
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಪಟ್ಟಣದ ನಾಯ್ಕನಕೆರೆಯ ತಟದಲ್ಲಿ ಭವ್ಯ ಶಿಲಾಮಯ ದೇವಾಲಯವಾಗಿ ತಲೆ ಎತ್ತಿರುವ ದತ್ತಮಂದಿರದ ಇತಿಹಾಸ ರೋಚಕ ಮತ್ತು ರೋಮಾಂಚಕವಾಗಿದೆ. ಸಾಕ್ಷಾತ್ ದತ್ತಾತ್ರೇಯ ಸ್ವಾಮಿಗಳ ಅನುಗ್ರಹದಿಂದ ಮತ್ತು ಹಿಂದಿನ ಅವದೂತ ಶಿವಾನಂದ ಸ್ವಾಮಿಗಳು ಹಾಗು ಅವರ ಪೂರ್ವಾಶ್ರಮದ ಕುಟುಂಬ ಸದಸ್ಯರ ಪರಿಶ್ರಮ ಶ್ರೀ ಕ್ಷೇತ್ರ ಉಳಿದು ಬೆಳೆದುದಾಗಿದೆ.

ಕೊಳಗೀಬೀಸ್ನ ಅರಳಿಮರದ ಅಡಿಯಲ್ಲಿ ಧ್ಯಾನಾಸಕ್ತರಾಗಿ ಕುಳಿತ ಶಿವಾನಂದರು ಸನ್ಯಾಸ ದೀಕ್ಷೆ ತೆಗೆದುಕೊಂಡು ಶ್ರೀ ಶಿವಾನಂದ ಸ್ವಾಮಿಗಳೆಂದು ನಾಮಕರಣಗೊಂಡಿದ್ದ ಸಂದರ್ಭದಲ್ಲಿ ಯಲ್ಲಾಪುರದ ನಾಯ್ಕನಕೆರೆಯ ದತ್ತಮಂದಿರದ ವಹಿವಾಟನ್ನು ಶ್ರೀ ಬ್ರಹ್ಮಾನಂದ ಗಣೇಶ ಯೋಗಿಯವರು ಬಿಟ್ಟು ಹೋಗಿದ್ದರಿಂದ 1963ರಲ್ಲಿ ದತ್ತಮಂದಿರದ ಭಕ್ತರಾದ ಯಲ್ಲಾಪುರ ಹೋಟೆಲ್ ಶ್ರೀನಿವಾಸ ಆಚಾರ್ಯರು ಹಾಗೂ ಹರಿದಾದ ಕುದಲೆಯವರು ಶಿವಾನಂದ ಸ್ವಾಮಿಗಳಿಗೆ ಮನವಿ ಮಾಡಿ ದತ್ತ ಕ್ಷೇತ್ರದ ಅಭಿವೃದ್ಧಿಗೆ ಸ್ವಾಗತಿಸಿದರು.

