Breaking News

ಸಮಾಜ ಸುಧಾರಣೆಯಲ್ಲಿ ಸಾಹಿತ್ಯದ ಪಾತ್ರ. ‌‌‌‌‌

ಭಾರತದ ಪುಣ್ಯ ಭೂಮಿಯಲ್ಲಿ ರಾಮಾಯಣ , ಮಹಾಭಾರತ , ಭಾಗವತದಂಥ ಮಹಾನ್ ಗ್ರಂಥಗಳ ಉದಯದಿಂದ ನಮ್ಮ ಸಾಹಿತ್ಯಕ್ಷೇತ್ರ ಅತ್ಯಂತ ಉನ್ನತಮಟ್ಟದಲ್ಲಿದ್ದು ಇದು ನಮ್ಮ ಸಾಹಿತ್ಯದ ಸಂಪನ್ಮೂಲಗಳೆನ್ನಬಹುದು.

ಅನಾದಿ ಕಾಲದಿಂದಲೂ ಸಾಹಿತ್ಯವು ನಮ್ಮ ಸಂಸ್ಕೃತಿ , ಕಲೆ , ಆಚಾರ ವಿಚಾರ , ಜೀವನ ಶೈಲಿಗಳನ್ನು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಿಕೊಂಡು ಬರುವ ಕೊಂಡಿಯಾಗಿಯೂ , ಸಮಾಜದ ಓರೆ ಕೋರೆಗಳನ್ನು ತಿದ್ದಿ ಸ್ವಸ್ಥ ಸಮಾಜದ ನಿರ್ಮಾಣ ಕಾರ್ಯವೂ ಸಾಹಿತ್ಯದಿಂದ ನಿರಂತರವಾಗಿ ಸಾಗಿ ಬಂದಿದೆ . ರಾವಣ , ದುರ್ಯೋಧನನ, ಕರ್ಣ , ಶಕುನಿ , ಕಂಸನಂತವರ ಮಾದರಿಯನ್ನಿಟ್ಟು ಅಧರ್ಮ ಅನೀತಿಗಳನ್ನು ತಿದ್ದುವಲ್ಲಿ ಮಾರ್ಗದರ್ಶನವನ್ನು ಪಡೆದಿದ್ದೇವೆ . ಅಂಥಹ ದುಷ್ಟ ದುರಾಡಳಿತದಿಂದಾದ ಸಾಮಾಜಿಕ ದುಷ್ಪರಿಣಾಮವನ್ನು ತಿಳಿದಿದ್ದೇವೆ .

ಶಂಕರಾಚಾರ್ಯರ , ರಾಮಾನುಜರ ಶ್ಲೋಕಗಳು ಮನುಷ್ಯನನ್ನು ಇಹದ ಜಂಜಡವನ್ನು ತೊಡೆದು ಭಕ್ತಿ ಮಾರ್ಗದೆಡೆಗೆ ಕೊಂಡೊಂಯ್ದು ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಉತ್ತಮ ಮಾರ್ಗವಾಗಿದೆ . ಡಿವಿಜಿಯವರ ಮೌಲ್ಯ ಯುತ ಕಗ್ಗ ಆಧುನಿಕ ಭಗವದ್ಗೀತೆ ಎಂದೇ ಪ್ರಸಿದ್ಧಿಗೊಂಡು ಮಾನವ ಮಾನವನಾಗಿ ಬದುಕುವಂಥ ಪಾಠ , ಅತಿಆಸೆಯನ್ನು ತೊರೆದು ಇದ್ದುದರಲ್ಲೇ
ನೆಮ್ಮದಿಯಿಂದ ಬಾಳಿ ಬದುಕುವರೀತಿ , ಪ್ರಕೃತಿಯನ್ನು ನಾಶಪಡಿಸದೆ ಅದನ್ನು ಕಾಪಾಡಿಕೊಂಡು ಅದರೊಂದಿಗೇ ಹೊಂದಾಣಿಕೆಯೊಂದಿಗೆ ಬದುಕಬೇಕೆಂಬ ತತ್ವ , ಅತಿಯಾದ ಜಾಗತೀಕರಣದ ದುಷ್ಪರಿಣಾಮ ಇವುಗಳ ಬಗ್ಗೆ ಈ ಹಿಂದೆಯೇ ಸಮಾಜಕ್ಕೆ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ.

