
ಯಲ್ಲಾಪುರ : ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುತ್ತ ಬಂದಿರುವ ಮತ್ತು ರಾಷ್ಟç ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡ ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಕಟ್ಟಿಬೆಳೆಸಿದ ಪಕ್ಷವನ್ನು ನಾವು ಇನ್ನಷ್ಟು ಬಲಿಷ್ಟಗೊಳಿಸಬೇಕಿದೆ. ಇದಕ್ಕೆ ಕಾರ್ಯಕರ್ತರೆಲ್ಲರೂ ಒಮ್ಮನಸ್ಸಿನಿಂದ ಕೈ ಜೋಡಿಸಿದರೆ ಮಾತ್ರ ಸಾಧ್ಯ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಪುನಃ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಕಾರ್ಯವನ್ನು ನಾವೆಲ್ಲರೂ ಕೂಡಿ ಮಾಡಬೇಕಾಗಿದೆ ಅಭಿವೃದ್ಧಿ ಒಂದೇ ನನ್ನಚಲ ಈ ಕ್ಷೇತ್ರದ ಜನರೆ ನನ್ನ ಬಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು

ಅವರು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾರತ ಮಾತೆ ಮತ್ತು ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಬಿಜೆಪಿ ಸ್ಥಾಪನೆಯಾದಾಗಿನಿಂದಲೂ ರಾಷ್ಟ್ರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಇಂದು ಹಿರಿಯರಾದ ಡಾ.ಶ್ಯಾಮಪ್ರಸಾದ ಮುಖರ್ಜಿ ಮತ್ತು ದೀನದಯಾಳ ಉಪಾಧ್ಯಾಯ ಇವರು ಸಂಸ್ಥಾಪಿಸಿದ ಬಿಜೆಪಿಯ ಸಂಸ್ಥಾಪನಾ ದಿನವನ್ನು ಭಾರತ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಸ್ಮರಿಸಿ, ಅವರ ಕೊಡುಗೆಗಳನ್ನು ಗೌರವಿಸುತ್ತಿದ್ದೇವೆ ಎಂದರು.
ಬಿಜೆಪಿ ಶಿವಮೊಗ್ಗಾ ವಿಭಾಗದ ಸಹಪ್ರಭಾರಿ ಎನ್.ಎಸ್.ಹೆಗಡೆ ಮಾತನಾಡಿ, ಬೂತ್ ಮಟ್ಟದಿಂದ ಕೇಂದ್ರದವರೆಗೂ ಇಂದು ಸಂಸ್ಥಾಪಕರ ಸ್ಮರಣಾರ್ಥ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಬೂತ್ ಮಟ್ಟದಲ್ಲೂ ಪಕ್ಷದ ಧ್ವಜಾರೋಹಣ ನೆರವೇರಿಸಲಾಗುತ್ತಿದೆ. ೧೯೮೦ ರಲ್ಲಿ ಜನಸಂಘ ಜನತಾಪಕ್ಷದಲ್ಲಿ ವಿಲೀನಗೊಂಡು, ಭಾರತಿಯ ಜನತಾಪಕ್ಷವಾಗಿ ಪರಿವರ್ತನೆಗೊಂಡಿತು. ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಎಲ್ಲ ಕಾರ್ಯಕರ್ತರ ಸಮನ್ವಯತೆ ಸಾಧಿಸಿ, ಮನೆಮನೆಗೆ ಭೇಟಿ ನೀಡಿ, ಮತದಾರರಿಗೆ ಪಕ್ಷದ ಹಾಗೂ ಸರ್ಕಾರದ ಅಭಿವೃದ್ಧಿಯ ಕುರಿತಾಗಿ ಮನವರಿಕೆ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಹೆಬ್ಬಾರರನ್ನು ಗೆಲ್ಲಿಸುವಂತೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್ ಮಾತನಾಡಿ, ಪ್ರಸಕ್ತ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತಲೂ ಅತ್ಯಧಿಕ ಮತಗಳ ಅಂತರದಿAದ ಹೆಬ್ಬಾರರು ವಿಜಯಿಶಾಲಿಯಾಗಲು ಕಾರ್ಯಕರ್ತರೆಲ್ಲರೂ ಶ್ರಮ ವಹಿಸುವ ಮೂಲಕ ಬಿಜೆಪಿ ಸರ್ಕಾರದ ರಚನೆಗೆ ಕಾರಣರಾಗುವಂತೆ ವಿನಂತಿಸಿದರು.

ತಾಲೂಕಾ ಪ್ರಧಾನಕಾರ್ಯದರ್ಶಿಗಳಾದ ರವಿ ಭಟ್ಟ ಬರಗದ್ದೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಸಾದ ಹೆಗಡೆ ವಂದಿಸಿದರು.
ಪಕ್ಷದ ಹಿರಿಯರಾದ ಪ್ರಮೋದ ಹೆಗಡೆ, ಉಮೇಶ ಭಾಗ್ವತ್, ರಾಮು ನಾಯಕ, ಶಿರೀಷ ಪ್ರಭು, ಮುರಳಿ ಹೆಗಡೆ, ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್ ಮತ್ತಿತರರು ಉಪಸ್ಥಿತರಿದ್ದರು.




Prathidvani Yellapura