



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಕೆಲ ಸಂದರ್ಭಗಳಲ್ಲಿ ಅಪಘಾತ ಸಂಭವಿಸಿದಾಗ ಭಯ ಅಥವಾ ಕನಿಕರ ಪಡುತ್ತಾ ದೂರ ನಿಂತು ಮಾತನಾಡುವವರೇ ಹೆಚ್ಚಿರುವಾಗ ಯಾವುದನ್ನೂ ಲೆಕ್ಕಿಸದೇ ಮುಂದೇನಾಗಬಹುದೆಂಬ ಅಂಜಿಕೆಯೂ ಇಲ್ಲದೇ ತಕ್ಷಣಕ್ಕೆ ತನ್ನಿಂದಾಗಬಹುದಾದ ಸಹಾಯಕ್ಕೆ ಧಾವಿಸುವ ಅರಬೈಲು ಬಾಲು ಎಂದೇ ಹೆಸರಾಗಿರುವ ಅರಬೈಲು ಬಾಲಕೃಷ್ಣ ನಾಯ್ಕ ಸಮಾಜ ಸೇವಕರ ಪಟ್ಟಿಯಲ್ಲಿ ವಿಶಿಷ್ಟ ವ್ಯಕ್ತಿಯಾಗಿ ಕಾಣಿಸುತ್ತಾರೆ.

ಸೆ.5ರ ಗುರುವಾರ ಪಟ್ಟಣದ ನ್ಯೂ ಮಲಬಾರ್ ಹೋಟೆಲ್ ಮುಂಭಾಗದಲ್ಲಿ ಹಾದುಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಮೇಲೆ ಲಾರಿ-ಕಂಟೈನರ್-ಬಸ್ಸಿನ ನಡುವೆ ಸರಣಿ ಅಪಘಾತ ಸಂಭವಿಸಿ ಮೂರು ವಾಹನಗಳು ನುಜ್ಜುಗುಜ್ಜಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿ ತಡಬಡಿಸುತ್ತಿದ್ದರು. ಅಪಘಾತದ ರಭಸಕ್ಕೆ ಲಾರಿ ಚಾಲಕ ಹೊರಬರಲಾರದೇ ವಾಹನದಲ್ಲೇ ಸಿಲುಕಿಕೊಂಡಿದ್ದನ್ನು ದೂರನಿಂತು ನೋಡುತ್ತಿದ್ದ ನೂರಾರು ಜನರ ನಡುವೆ ಯಾವುದನ್ನೂ ಯಾರನ್ನೂ ಲೆಕ್ಕಿಸದೇ ಆತನನ್ನು ರಕ್ಷಿಸಲು ಚಂಗನೆ ನೆಗೆದು ಲಾರಿಯನ್ನೇರಿ ಕೈಗೆ ಸಿಕ್ಕ ವಸ್ತುಗಳನ್ನೇ ಬಳಸಿ ಕೆಳ ನಿಂತಿದ್ದ ಜನರಿಗೆ ಹುರುಪು ತುಂಬಿ ಚಾಲಕನನ್ನು ರಕ್ಷಿಸುವ ಕಾಯಕಕ್ಕೆ ಮುಂದಾಗಿದ್ದು ಸೇರಿದ್ದ ಜನರ ಮದ್ಯೆ ವಿಶಿಷ್ಟ ವ್ಯಕ್ತಿಯಾಗಿ ಕಂಡರು. ಪೊಲೀಸರು ಅಲ್ಲಿದ್ದ ಜನರ ಸಹಕಾರದೊಂದಿಗೆ ಚಾಲಕನನ್ನು ಹೊರಕರೆತಂದು ರಕ್ಷಿಸಲಾಯಿತು.

ತಾಲೂಕಿನಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಆಕ್ಸಿಡೆಂಟ್ ಹಾಟ್ ಸಪಾಟ್ ಎಂದೇ ಕರೆಯಲ್ಪಡುವ ಅರಬೈಲು ಘಟ್ಟ ಪ್ರದೇಶದಲ್ಲಿ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಲೇ ಇರುತ್ತದೆ. ಯಾವುದೋ ಊರಿನಿಂದ ವಾಹನ ಚಲಾಯಿಸಿಕೊಂಡು ಬಂದ ಚಾಲಕ ಅಥವಾ ಇನ್ನಾರಿಗೆ ಗಾಯಗಳಾದರೂ ತಕ್ಷಣಕ್ಕೆ ಸಹಾಯಕ್ಕೆ ಧಾವಿಸುವ ವ್ಯಕ್ತಿ ಅರಬೈಲು ಬಾಲು. ತನ್ನ ಕೈಲಿ ಸಾಧ್ಯವಾಗದಿದ್ದರೂ ಕನಿಷ್ಟಪಕ್ಷ ಯಾರಿಂದ ಸಹಾಯ ಪಡೆಯಬಹುದೆಂಬುದನ್ನು ಮಾಹಿತಿ ನೀಡಿ ತಾವೇ ಕರೆ ಮಾಡುವ ಮೂಲಕ ನೆರವಾಗುತ್ತಾರೆ. ಅಲ್ಲದೇ ಆರೋಗ್ಯ ವಿಚಾರದಲ್ಲಿ ಗಂಭೀರ ಸಮಸ್ಯೆ ಎದುರಿಸುತ್ತಿರುವವರ ಜೊತೆ ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಧಾರವಾಡ ಇತ್ಯಾದಿ ಕಡೆಗಳಿಗೆ ಚಿಕಿತ್ಸೆಗಾಗಿ ತೆರಳುವವರ ಜೊತೆಯಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ಸಹಾಯಕ್ಕಾಗಿ ತೆರಳುವ ಹೃದಯವಂತ.

ಒಟ್ಟಿನಲ್ಲಿ ಪ್ರಚಾರ ಬಯಸದೇ ಎಲೆಮರೆಯ ಕಾಯಿಯಂತಿದ್ದು ಅಪ್ಪಟ ಸಮಾಜಸೇವಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಾತಿ-ಮತ-ಧರ್ಮವನ್ನೂ ಮೀರಿದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಕಷ್ಟದಲ್ಲಿದ್ದವರಿಗೆ ಸಹಾಯಕ್ಕಾಗಿ ಮುಂಬರುವ ಅರಬೈಲು ಬಾಲಣ್ಣ ಎಂದರೆ ಎಲ್ಲರಿಗೂ ಪ್ರೀತಿ.