ಹೊತ್ತಿ ಉರಿಯುವ ಸಮಾಜದಲ್ಲಿಯ ದ್ವೇಷ ಮತ್ಸರದ ಕಿಚ್ಚನ್ನು ಸಾಹಿತ್ಯದ ತಂಪನ್ನೆರೆದು ನಂದಿಸಿದ ಅನೇಕರನ್ನು ನಾವು ಕಾಣಬಹುದು . ಮೇಲು ಕೀಳು, ಬಡವ ಬಲ್ಲಿದನೆಂಬ ಸಮಾಜದಲ್ಲಿನ ಅಸಮಾನತೆಯ ಕಿಡಿಯನ್ನು ತೊಡೆದು ಹಾಕುವಲ್ಲಿ ಬಂಡಾಯ ಸಾಹಿತ್ಯಗಳು ಪ್ರಮುಖ ಪಾತ್ರ ವಹಿಸಿವೆ . ಸರ್ವಜ್ಞ , ಬಸವಣ್ಣ , ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ , ಮುಂತಾದವರ ವಚನ ಸಾಹಿತ್ಯವು ಸಮಾಜದ ಅನೇಕ ಲೋಪದೋಷಗಳನ್ನು ತಿದ್ದಿ , ಅಸ್ಪ್ರಶ್ಯತೆ , ಮೂಢನಂಬಿಕೆಗಳನ್ನು ಹೋಗಲಾಡಿಸಿದ್ದಲ್ಲದೆ ಸಾಂಘಿಕ ಬದುಕಿನಲ್ಲಿರುವ ಮೌಲ್ಯ ವನ್ನು ತಿಳಿಸಿಕೊಟ್ಟಿದ್ದಾರೆ .ಅತಿ ಶೀಘ್ರದಲ್ಲಿ ಮಕ್ಕಳ ಮನವನ್ನು ಸೆಳೆದು ಸದ್ಭಾವನೆ , ಉತ್ತಮ ವಿಚಾರಗಳನ್ನು ಮೂಡಿಸುವಲ್ಲಿ ಪಂಚತಂತ್ರ ಕಥೆಗಳು , ನೀತಿ ಕಥೆಗಳು , ಸಮಾಜಕ್ಕೆ ಸಾಹಿತ್ಯದ ಉತ್ತಮ ಕೊಡುಗೆಯಾಗಿದೆ .

ಪ್ರಕೃತಿಯೇ ದೇವರೆಂದು ಭಾವಿಸಿ , ಪೂಜಿಸಿ ಪ್ರಕೃತಿಯೊಡನೆ ಅವಿನಾಭಾವ ಸಂಬಂಧವಿರುವ ತಮ್ಮ ಬದುಕನ್ನು ಜನಪದ ಸಾಹಿತ್ಯದಲ್ಲಿ ತುಂಬಾ ಚೆನ್ನಾಗಿ ಹೇಳಲಾಗಿದೆ ಮತ್ತು ಭಾವನಾತ್ಮಕ ಜೀವನಕ್ಕೆ ಉತ್ತಮ ಮಾರ್ಗದರ್ಶನವನ್ನು ಜನಪದ ಶೈಲಿಯ ಹಾಡುಗಳಲ್ಲಿ ನಾವು ಕಾಣಬಹುದು . ಒಂದು ಎರಡು ಬಾಳೆಲೆ ಹರಡುಗಳಂತ ಸಂಖ್ಯಾ ಹಾಡುಗಳು , ಅಕ್ಷರ ಮಾಲೆಯ ಹಾಡುಗಳನ್ನು ಬರೆದು ಸುಲಭವಾಗಿ ಮಕ್ಕಳು ಅದನ್ನು ಮನನ ಮಾಡಿಕೊಳ್ಳುವಂಥ ಪ್ರಯೋಗಗಳು ಸಾಹಿತ್ಯದಿಂದ ಸಾಧ್ಯವಾಗಿದೆ.

ನಾಟಕ , ನೃತ್ಯ, ಕವನ, ಯಕ್ಷಗಾನ , ತಾಳಮದ್ದಳೆ, ಭಾವಗೀತೆ , ಭಕ್ತಿಗೀತೆ, ಭಾಷಣ , ಚಿಂತನಗಳಂಥ ಅಭಿವ್ಯಕ್ತಿಯ ಮೂಲಕ ಸಾಹಿತ್ಯವು ಸರಳವಾಗಿ ಮತ್ತು ಮನೋರಂಜಕವಾಗಿ ಜನರ ಮನವನ್ನು ಮುಟ್ಟುವಂತಹ ಮಾರ್ಗಗಳಾಗಿವೆ .

