಈ ಬಾರಿ ಆ ತಪ್ಪು ಮಾಡದೆ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಪ್ರಚಂಡ ಬಹುಮತದಿಂದ ಆರಿಸಲಿದ್ದಾರೆ ಎಂದು ಅತಿಕ್ರಮಣ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಲೋಕಸಭಾ ಚುನಾವಣಾ ಕಣ ರಂಗೇರುತ್ತಿದ್ದು ದಿನಾಂಕ 16 ರಂದು ಕಾಂಗ್ರೆಸ್ ಅಭ್ಯರ್ಥಿ ಡಾ,ಅಂಜಲಿ ನಿಂಬಾಳ್ಕರ್ ನಾಮಪತ್ರ ಸಲ್ಲಿಸಿದ್ದಾರೆ ಈ ಸಂಬಂಧ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಯಶಸ್ವಿಗೊಳಿಸುವ ಕುರಿತು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಭಟ್ ಮೆಣಸುಪಾಲ್ ಮತ್ತು ಮಾಜಿ ಶಾಸಕ ವಿ.ಎಸ್ ಪಾಟೀಲ ಅವರೊಂದಿಗೆ ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಕೆಲಕಾಲ ವೇದಿಕೆಯಲ್ಲಿ ಗಂಭೀರ ಚರ್ಚೆ ನಡೆಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ಕಿರವತ್ತಿಯ ಕಾಂಗ್ರೆಸ್ ಪಕ್ಷದ ಪ್ರಮುಖ ವಿಲ್ಸನ್ ಫರ್ನಾಂಡಿಸ್ ನೇತೃತ್ವದಲ್ಲಿ ಹಲವು ಕಾರ್ಯಕರ್ತರು ಆರ್.ವಿ ದೇಶಪಾಂಡೆ ಹಾಗು ಬೀಮಣ್ಣ ನಾಯ್ಕ ಅವರಿಗೆ ಶಾಲು ಹೊದಿಸಿ , ಪೇಟ ತೊಡಿಸಿ ಸನ್ಮಾನಿಸಿದರು.

ಈ ಸಂದರ್ಭದ ವೇದಿಕೆಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಭಟ್ ಮೆಣಸುಪಾಲ್, ಯುವನಾಯಕ ವಿವೇಕ ಹೆಬ್ಬಾರ್, ಮುಖಂಡರಾದ ವೆಂಕಟೇಶ ಹೆಗಡೆ ಹೊಸಬಾಳೆ, ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಬಾಬು ಗೌಡ, ರಾಜ್ಯ ನಾಯಕ ನಾಗರಾಜ ನಾರ್ವೇಕರ, ಪ್ರಮುಖರಾದ ಶ್ರೀನಿವಾಸ ಭಟ್ಟ ಧಾತ್ರಿ, ಅನಿಲ್ ನಾಯ್ಕ ಇಡಗುಂದಿ, ದಿಲೀಪ ರೋಖಡೆ, ಸರಸ್ವತಿ ಗುನಗಾ, ನರ್ಮದಾ ನಾಯ್ಕ, ಕೈಸರ್ ಸೈಯದ್, ಫೈರೋಜ್ ಶೇಖ, ಲಾರೆನ್ಸ್ ಸಿದ್ದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿ.ಎಸ್ ಭಟ್ಟ ಸ್ವಾಗತಿಸಿದರು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಉಲ್ಲಾಸ ಶಾನಭಾಗ ನಿರೂಪಿಸಿದರು.


ಸಭೆಗೆ ಶುಕ್ರವಾರ ಯಲ್ಲಾಪುರ ತಾಲೂಕಿನ ಸಾವಿರಾರು ಅಭಿಮಾನಿಗಳೊಂದಿಗೆ ಕಾಂಗ್ರೆಸ್ ಸೇರ್ಪಡೆಯಾದ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಆಗಮಿಸಿ ವೇದಿಕೆಯಲ್ಲಿ ಆಸೀನರಾದ ಆರ್.ವಿ.ದೇಶಪಾಂಡೆ ಕಾಲಿಗೆ ಬಿದ್ದು ಆಶಿರ್ವಾದ ಪಡೆದರು. ನೂತನವಾಗಿ ಸೇರ್ಪಡೆಯಾದ ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಷ್ಟಾಗಿ ಕಂಡು ಬರಲಿಲ್ಲ.



