
ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನಲ್ಲಿ ಮೇ,10 ರಂದು ನಡೆದ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಅತ್ಯಂತ ಶಾಂತಿ ಮತ್ತು ಸುವ್ಯವಸ್ಥಿತ ಯಶಸ್ವಿಯಾಗಿ ನೆರವೇರಿತು.
ತಾಲೂಕಿನಲ್ಲಿ ಒಟ್ಟು 15 ಗ್ರಾಮ ಪಂಚಾಯತ್ ಹಾಗು ಪಟ್ಟಣ ಪಂಚಾಯತ್ ಸೇರಿದಂತೆ 96 ಮತಗಟ್ಟೆಗಳಿದ್ದು ಪಟ್ಟಣದ ಮಹಿಳಾ ಮಂಡಲ ಕನ್ನಡ ಶಾಲೆಯ ಮತಗಟ್ಟೆ ಅತಿ ಹೆಚ್ಚು 1366 ಮತದಾರರನ್ನು ಹೊಂದಿರುವ ದೊಡ್ಡ ಮತಗಟ್ಟೆಯಾದರೆ ಕುಂದೂರು ಮತಗಟ್ಟೆ 187 ಮತದಾರರನ್ನು ಒಳಗೊಂಡ ಅತಿ ಸಣ್ಣ ಮತಗಟ್ಟೆ ಯಾಗಿದೆ.

ಹಾಸಣಗಿ ಪಂಚಾಯತ್ ವ್ಯಾಪ್ತಿಯ ಬಿಳಕಿ ಮತಗಟ್ಟೆ ಬುಡಕಟ್ಟು ಸಾಂಪ್ರದಾಯಿಕ ಮತಗಟ್ಟೆ ಯಾಗಿ ಕಾರ್ಯ ನಿರ್ವಹಿಸಿತು. ನಂದೊಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದರಿ ಮತಗಟ್ಟೆಯಾಗಿದ್ದರೆ. ಪಟ್ಟಣದ ಸಬ್ ಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮಂಚಿಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಖಿ ಮತಗಟ್ಟೆಗಳಾಗಿ ಕಾರ್ಯ ನಿರ್ವಹಿಸಿದವು ವಿಶೇಷ ಎಂದರೆ ಈ ಮತಗಟ್ಟೆಯಲ್ಲಿ ಮಕ್ಕಳಿಗೆ ಆಟವಾಡುವ ಸಾಮಾಗ್ರಿಗಳನ್ನು ಇರಿಸಿ ಪೋಷಕರು ಮತಚಲಾಯಿಸಿ ಬರುವವರೆಗೆ ಹಠ ಹಿಡಿಯದಂತೆ ಆಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.ಪಟ್ಟಣದ ಮಾಡೆಲ್ ಸ್ಕೂಲ್ ಮತಗಟ್ಟೆಯಲ್ಲಿ ವಿಶೇಷಚೇತನರ ಮತಗಟ್ಟೆಯಾಗಿದ್ದರೆ ಅರಬೈಲ್ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯನ್ನು ಯುವ ಮತಗಟ್ಟೆಯಾಗಿ ವ್ಯವಸ್ಥೆ ಮಾಡಲಾಗಿತ್ತು.

