

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಯಲ್ಲಾಪುರ : ಪರಿಸರ ಮಾಲಿನ್ಯದಿಂದ ಅಧಿಕಗೊಳ್ಳುತ್ತಿರುವ ಆಮ್ಲಜನಕದ ಕೊರತೆಯನ್ನು ನೀಗಿಸುವ ಪರೋಪಕಾರ ಕಾರ್ಯ ಮರಗಿಡಗಳಿಂದ ಮಾತ್ರ ನೈಸರ್ಗಿಕವಾಗಿ ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ನಾವು ಪ್ರತಿವರ್ಷ ವನಮಹೋತ್ಸವದ ಹೆಸರಿನಲ್ಲಿ ನೆಡುವ ಗಿಡಗಳನ್ನು ಬದುಕಿಸುವ ಕಾರ್ಯವೂ ಅತ್ಯಂತ ಮಹತ್ವದ್ದು. ನೆಟ್ಟ ಗಿಡಗಳನ್ನು ಬೆಳೆಸುವ, ಉಳಿಸುವ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಅಳಿಸುವ ಪ್ರತಿಜ್ಞೆ ನಮ್ಮದಾಗಬೇಕಿದ್ದು, ವಿವಿಧ ಇಲಾಖೆಗಳ ಸಮನ್ವಯತೆಯಿಂದ ಮಾತ್ರ ಇಂತಹ ಕಾರ್ಯಕ್ರಮಗಳ ಉದ್ದೇಶ ಹಾಗೂ ಗುರಿಗಳು ಯಶಸ್ಸುಗಳಿಸಲು ಸಾಧ್ಯ. ನಾವು ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆ ಕಾಣುತ್ತಿದ್ದ ದಟ್ಟ ಕಾಡುಗಳ ಅನೇಕ ಪ್ರದೇಶಗಳು ಇಂದು ಬಹುತೇಕ ಜಮೀನುಗಳಾಗಿ ಪರಿವರ್ತನೆ ಹೊಂದುತ್ತಿದ್ದು, ಇದಕ್ಕೆ ಯಾರು ಕಾರಣರು ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.

ಅವರು ತಾಲೂಕಿನ ಉಮ್ಮಚಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಜೀವನ ವಿಕಾಸ ಟ್ರಸ್ಟ್ ಯಲ್ಲಾಪುರ, ವನವಾಸಿ ಕಲ್ಯಾಣ ಕರ್ನಾಟಕ ಹಾಗೂ ಶಾಲಾಭಿವೃದ್ಧಿ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ `ವೃಕ್ಷಾರೋಪಣ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ’ವನ್ನು ಶಾಲಾ ಆವಾರದಲ್ಲಿ ಗಿಡ ನೆಟ್ಟು, ಗಿಡಗಳಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷೆ ರೂಪಾ ಪೂಜಾರಿ, ಅತಿಥಿಗಳಾಗಿದ್ದ ಎ.ಸಿ.ಎಫ್ ಹಿಮವತಿ ಭಟ್ಟ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು.


ಇಂದ್ರಾಣಿ ಭಟ್ಟ ಸಂಗಡಿಗರ ಪ್ರಾರ್ಥನೆ ಹಾಗೂ ಕಾವ್ಯಾ ಸಂಗಡಿಗರ ಪರಿಸರ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮುಖ್ಯಾಧ್ಯಾಪಕ ನಾರಾಯಣ ನಾವಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಗಜಾನನ ಭಟ್ಟ ನಿರ್ವಹಿಸಿದರು. ವಿದ್ಯಾ ಗೌಡರ್ ವಂದಿಸಿದರು. ಗ್ರಾ.ಪಂ ಸದಸ್ಯ ಕುಪ್ಪಯ್ಯ ಪೂಜಾರಿ, ಉಪ ವಲಯಾರಣ್ಯಾಧಿಕಾರಿಗಳಾದ ಸಂತೋಷ ಪವಾರ್, ವಿರಾಜ ನಾಯಕ, ಅರಣ್ಯ ಪಾಲಕ ಶಂಕರ, ಎಸ್.ಡಿ.ಎಂ.ಸಿ ಸದಸ್ಯ ನಾಗೇಶ ವಡ್ಡರ್ ಮತ್ತಿತರರು ಉಪಸ್ಥಿತರಿದ್ದರು.





Prathidvani Yellapura