
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಸರ್ಕಾರಿ ಶಾಲೆಗಳೆಂದರೆ ಹಿಂಜರಿಯುವ ದಿನಗಳು ಕಳೆದು ಹೋದವು. ಗುಣ ಮಟ್ಟದ ಶಿಕ್ಷಣ, ಸಂಸ್ಕಾರ ಕಲಿಸುವ ಗುರುಗಳು, ಉತ್ತಮ ವಾತಾವರಣವಿರುವ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುತ್ತಿವೆ. ಮಕ್ಕಳು ವಿದ್ಯೆಯೊಂದಿಗೆ ಬದುಕಿನ ಪಾಠವನ್ನೂ ಕಲಿಯಬೇಕು. ತಾಲೂಕಿನ ಗಡಿಭಾಗದ ಶಾಲೆಯಾಗಿ ಉತ್ತಮ ಹೆಸರುಗಳಿಸಿ ಸುವರ್ಣ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ಭವಿಷ್ಯದಲ್ಲಿ ಬೇಕಾದ ಸವಲತ್ತುಗಳನ್ನು ಸರ್ಕಾರದಿಂದ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ತಾಲೂಕಿನ ಗಡಿಭಾಗದ ಹೆಮ್ಮಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಸಂಭ್ರಮ ಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿಯಿಂದ ಶಾಲೆಗೆ ಸಿಸಿ ರಸ್ತೆ, ಸ್ಮಾರ್ಟ್ ಕ್ಲಾಸ್, ಅಪೂರ್ಣವಾದ ಶೌಚಾಲಯ ಪೂರ್ಣಗೊಳಿಸುವುದರ ಕುರಿತು ಶಾಸಕರಿಗೆ ಬೇಡಿಕೆ ಸಲ್ಲಿಸಿದ್ದು ಸಿಸಿ ರಸ್ತೆ ಹಾಗೂ ಶೌಚಾಲಯ ಪೂರ್ಣಗೊಳಿಸುವ ಭರವಸೆ ನೀಡಿದರು. ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ತಮ್ಮ ಸಂಸ್ಥೆಯ ವತಿಯಿಂದ ಸ್ಮಾರ್ಟ್ಕ್ಲಾಸ್ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ವೇದಿಕೆಯಲ್ಲಿ ಹಿಂದಿನ ಎಸ್.ಡಿ.ಎಂ.ಸಿ ಅಧ್ಯಕ್ಷರೂ, ಪದಾಧಿಕಾರಿಗಳು, ಸದಸ್ಯರು, ಶಾಲೆಯ ನಿವೃತ್ತ ಶಿಕ್ಷಕರು, ಸುವರ್ಣ ಸಂಭ್ರಮ ಕಮಿಟಿಯ ಸದಸ್ಯರು ಹಾಗೂ ಹಿರಿಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್ ಪಾಟೀಲ, ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿ ಪಾರಿ ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಗ್ರಾ.ಪಂ ಸದಸ್ಯ ಗಣೇಶ ಹೆಗಡೆ, ಸ್ಥಳೀಯ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಇನ್ನಿತರರು ವೇದಕೆಯಲ್ಲಿ ಉಪಸ್ಥಿತರಿದ್ದರು.



Prathidvani Yellapura