ಕಬೀರ ದಾಸರು , ಸಂತ ಶಿಶುನಾಳ ಶರೀಫರು , ಪುರಂದರ ದಾಸರು , ಕನಕದಾಸರು , ವಿಜಯವಿಠ್ಠಲದಾಸರು ಊರು ಊರುಗಳಲ್ಲಿ ಸಂಚರಿಸಿ ತಮ್ಮ ದಾಸವಾಣಿಯ ಮೂಲಕ ಜನರಲ್ಲಿ ಭಕ್ತಿಯ ಬೀಜ ಮೊಳೆಯುವಂತೆ ಮಾಡಿದುದಲ್ಲದೆ ಜಾಗ್ರತಿಯನ್ನೂ ಮೂಡಿಸಿದ್ದಾರೆ . ಕೆ. ಎಸ್. ನಾರಾಯಣಾಚಾರ್ಯರ ರಾಮಾಯಣ ಮಹಾಭಾರತದ ಕಥೆಗಳು, ದೇವಡುರವರ ಮಹಾಭ್ರಾಹ್ಮಣ ಮಹಾಕ್ಷತ್ರಿಯ , ಕನಸು, ತರಾಸುರವರ ಚಿತ್ರದುರ್ಗ ಇತಿಹಾಸದ ಅನೇಕ ಕಾದಂಬರಿಗಳು ಮತ್ತು ದುರ್ಗಾಸ್ತಮಾನ , ಡಿವಿಜಿ ಅವರ ಕಗ್ಗ , ಸಾಯಿಸುತೆ , ಸುಧಾಮೂರ್ತಿ ಹೀಗೆ ಅನೇಕ ಬರಹಗಾರರ ಸಾಹಿತ್ಯ ಭಂಡಾರದಿಂದ ಕನ್ನಡದ ಕಂಪು , ಕನ್ನಡದ ಹಿರಿಮೆ ಎಲ್ಲೆಲ್ಲೂ ಪಸರಿಸಿದೆ .

ವಿಷಯಾಧಾರಿತ ಸಂವಾದ , ಚರ್ಚೆ, ರಸಪ್ರಶ್ನೆ , ಸಾಹಿತ್ಯಿಕ ಚಟುವಟಿಕೆಗಳು ದೂರದರ್ಶನದಲ್ಲಿ, ಮಾಧ್ಯಮಗಳಲ್ಲಿ ,ಬಾನುಲಿಯಲ್ಲಿ ಪ್ರಸಾರವಾಗುವುದರಿಂದ , ಸಾಹಿತ್ಯಾಧಾರಿತ ಅನೇಕ ಕಾರ್ಯಕ್ರಮಗಳು ಆಯಾ ಪ್ರದೇಶದಲ್ಲಿ ನಡೆಯುವುದರಿಂದ , ಐತಿಹಾಸಿಕ ಮತ್ತು ಪೌರಾಣಿಕ, ಧಾರ್ಮಿಕ ವಿಷಯವಿನಿಮಯದಿಂದ ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿ ಯಾಗುತ್ತದೆ . ಉತ್ತಮ ಸಂಸ್ಕಾರ ಮತ್ತು ಬೌದ್ಧಿಕ ಗುಣಮಟ್ಟದ ಸ್ವಾಸ್ಥ್ಯ ವನ್ನು ಕಾಣಬಹುದು .ಮಕ್ಕಳಲ್ಲಿ
ಸಮಾಜದ ಒಪ್ಪುತಪ್ಪುಗಳ ಬಗ್ಗೆ ಕಲ್ಪನೆ ನೀಡಿ , “ಹಗೆವವರ ಹೆಸರ ಮಕ್ಕಳಿಗೆ ಇಟ್ಟು ಇರುವವರಿಗಿಲ್ಲ ನೋವು “ಎಂಬ ನುಡಿಯಂತೆ ತಾನೂ ಬದುಕಿ ಇತರರಿಗೂ ಬದುಕುವ ಅವಕಾಶ ಕಲ್ಪಿಸುವ ಉದ್ದೇಶ ಸಾಹಿತ್ಯದ್ದಾಗಿದ್ದು , ಸ್ವಸ್ಥ ಸಮಾಜದ ನಿರ್ಮಾಣ ಕಾರ್ಯ ಎಂದಿನಿಂದಲೂ ನಡೆದುಕೊಂಡು ಬಂದಂತೆ ಇಂದಿಗೂ ನಡೆಯುತ್ತಲೇ ಇದೆ.

ವಂದನೆಗಳು….

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *