
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ರಾಷ್ಟ್ರಕಂಡ ಬಹು ಧೀರ್ಘ ಕಾಲದ ಕನಸು. ಪ್ರಭು ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಅವನಿಗೊಂದು ಆಲಯ ನಿರ್ಮಾಣ ಸಾಕಾರಗೊಂಡಿದೆ. ಜನವರಿ ತಿಂಗಳಿನಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ದೇವಾಲಯ ನಿರ್ಮಾಣ ಕಾರ್ಯದ ಹಿಂದೆ ದಶಕಗಳ ತ್ಯಾಗ, ಬಲಿದಾನ, ಶೌರ್ಯ, ಸಾಹಸಗಳ ಕಥಾನಕವೂ ಅಡಗಿದೆ.
ಇಂತಹ ಸಾರ್ಥಕ ಕ್ಷಣದಲ್ಲಿ ಭವಿಷ್ಯದ ಪೀಳಿಗೆಯ ಅರಿವಿಗೆ ಬರುವಂತೆ ಜಾಗೃತಿ ಮೂಡಿಸಲು “ಶೌರ್ಯ ಜಾಗರಣಾ ರಥ ಯಾತ್ರೆ”ಯನ್ನು ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಹಮ್ಮಿಕೊಂಡಿದೆ. ಈ ರಥವು ಜಿಲ್ಲೆಯಾದ್ಯಂತ ಸಂಚರಿಸಿ ಅ.8ರ ಸಂಜೆ ಯಲ್ಲಾಪುರಕ್ಕೆ ಆಗಮಿಸಿ ಆನಗೋಡಿನಲ್ಲಿ ತಂಗಿ ಅ.9ರಂದು ತಾಲೂಕಿನ ವಿವಿಧ ಭಾಗಗಳಲ್ಲಿ ಸಂಚರಿಸಿ ಸಂಜೆ ನಾಯ್ಕನಕೆರೆಯ ದೇವಸ್ಥಾನದ ಆವಾರದಲ್ಲಿ ಸಮಾರೋಪಗೊಂಡು ಮುಂದೆ ಸಾಗಲಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ಟ ಏಕಾನ ಹೇಳಿದರು.

ಅವರು ಪಟ್ಟಣದ ಶಾರದಾಂಬಾ ದೇವಸ್ಥಾನದ ಸಭಾಭವನದಲ್ಲಿ ವಿಶ್ವಹಿಂದೂ ಪರಿಷತ್ ಭಜರಂಗದಳದ ಆಯೋಜನೆಯಲ್ಲಿ ಆಗಮಿಸಲಿರುವ ಶೌರ್ಯ ಜಾಗರಣಾ ರಥಯಾತ್ರೆಯ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ರಥಯಾತ್ರೆಯ ಜೊತೆಯಲ್ಲಿ ಭಜನೆ, ಸಾಂಪ್ರದಾಯಿಕ ನೃತ್ಯ, ವಿವಿಧ ಸಾಂಸ್ಕೃತಿಕ ಪ್ರಾಕಾರಗಳನ್ನು ಒಳಗೊಂಡಿದ್ದು ಹಿಂದೂ ಕುಲ ಕೋಟಿ ಬಂಧುಗಳು ಯಾತ್ರೆಯ ಯಶಸ್ಸಿಗೆ ಆಗಮಿಸಬೇಕಿದೆ ಎಂದು ಸಂಘಟನೆಯ ಗೌರವ ಅಧ್ಯಕ್ಷ ರಾಮು ನಾಯ್ಕ ಹೇಳಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕಾ ಅಧ್ಯಕ್ಷ ನಾರಾಯಣ ನಾಯಕ(ನನ್ನಿ) , ಸ್ವಾಗತ ಸಮಿತಿ ಅಧ್ಯಕ್ಷ ಗಜಾನನ ಟಿ ನಾಯ್ಕ, ತಾಲೂಕಾ ಕಾರ್ಯದರ್ಶಿ ಅನಂತ ಗಾಂವ್ಕರ ಕಂಚೀಪಾಲ ಹಾಗೂ ಸಂಘಟನೆಯ ಪ್ರಮುಖರಾದ ಪ್ರಸಾದ ಹೆಗಡೆ, ಗಿರೀಶ್ ಭಾಗ್ವತ್ ಉಪಸ್ಥಿತರಿದ್ದರು.

Prathidvani Yellapura