ಬೆಳಗಿನಿಂದ ಪ್ರಾರಂಭವಾದ ಮತದಾನ ಪ್ರಕ್ರಿಯೆ ಚುರುಕಿನಿಂದಲೆ ಸಾಗಿತ್ತು ಮದ್ಯಾಹ್ನದ ವೇಳೆಗೆ ಸುಡು ಬಿಸಿಲಿಗೆ ಬಸವಳಿದ ಜನ ಮತದಾನಕ್ಕೆ ಬರುವುದನ್ನೆ ನಿಲ್ಲಿಸಿದರು. ಮದ್ಯಾಹ್ನದ 1 ಗಂಟೆಯ ವೇಳೆಗೆ 44.56% ಮತದಾನವಾಗಿತ್ತು. ನಂತರ ಸಂಜೆ ವೇಳೆಗೆ ಮತ್ತೆ ಮತದಾರರ ಸಂಖ್ಯೆಯಲ್ಲಿ ಏರಿಕೆ ಕಂಡಿತು ಮತ್ತೆ ಮಳೆರಾಯನ ಕಾಟಕ್ಕೆ ಕೊಂಚ ಜನಜಂಗುಳಿ ಕಡಿಮೆಯಾಗಿತ್ತು. ನಂತರ ಕೊನೆಯ ಹಂತದಲ್ಲಿ ಮತ್ತೆ ಬಿರುಸಿನ ಮತದಾನವಾಗಿ ಸಂಜೆ 5 ರ ವೇಳೆಗೆ ಒಟ್ಟಾರೆ 68.52% ಮತದಾನವಾಗಿತ್ತು. ನಂತರ ಮುಕ್ತಾಯದ ವೇಳೆಗೆ ದಾಖಲೆ ಮಟ್ಟದಲ್ಲಿ ಮತಚಲಾವಣೆಯಾಗಿದ್ದು 81.72% ಮತ ಚಲಾವಣೆಯಾಗಿದ್ದು ಜಿಲ್ಲೆಯಲ್ಲಿಯೆ ಅತ್ಯಧಿಕ ಮತಚಲಾವಣೆಯಾದಂತಾಗಿದೆ.
ಮತದಾನ ಪ್ರಕ್ರಿಯೆಯಲ್ಲಿ ತಾಲೂಕಿನ ಬಾರೆ, ಬಾಳಗಿಮನೆ, ಕಳಚೆ, ಹಿತ್ಲಕಾರಗದ್ದೆ ಮತದಾನ ಕೇಂದ್ರಗಳಲ್ಲಿ ವಿವಿಪ್ಯಾಟ್ ಮಷಿನ್ ಗಳು ತಾಂತ್ರಿಕವಾಗಿ ತೊಂದರೆ ನೀಡಿದ್ದರಿಂದ ಸ್ವಲ್ಪವು ತಡಮಾಡದೆ ಬದಲಿ ವ್ಯವಸ್ಥೆ ಕಲ್ಪಿಸುವುದರ ಮೂಲಕ ಚುನಾವಣ ಕರ್ತವ್ಯ ಅಧಿಕಾರಿಗಳು ಚುರುಕಿನ ಕಾರ್ಯ ನಿರ್ವಹಿಸಿದ್ದಾರೆ. ಬಿಸಿಲಿನ ತಾಪಕ್ಕೆ ಬಸವಳಿದ ಮತದಾರರು ಮುಂದಿನ ಚುನಾವಣೆಗಳಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದ್ದಾರೆ ಮತ್ತು ಈ ಬಾರಿ ಮತಚಲಾಯಿಸುವ ಸ್ಥಳಕ್ಕೆ ಅಡ್ಡಲಾಗಿ ಇಡುವ ಬಾಕ್ಸ್ ಮಾದರಿ ಅತಿ ಎತ್ತರವಾಗಿದ್ದು ಕೊಂಚ ತಗ್ಗಿಸಬೇಕಿದೆ ಹಾಗು ಅದರೊಳಗೆ ಮಷಿನ್ ಇರುವ ಸ್ಥಳ ಕೊಂಚ ಕತ್ತಲೆಯಂತೆ ಗೋಚರಿಸುತ್ತಿದ್ದು ಮುಂಬರುವ ದಿನಗಳಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆಯು ಸಲಹೆ ನೀಡಿದ್ದಾರೆ.

2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಅತ್ಯಂತ ತೃಪ್ತಿ ನೀಡಿದ್ದು ನಾವು ಮಾಡಿದ ಸರ್ಕಾರಿ ಸೇವೆ ಸಾರ್ಥಕ ಭಾವ ಮೂಡಿಸಿದೆ ಅದಕ್ಕೆ ಪ್ರಮುಖ ಕಾರಣ ಚುನಾವಣಾ ಆಯೋಗ ಈ ಬಾರಿ 80 ವರ್ಷ ದಾಟಿದ ಮತ್ತು ವಿಶೇಷ ಚೇತನರಿಗಾಗಿನ ಮನೆಯಿಂದಲೆ ಮತಚಲಾಯಿಸುವ ಹಕ್ಕು ನೀಡಿರುವುದಾಗಿದೆ. ಅನೇಕರು ತಮ್ಮ ಈ ವಯಸ್ಸಿನಲ್ಲಿಯು ಮನೆಗೆ ಬಂದು ನಮ್ಮ ಮತವನ್ನು ಪಡೆದು ನಮ್ಮ ಹಕ್ಕು ಚಲಾಯಿಸಿ ಸಾರ್ಥಕ ಕಾರ್ಯಕ್ಕೆ ವ್ಯವಸ್ಥೆ ಕಲ್ಪಿಸಿದಕ್ಕಾಗಿ ಕೈ ಮುಗಿದು ಧನ್ಯವಾದ ತಿಳಿಸುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡು ಕೃತಜ್ಞತೆ ಸಲ್ಲಿಸುವ ಹಿರಿಯ ಜೀವಗಳ ಮಾತುಗಳೆ ನಮ್ಮ ಸೇವೆಗೆ ಸಂದ ಪಾರಿತೋಷಕ ಎಂಬ ಭಾವ ನಮಗೆ ತೃಪ್ತಿ ತಂದಿದೆ. ಮತ್ತು ತಾಲೂಕಿನಲ್ಲಿ ಎಲ್ಲಿಯು ಸಮಸ್ಯೆಗಳಾಗದಂತೆ ಈ ಚುನವಣೆ ಸುಲಲಿತವಾಗಿ ನೆರವೇರಿದೆ ಸಹಕರಿಸಿದ ಸರ್ವರಿಗು ಧನ್ಯವಾದಗಳು.
ಅಜ್ಜಪ್ಪ ಸೊಗಲದ
ಚುನಾವಣಾಧಿಕಾರಿ ಯಲ್ಲಾಪುರ 81





Prathidvani Yellapura