ಅಂದು ಯಲ್ಲಾಪುರದ ನಾಯ್ಕನಕೆರೆಗೆ ಕಾಲಿಟ್ಟ ಶಿವಾನಂದ ಮಹಾಸ್ವಾಮಿಗಳು ಕೇವಲ ಗರ್ಭಗುಡಿ ಹೊಂದಿದ್ದ ದತ್ತಮಂದಿರವನ್ನು ಯಲ್ಲಾರಗದ್ದೆ ಮಹಾಬಲೇಶ್ವರ ಹೆಗಡೆ, ಕನ್ನಡಗಲ್ಲ್ ಹೆಗಡೆ, ಮೂರೂರು ಗಜಾನನ ಶಾಸ್ತ್ರಿ ಹಾಗೂ ಸುತ್ತಮುತ್ತಲ ಹಳ್ಳಿಗಳ ಭಕ್ತರ ಸಹಕಾರದಲ್ಲಿ ದತ್ತಮಂದಿರದ ಸುತ್ತಲೂ ಗಂಟೆ ಮಂಟಪ, ಚಂದ್ರಶಾಲೆ, ಗೋಶಾಲೆ ನಿರ್ಮಿಸಿದರು.
ಯಲ್ಲಾಪುರದ ಕಿರಾಣಿ ವ್ಯಾಪಾರಸ್ಥ ವಿಜಯಶಂಕರ ಬಾಬು ಹೆಗಡೆ ಕುಟುಂಬದವರಿಂದ ಮತ್ತು ರಾಮಚಂದ್ರ ಮಾಣಿ ಶಾನಭಾಗರಿಂದ ಧನ ಸಹಾಯ ಪಡೆದು ಗೋಶಾಲೆ ವ್ಯವಸ್ಥೆ ಮಾಡಿದ್ದು ಸರ್ವರಿಗೂ ತಿಳಿದ ವಿಷಯವಾಗಿದೆ. ದತ್ತ ಹೋಮ, ರಾಮತಾರಕ ಜಪಯಜ್ಞ ಮಾಡುವ ಮೂಲಕ ಆ ಕಾಲದಲ್ಲೇ ದತ್ತ ಕ್ಷೇತ್ರದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದು ಇತಿಹಾಸವಾಗಿದೆ. ಸರಿಸುಮಾರು 20 ವರ್ಷಗಳ ಕಾಲ ಶಿವಾನಂದ ಸ್ವಾಮಿಗಳ ತಪೋಭೂಮಿಯಾಗಿ ಅವಧೂತ ಪರಂಪರೆಯ ಪುಣ್ಯಕ್ಷೇತ್ರಾವಗಿ ತಾಲೂಕಿನಾದ್ಯಂತ ಎಲ್ಲ ಭಕ್ತಗಣದ ಶ್ರದ್ಧಾಕೇಂದ್ರವಾಗಿ ದತ್ತಕ್ಷೇತ್ರ ಬೆಳೆದು ಬಂದಿತು. ವಯೋಸಹಜ ವೃದ್ಯಾಪ್ಯದ ಶಿವಾನಂದ ಸ್ವಾಮಿಗಳನ್ನು ವಿಚಾರಿಸಲು ಬಂದ ಪೂರ್ವಾಶ್ರಮದ ಮಕ್ಕಳಲ್ಲಿ ಒಬ್ಬರಾದ ಸೀತಾರಾಮ ಹೆಗಡೆ ಮತ್ತು ಶ್ರೀನಿವಾಸ ಆಚಾರ್ಯರ ಹೆಗಲಿಗೆ ಪೂಜಾ ಸೇವೆಯ ಜವಾಬ್ದಾರಿ ಬಿದ್ದಿತು.
1984 ರಲ್ಲಿ ಪುಷ್ಯ ಹುಣ್ಣಿಮೆಯಂದು ಶಿವಾನಂದ ಸ್ವಾಮಿಗಳು ಜೀವನ್ಮುಕ್ತರಾದರು. ಅವರ ಸಮಾಧಿಯನ್ನೂ ಸಹ ದತ್ತಕ್ಷೇತ್ರದಲ್ಲೇ ಮಾಡಲಾಯಿತು.

ಬಹಳ ವರ್ಷಗಳ ಕಾಲ ಗತಿಸಿದ ನಾಯ್ಕನಕೆರೆಯ ದಡದಲ್ಲಿ ಇರುವ ದತ್ತಕ್ಷೇತ್ರವು ಶಿಥಿಲಗೊಳ್ಳಲು ಪ್ರಾರಂಭವಾಗಿ ಬೀಳುವ ಸ್ಥಿತಿ ತಲುಪಿತು. ಆ ಸಂದರ್ಭದಲ್ಲಿ ಅಶೋಕ ಹೆಗಡೆಯವರು ಹೊಸನಗರದ ಶ್ರೀ ಸಂಸ್ಥಾನದ ದರ್ಶನಕ್ಕೆ ಹೋದಾಗ ಮಹಾಸ್ವಾಮಿಗಳಲ್ಲಿ ದತ್ತಮಂದಿರದ ಜೀರ್ಣೋದ್ಧಾರದ ಬಗ್ಗೆ ಭಿನ್ನವಿಸಿಕೊಂಡರು. ಮಹಾಸ್ವಾಮಿಗಳ ಅಪ್ಪಣೆಯಂತೆ ಪೀಠದಿಂದಲೇ ದತ್ತಕ್ಷೇತ್ರದ ಅಭಿವೃದ್ಧಿಗೆ ಆಶೀರ್ವಾದವನ್ನಿತ್ತರು. ಮಹಾಸ್ವಾಮಿಗಳ ನಿರ್ದೇಶನದಂತೆ ವಕೀಲರಾದ ಎಸ್.ವಿ ಯಾಜಿಯವರನ್ನು ಮಠದ ಪ್ರತಿನಿಧಿಯಾಗಿ ಸೂಚಿಸಿ 2008 ರಂದು ಜವಾಬ್ದಾರಿ ವಹಿಸಲಾಯಿತು. ಅಂದಿನಿಂದ ಪ್ರತಿವರ್ಷ ದತ್ತಜಯಂತಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಯಿತು. ವ್ಯವಸ್ಥೆಯ ಯಶಸ್ಸು ಕಂಡ ಸೀತಾರಾಮರು ಮರಣಪೂರ್ವದಲ್ಲಿ ಬರೆದ ವೀಲುನಾಮದಂತೆ ದತ್ತಾತ್ರೇಯ ಮಂಧಿರದ ಪೂರ್ಣ ಹಕ್ಕನ್ನು ಶ್ರೀಮಠದ ಸುಪರ್ದಿಗೆ ನೀಡಲಾಯಿತು.

