

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕಾರವಾರ ಜೈಲಿನಿಂದ ಕರೆತಂದ ಇಬ್ಬರು ಸಹೋದರ ಖೈದಿಗಳು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ನಡೆದಿದ್ದು ಮಿಂಚಿನ ವೇಗದಲ್ಲಿ ಬೆನ್ನತ್ತಿದ ಪೊಲೀಸರು ಖೈದಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೂ.7 ರ ಬುಧವಾರದಂದು ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಕಾರವಾರದ ಜಿಲ್ಲಾ ಕಾರಾಗೃಹದಿಂದ ಹಾಜರು ಪಡಿಸಲು ಕರೆತಂದ ಖೈದಿಗಳಾದ ಪ್ರಕಾಶ್ ಕೃಷ್ಣಾ ಸಿದ್ದಿ (25 ) ಮತ್ತು ಪಿಲಿಪ್ ಕೃಷ್ಣಾ ಸಿದ್ದಿ( 22) ಎಂಬ ಸಹೋದರರಿಬ್ಬರು ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಹಾಜರಾಗಿ ಮರಳಿ ಕಾರವಾರಕ್ಕೆ ತೆರಳುವ ಮುನ್ನ ಪಟ್ಟಣದ ಸಂಕಲ್ಪ ಕ್ರಾಸ್ ಬಳಿ ಬಸ್ಸಿಗಾಗಿ ಕಾಯುತ್ತಿರುವ ವೇಳೆ ಬೆಂಗಾವಲು ಪೊಲೀಸರನ್ನು ತಳ್ಳಿ, ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಖೈದಿಗಳ ಬೆನ್ನತ್ತಿದ ಪೊಲೀಸರು ಸುಮಾರು 45 ನಿಮಿಷಗಳಲ್ಲಿ ಸಹೋದರ ಖೈದಿಗಳು ಸಿಕ್ಕಿಬಿದ್ದಿದ್ದಾರೆ. ಅಲ್ಲಿಗೆ ಪೊಲೀಸರಿಗೆ ಹೋದ ಜೀವ ಬಂದಂತಾಗಿದೆ.

ಒಂದು ಸಿನಿಮೀಯ ಮಾದರಿಯಲ್ಲಿ ಈ ಘಟನೆ ನಡೆದಿದೆ ಎನ್ನುತ್ತಾರೆ ಹತ್ತಿರದಿಂದ ನೋಡಿದವರು.
ಬಂಧಿತರಾದ ಖೈದಿಗಳಿಬ್ಬರನ್ನು ಯಲ್ಲಾಪುರ ಪೊಲೀಸರು ವಶಕ್ಕೆ ಪಡೆದು ಮೆಡಿಕಲ್ ಮಾಡಿಸಿ ನ್ಯಾಯಾದೀಶರ ಮುಂದೆ ಹಾಜರುಪಡಿಸಿ ಮತ್ತೆ ಕಾರವಾರ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.
Prathidvani Yellapura