
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಾದು ಹೋಗಿರುವ ಬಳ್ಳಾರಿ ಕಾರವಾರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇರುವ ಕೆಲವು ಬಸ್ ನಿಲ್ದಾಣಗಳು ಶಿಥಿಲವಾಗಿದ್ದು ಯಾವುದೆ ಕ್ಷಣದಲ್ಲಿ ಬಸ್ ಕಾಯುತ್ತ ನೆರಳಿಗಾಗಿ ಆಸರೆ ಪಡೆದ ಪ್ರಯಾಣಿಕರ ಬಲಿಪಡೆಯುವ ಸಾದ್ಯತೆ ಇದ್ದು ಸಂಬಂಧಿಸಿದ ಇಲಾಖೆಗಳು ತಕ್ಷಣ ಗಮನಹರಿಸಿ ಗಂಭೀರ ಸಮಸ್ಯೆಯನ್ನು ಪರಿಹರಿಸಬೇಕಿದೆ.

ತಾಲೂಕಿನ ಕಿರವತ್ತಿ ಯಿಂದ ಯಲ್ಲಾಪುರದ ವರೆಗೆ ಹೆದ್ದಾರಿ ಬದಿ ಕೆಲವು ಬಸ್ ನಿಲ್ದಾಣಗಳಿದ್ದು ಪ್ರಯಾಣಿಕರಿಗೆ ಅಪಾಯಕಾರಿಯಾಗಿ ನೆರಳು ನೀಡುತ್ತಿದೆ. ಡೊಮಗೇರಿ ಎಂಬಲ್ಲಿ ಬಸ್ ನಿಲ್ದಾಣವಿದ್ದು ದೂರದಿಂದ ಗಟ್ಟಿಮುಟ್ಟಾದ ಕಟ್ಟಡವೆನಿಸಿ ಸಮೀಪ ಹೋಗಿ ನೋಡಿದರೆ ಕಟ್ಟಡವೆಲ್ಲಾ ಬಿರುಕು ಬಿದ್ದಿದ್ದು ಸ್ಲಾಬ್ ಕಬ್ಬಿಣವೆಲ್ಲ ತುಕ್ಕು ಹಿಡಿದು ಇಣುಕಿ ನೋಡುತ್ತಿವೆ.

ಎದುರಿನಲ್ಲಿ ಹಾದುಹೋದ ಹೆದ್ದಾರಿ ಮೇಲೆ ಸಂಚರಿಸುವ ಬೃಹತ್ ಗಾತ್ರದ ವಾಹನಗಳು ಚಲಿಸುವ ವೇಳೆ ಕಟ್ಟಡ ಅಲುಗಿದ ಅನುಭವವಾಗುತ್ತದೆ.

ಬಸ್ ನಿಲ್ದಾಣದ ಒಳಗೆ ಮತ್ತು ಸುತ್ತಮುತ್ತ ಮದ್ಯದ ಬಾಟಲ್ ಸ್ಯಾಚಟ್ ಗಳ ದರ್ಬಾರ್ ಜೋರಾಗಿದೆ.

ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹರಡಿ ಬಿದ್ದಿದ್ದು ಪ್ರಯಾಣಿಕರು ಹತ್ತಿರ ಸುಳಿಯದಂತೆ ತಡೆ ಹಿಡಿದಿದೆ.

ವಿಶೇಷ ಎಂದರೆ ಭಗ್ನ ಪ್ರೇಮಿಗಳ ವೇದನೆಗೆ ಹಾಗು ಉದಯೋನ್ಮುಖ ಪ್ರಮೇಮಿಗಳ ನಿವೇದನೆಗೆ ಶಿಥಿಲವಾದ ಬಸ್ ನಿಲ್ದಾಣಗಳ ಮೇಲ್ಚಾವಣಿ ಮತ್ತು ಗೋಡೆಗಳು ಕವಿತೆ ಶ್ಲೋಗನ್ ಗಳಿಗೆ ಸಾಕ್ಷಿಯಾಗಿವೆ. ಇತ್ತೀಚೆಗೆ ಎಲ್ಲೆಲ್ಲಿಂದಲೋ ಬರುವ ಮಾನಸಿಕ ಅಸ್ವಸ್ಥರಿಗೆ, ಕುಡಿದು ಟೈಟಾಗಿ ತೂರಾಡಿ ಬೀಳುವ ಕುಡುಕ ಮಹಾಶಯರಿಗೆ ಇನ್ನು ವಿಚಿತ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಿ ನಿಲ್ದಾಣಗಳನ್ನು ಸುಸ್ಥಿತಿಯಲ್ಲಿಡುವ ಜವಾಬ್ದಾರಿ ಸ್ಥಳೀಯ ಆಡಳಿತದ ಮೇಲಿದೆ.
ಬಸ್ ನಿಲ್ದಾಣದ ಬೇಡಿಕೆ ಇಟ್ಟು ಪಟ್ಟು ಬಿಡದೆ ನಿರ್ಮಿಸಿ ಸೈ ಎನಿಸಿಕೊಳ್ಳುವ ಸಾರ್ವಜನಿಕರು ನಂತರದಲ್ಲಿ ನಿಲ್ದಾಣದ ಪರಿಸ್ಥಿತಿ ಬಗ್ಗೆ ಗಮನಿಸದಿರುವುದು. ಕಟ್ಟಡಗಳನ್ನು ಕಟ್ಟಿ ಜನೋಪಯೋಗಕ್ಕೆ ನೀಡಿ ಅಭಿವೃದ್ಧಿ ಮಾಡಿದ್ದೇವೆಂದು ಬೀಗುವ ಸರ್ಕಾರ ಅದರ ನಿರ್ವಹಣೆ ಸಮರ್ಪಕವಾಗಿ ಆಗುತ್ತಿದೆಯೆ ಇಲ್ಲವೇ ಎಂದು ಪರಿಶೀಲಿಸದೆ ಹಾಳಾದ ನಂತರ ಮತ್ತೆ ಜನರ ತೆರಿಗೆ ಹಣ ಬಳಸಿ ಪುನರ್ ನಿರ್ಮಿಸುವುದು ಅಕ್ಷಮ್ಯವಾಗಿದೆ. ಇನ್ನಾದರು ಎಚ್ ಎತ್ತು ಸಾರ್ವಜನಿಕ ತೆರಿಗೆ ಹಣಕ್ಕೆ ಗೌರವ ನೀಡಿ ಬಸ್ ನಿಲ್ದಾಣಗಳ ಕಾಯಕಲ್ಪವಾಗಬೇಕಿದೆ ಮತ್ತು ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

ಕೆಲವೆಡೆ ಜನ ಸಂಚಾರವೇ ಇಲ್ಲದ ಸ್ಥಳಗಳಲ್ಲಿ ಪ್ರಯಾಣಿಕರಿಗೆ ಬಸ್ ನಿಲ್ದಾಣವೆ ಆಸರೆಯಾಗಿ ಭರವಸೆ ನೀಡುತ್ತದೆ. ಮಳೆಗಾಲದಲ್ಲಿ ಬಸ್ ಪ್ರಯಾಣಿಕರಿಗೆ ಮಾತ್ರವಲ್ಲದೆ ದ್ವಿಚಕ್ರ ವಾಹನ ಸವಾರರಿಗು,ಪಾದಚಾರಿಗಳಿಗು ನೀರಲ್ಲಿ ತೋಯದಂತೆ ಆಶ್ರಯ ನೀಡುತ್ತದೆ. ಇಂತಹ ಕಟ್ಟಡಗಳನ್ನು ನಿರ್ಲಕ್ಷಿಸಿ ಅನೈತಿಕ ಚಟುವಟಿಕೆಗಳ ತಾಣವಾಗುವುದನ್ನು ತಡೆಯಬೇಕಿದ್ದು ಪ್ರತಿ ಬಸ್ ನಿಲ್ದಾಣದ ಪಕ್ಕದಲ್ಲಿ ಒಂದು ಅಂಗಡಿ ಮತ್ತು ಮನೆ ನಿರ್ಮಿಸಿದರೆ ಯಾರಿಗಾದರು ಉದ್ಯೋಗವಾದಂತಾಗಲಿದೆ ಮತ್ತು ಜನರು ವಾಸವಿರುವುದರಿಂದ ಅನೈತಿಕ ಚಟುವಟಿಕೆಗೆ ಕಡಿವಾಣ ಬೀಳಲಿದೆ ಹಾಗು ಒಂಟಿಯಾಗಿ ಬರುವ ಮಹಿಳಾ ಪ್ರಯಾಣಿಕರಿಗೆ ಭರವಸೆಯ ಸ್ಥಳವಾಗಲಿದೆ
Prathidvani Yellapura