2023 ರಲ್ಲಿ ನಡೆದ ದತ್ತ ಜಯಂತಿಯಂದು ಶ್ರೀಮದ್ ರಾಘವೇಶ್ವರ ಮಹಾಸ್ವಾಮಿಗಳು ಸಂಕಲ್ಪಿಸಿ ಆದೇಶ ನೀಡಿ 2024 ರ ದತ್ತ ಜಯಂತಿಯನ್ನು ದತ್ತ ಮಂದಿರದ ಪುನರ್ ಪ್ರತಿಷ್ಠಾಪನೆಯೊಂದಿಗೆ ಪ್ರಾಣಪ್ರತಿಷ್ಠ ಸಂಕಲ್ಪಕ್ಕೆ ಆದೇಶಿಸಿದರು. ಅದರಂತೆ ಮಠದ ಪ್ರಿನಿಧಿಯಾದ ವಕೀಲ ಎಸ್ ವಿ ಯಾಜಿಯವರು ದತ್ತಕ್ಷೇತ್ರದ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹಾಗೂ ಮಹೇಶ ಚಟ್ನಳ್ಳಿ ಮುಂತಾದ ಭಕ್ತಪ್ರಮುಖರ ಪರಿಶ್ರಮದಲ್ಲಿ ದತ್ತ ಭಕ್ತರ, ದಾನಿಗಳ ಸಹಕಾರದಲ್ಲಿ ದತ್ತಕ್ಷೇತ್ರವು ಶಿಲಾಮಯ ದೇಗುಲವಾಗಿ ಪ್ರಖ್ಯಾತ ಸ್ಥಳವಾಗಿ ಗುರುತಿಸಿಕೊಳ್ಳಲಿದೆ.

ಶ್ರೀ ಶಿವಾನಂದ ಸ್ವಾಮಿಗಳ ಪೂರ್ವಾಶ್ರಮದಿಂದ ಸುಮಾರು 60 ವರ್ಷಗಳ ಕಾಲ ಪರಿಶ್ರಮ ಮತ್ತು ಸೇವೆ ಸಲ್ಲಿಸುತ್ತಾ ಬಂದ ಸೀತಾರಾಮ ಹೆಗಡೆಯವರ ಮಗನಾದ ಅಶೋಕ ಹೆಗಡೆ ದಂಪತಿಗಳಿಂದ ನೂತನ ಶಿಲಾಮಯ ದೇವಾಲಯದ ದತ್ತಾತ್ರೇಯ ದೇವರ ಮೂರ್ತಿಯ ದೇಣಿಗೆ ಅತ್ಯಂತ ಅರ್ಥಗರ್ಭಿತವಾಗಿದೆ. ವಿಶೇಷವೆಂದರೆ ಶಿವಾನಂದ ಸ್ವಾಮಿಗಳ ಪೂರ್ವಾಶ್ರಮದ ಕುಟುಂಬದ ಪರಿವಾರದವರೇ ಆಗಿರುವ ಹಾಲಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ್ ಎಂಬುದು ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವಾಗಿದೆ.