

ಯಲ್ಲಾಪುರ : ಪೊಲೀಸ್ ಇಲಾಖೆಯ ವಿನೂತನ ಕಾರ್ಯಕ್ರಮವಾದ ” ಮನೆಮನೆಗೆ ಪೊಲೀಸ್ ” ಯಶಸ್ವಿಯಾಗಿ ಜರುಗುತ್ತಿದ್ದು ಬುಧವಾರ ಬೀಟ್ ನಂ 3 ರ ನೂತನನಗರ ಜಡ್ಡಿಯಲ್ಲಿ ಪಿ.ಐ.ರಮೇಶ್ ಹಾನಾಪುರ ಹಲವು ಮನೆಗಳಿಗೆ ಭೇಟಿ ನೀಡಿ ಜಾಗೃತಿಯೊಂದಿಗೆ ಅವರ ಸಮಸ್ಯೆಗಳನ್ನು ಆಲಿಸಿದರು.

ಕೆಲವು ನಾಗರಿಕರು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದು ತಪ್ಪು, ಕೆಟ್ಟದ್ದು ಎಂದು ತಿಳಿದುಕೊಂಡಿದ್ದಾರೆ ಅಲ್ಲದೆ ಕೆಲವು ಗಂಭೀರ ಸಮಸ್ಯೆಗಳನ್ನು ಪೊಲೀಸ್ ಠಾಣೆಗೆ ಬಂದು ಹೇಳಿಕೊಳ್ಳಲು ಭಯ ಹಾಗು ಮುಜುಗರ ಅನುಭವಿಸುವವರು ಇದ್ದಾರೆ ಅಂತಹ ಪ್ರಕರಣಗಳಿಗೆ ಇಲಾಖೆ ಮದ್ದು ಹುಡುಕಿದ್ದು ಪೊಲೀಸರೆ ಮನೆಮನೆಗೆ ತೆರಳಿ ಅವರಲ್ಲಿರುವ ಸಮಸ್ಯೆ ಮತ್ತು ಕಾನೂನಿನ ಪರಿಹಾರ ತಿಳಿಸಿಕೊಡುವುದಲ್ಲದೆ ನಾಗರಿಕರು ಅಪರಾಧ ಕೃತ್ಯಗಳನ್ನು ಕಡಿವಾಣ ಹಾಕುವ ಮತ್ತು ಮುಂಜಾಗ್ರತರಾಗುವ ಕುರಿತು ಅರಿವು ಮೂಡಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಬೀಟ್ ನಂ-3 ನೂತನನಗರ ಜಡ್ಡಿ ಉಸ್ತುವಾರಿ ಸಿಬ್ಬಂದಿ ಬಸವರಾಜ್ ಹಗರಿ ಮತ್ತು ರೇಖಾ ಜೊತೆಯಲ್ಲಿದ್ದು ಸಹಕರಿಸಿದರು.

ಇಲಾಖೆಯ ವಿನೂತನ ಕಾರ್ಯಕ್ರಮ ” ಮನೆಮನೆಗೆ ಪೊಲೀಸ್ ” ಉತ್ತಮ ಆಲೋಚನೆಯಾಗಿದ್ದು ಪ್ರತಿ ಮನೆಗಳಿಗು ತೆರಳಿ ಜಾಗೃತಿ ಮೂಡಿಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾರ್ಗೋಪಾಯಗಳನ್ನು ವಿಮರ್ಶಿಸಲಾಗುತ್ತಿದೆ. ಸಾರ್ವಜನಿಕರ ಪ್ರತಿಕ್ರಿಯೆ ಉತ್ತಮವಾಗಿದ್ದು ಕಾನೂನಿನ ಬಲ,ರಕ್ಷಣೆ ಸಾರ್ವಜನಿಕರೊಂದಿಗಿರುವುದನ್ನು ಕಂಡು ಪೊಲಿಸರೊಂದಿಗಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುತ್ತಿದೆ.
ರಮೇಶ್ ಹಾನಾಪುರ
ಪಿ.ಐ ಯಲ್ಲಾಪುರ
Prathidvani Yellapura