

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ದಿನ ದುಡಿದು ಬದುಕುವ ಕಾರ್ಮಿಕರ ಮಕ್ಕಳಿಗೆ ವರದಾನವಾಗಿ ಪುಟಾಣಿ ಮಕ್ಕಳ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದ್ದ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಯಲ್ಲಾಪುರದ ಎರಡು ಶಿಶುಪಾಲನ ಕೇಂದ್ರಗಳು ಸದ್ದಿಲ್ಲದೆ ಮುಚ್ಚುವ ಹುನ್ನಾರ ನಡೆದಿದೆ ಏನೋ ಎಂಬ ಬಲವಾದ ಅನುಮಾನ ಕಾರ್ಮಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಇಂತಹ ಗಂಭೀರವಾದ ಅನುಮಾನ ಮೂಡಲು ಪ್ರಮುಖ ಕಾರಣ ಕಳೆದ ಕೆಲವು ತಿಂಗಳಿಂದ ಪುಟಾಣಿ ಮಕ್ಕಳಿಗೆ ಮದ್ಯಾಹ್ನ ನೀಡುತ್ತಿದ್ದ ಆಹಾರ ಸಾಮಾಗ್ರಿ ನಿಲ್ಲಿಸಲಾಗಿದೆ.

ಪ್ರತಿ ದಿನ ಸಂಜೆಯವರೆಗೆ ನಡೆಯುವ ಪುಟಾಣಿ ಮಕ್ಕಳ ಶಿಶುಪಾಲನ ಕೇಂದ್ರ ಮದ್ಯಾಹ್ನವೆ ಮುಚ್ಚಲ್ಪಡುತ್ತಿದೆ. ಇದೊಂದು ಮನ ಕಲಕುವ ಸಂಗತಿಯಾಗಿದೆ.

ಸರ್ಕಾರ ಮಟ್ಟದಲ್ಲಿ ಇಲ್ಲಸಲ್ಲದ ಕೆಲಸಗಳಿಗೆ, ಕೆಲಸವೆ ಆಗದೆ ಬಿಲ್ ಮಾಡಿ ನುಂಗುವ ಹಣಕ್ಕೆ, ಸರ್ಕಾರಗಳು ತಮ್ಮ ಮಾರ್ಕೆಟಿಂಗ್ ಸಲುವಾಗಿ ಮಾಡುವ ಜಾಹಿರಾತಿನ ಖರ್ಚು ಇಷ್ಟೆಲ್ಲಾ ಪೋಲಾಗುವ ಹಣದ ಮದ್ಯೆ ಇನ್ನೂ ಮಾತನಾಡಲು ಬಾರದ. ಒಳಿತು ಕೆಡುಕು ಅರಿಯದ ಮುದ್ದು ಕಂದಮ್ಮಗಳ ಮದ್ಯಾಹ್ನದ ಊಟದ ಖರ್ಚು ಹೊರೆಯಾಗಿದೆ ಎಂದಾದರೆ ಸಾರ್ವಜನಿಕರೆ ಅದರ ಹಣವನ್ನು ಭರಿಸಬಲ್ಲರು ಎನ್ನುತ್ತಾರೆ ದಿನವು ದುಡಿದು ಬದುಕು ಸವೆಸುವ ಕಾರ್ಮಿಕರು.

ಒಂದು ಸರ್ಕಾರ ತಂದಂತಹ ಜನೋಪಕಾರಿ ಯೋಜನೆಗಳನ್ನು ಮತ್ತೊಂದು ಸರ್ಕಾರ ಅಧಿಕಾರಕ್ಕೆ ಬರುತ್ತಲೆ ರದ್ದು ಪಡಿಸುವುದು ಅಥವ ಸವಲತ್ತುಗಳಿಗೆ ಕತ್ತರಿ ಹಾಕುವುದು ಅಕ್ಷಮ್ಯವಾಗಲಿದೆ. ಕಾರ್ಮಿಕರು ನಮ್ಮ ಮಕ್ಕಳಿಗಾಗಿ ಶಿಶುಪಾಲನ ಕೇಂದ್ರ ತೆರೆಯಿರಿ ಎಂದು ಅರ್ಜಿ ಹಾಕಿರಲಿಲ್ಲ. ಕಾರ್ಮಿಕರ ಮಕ್ಕಳಿಗೆ ಪ್ರತ್ಯೇಕವಾಗಿ ಉತ್ತಮ ಗುಣಮಟ್ಟದ ಕೇಂದ್ರ ತೆರೆಯುವ ಆಲೋಚನೆ ಅಂದಿನ ಸಚಿವರಿಗೆ ಬಂದು ಜನೋಪಕಾರಿ ಕಾರ್ಯವೆಂದು ತೆರೆಯಲಾಗಿದೆ. ಅದನ್ನ ಮುಂದುವರೆಸಿಕೊಂಡು ಮತ್ತಷ್ಟು ಉತ್ತಮ ವ್ಯವಸ್ಥೆ ಕಲ್ಪಿಸಿ ಹೆಸರು ಗಳಿಸಬೇಕೆ ವಿನಃ ಮಕ್ಕಳು ತಿನ್ನುವ ಅನ್ನಕ್ಕೆ ಕುತ್ತು ತಂದಿರುವುದು ಆ ಭಗವಂತನು ಕ್ಷಮಿಸಲಾರ ಎನ್ನುತ್ತಾರೆ ಮಕ್ಕಳ ಪೋಷಕರು.

ಈ ಮದ್ಯೆ ಶಿಶುಪಾಲನ ಕೇಂದ್ರಗಳನ್ನು ನಡೆಸಲು ಎನ್.ಜಿ.ಒ ಗೆ ನೀಡಿದ್ದು ಅವರಿಂದ ಆಹಾರ ಸರಬರಾಜು ನಿಂತಿದೆ ಎನ್ನಲಾಗುತ್ತಿದೆ. ಅದೇನೆ ಇದ್ದರು ಕಾರ್ಮಿಕ ಇಲಾಖೆಯ ಅಡಿಯಲ್ಲಿ ನಡೆಸುತ್ತಿರುವ ಕೇಂದ್ರದ ಒಳಿತು ಕೆಡುಕು ಸರ್ಕಾರದ ಜವಾಬ್ದಾರಿ ಆಗಿದ್ದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮದ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕಿದೆ ಎನ್ನುತ್ತಾರೆ ಕಾರ್ಮಿಕರು.
ಶಿಶುಪಾಲನ ಕೇಂದ್ರದ ಅನುಕೂಲ
- 6 ತಿಂಗಳ ಕಂದಮ್ಮನಿಂದ 6 ವರ್ಷದ ವರೆಗಿನ ಮಕ್ಕಳನ್ನು ಸೇರಿಸಿಕೊಳ್ಳಲಾಗುತ್ತದೆ.
- ಮಕ್ಕಳ ಜ್ಞಾನಾಭಿವೃದ್ದಿಗೆ ಸ್ಮಾಟ್೯ ಕ್ಲಾಸ್ ವ್ಯವಸ್ಥೆ ಕಲ್ಪಿಸಲಾಗಿದೆ.
- ದಿನದಲ್ಲಿ ಮೂರು ಬಾರಿ ಆಹಾರದ ತಯಾರಿ ಮತ್ತು ಉತ್ತಮ ಪೌಷ್ಟಿಕ ಆಹಾರ, ಹಣ್ಣು, ಮೊಳಕೆ ಕಾಳು, ಉತ್ತಮ ಗುಣಮಟ್ಟದ ಆಹಾರ ಸಾಮಾಗ್ರಿ ಬಳಕೆ.
- ವಿಶೇಷವಾಗಿ ಕಟ್ಟಡ ಕಾರ್ಮಿಕರ ಮಕ್ಳಳಿಗಾಗಿಯೆ ಇರುವುದರಿಂದ ಕಾರ್ಮಿಕರು ನಿತ್ಯ ದುಡಿಮೆಗೆ ತೆರಳಿದರೆ ಸಂಜೆಯವರೆಗು ಮಕ್ಕಳ ಸುರಕ್ಷತೆಗೆ ಅನುಕೂಲವಿದೆ.
- ಬೆಳಗ್ಗೆ 9-30 ರಿಂದ ಸಂಜೆ 5 ಗಂಟೆಯವರೆಗೆ ವಾರದ 6 ದಿನಗಳು ತೆರೆದಿರುತ್ತದೆ.
- ದಸರ ರಜೆ ಮತ್ತು ಬೇಸಿಗೆ ರಜೆ ಸಂದರ್ಭದಲ್ಲಿಯು ಶಿಶುಪಾಲನ ಕೇಂದ್ರ ತೆರೆದಿರುತ್ತದೆ.
- ಶಿಶುಪಾಲನ ಕೇಂದ್ರದ ಶಿಕ್ಷಕರಿಗೆ ಯಾವುದೆ ಅನ್ಯ ಕೆಲಸದ ಒತ್ತಡವಿಲ್ಲ ಇದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ.






Prathidvani Yellapura