
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಪಟ್ಟಣ ಪ್ರದೇಶ ದಿನದಂದ ದಿನಕ್ಕೆ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಾಗಿದ್ದು ಕುಟುಂಬಗಳ ಸಂಖ್ಯೆಯು ಸಹ ಹೆಚ್ಚಾಗಿದ್ದು ಅದಕ್ಕನುಗುಣವಾಗಿ ಮೀನು ಮತ್ತು ಮಾಂಸ ಮಾರುವ ಮಾರುಕಟ್ಟೆ ವ್ಯವಸ್ಥೆ ಕೂಡ ಹೆಚ್ಚಾದರೆ ಕೊಳ್ಳುವ ಗ್ರಾಹಕರಿಗು ಮಾರಾಟಮಾಡುವ ವ್ಯಾಪಾರಸ್ಥರಿಗು ಅನುಕೂಲವಾಗಲಿದೆ ಅದರಲ್ಲು ಪಟ್ಟಣ ಪಂಚಾಯತ್ ಗೆ ವರಮಾನ ಹೆಚ್ಚಾಗಲಿದ್ದು. ಪಟ್ಟಣದ ಎಲ್ಲೆಂದರಲ್ಲಿ ಮೀನು ಮಾರಾಟ ಮಾಡುವ ಸಮಸ್ಯೆಯು ಬಗೆಹರಿಯಲಿದೆ ಎಂದು ಮಂಜುನಾಥ ನಗರ ಪಟ್ಟಣ ಪಂಚಾಯತ್ ಸದಸ್ಯ ಸತೀಶ್ ಶಿವಾನಂದ ನಾಯ್ಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಲ್ಲಾಪುರ ಪಟ್ಟಣ ಮೊದಲಿನಂತೆ ವ್ಯಾಪ್ತಿ ಸಣ್ಣದಿಲ್ಲ ಸುತ್ತಮುತ್ತಲಿನ ಪ್ರದೇಶಗಳು ಲೇಔಟ್ ಗಳಾಗಿದ್ದು ಜನಸಂಖ್ಯೆ ಹೆಚ್ಚಾಗಿದೆ ವ್ಯಾಪ್ತಿಯು ಬೆಳೆದಿದೆ.

ಅಲ್ಲದೆ ನನ್ನ ವಾಡ್೯ ವ್ಯಾಪ್ತಿಯಲ್ಲಿ ಹೆಬ್ಬಾರ್ ನಗರ ನಿರ್ಮಾಣವಾಗಿದ್ದು 2 ಸಾವಿರಕ್ಕು ಅಧಿಕ ಜನರು ವಾಸಿಸಲಿದ್ದಾರೆ ಈ ಹಿನ್ನೆಲೆಯಲ್ಲಿ ಮೀನು ಮತ್ತು ಮಾಂಸ ಮಾರುಕಟ್ಟೆ ನಿರ್ಮಿಸಿದರೆ ವರಮಾನವು ಆದಂತಾಯ್ತು ಹಾಗೆ ಸ್ವಚ್ಚತೆ ಕಾಪಾಡಿದಂತಾಯ್ತು ಎನ್ನುವುದು ಹಲವರ ಅಭಿಪ್ರಾಯವಾಗಿದೆ.

ಪಟ್ಟಣದಲ್ಲಿ ಘಟ್ಟದ ಕೆಳಗಿನ ಜನರು ಹೆಚ್ಚಾಗಿ ವಾಸಿಸುತ್ತಿದ್ದು ಎಲ್ಲರು ಮೀನನ್ನು ಹೆಚ್ಚಾಗಿ ಬಳಸುವವರಿದ್ದಾರೆ. ಘಟ್ಟದ ಕೆಳಗಿನಿಂದ ತಾಜಾ ಮತ್ತು ರಿಯಾಯಿತಿ ಬೆಲೆಯಲ್ಲಿ ಮೀನುಗಾರ ಮಹಿಳೆಯರು ಮೀನನ್ನು ವ್ಯಾಪಾರಕ್ಕೆಂದು ತಂದರೆ ಇಂತಹ ಮಾರುಕಟ್ಟೆ ವ್ಯವಸ್ಥೆ ಮಾಡುವುದರಿಂದ ಸ್ಥಳೀಯ ವ್ಯಾಪಾರಸ್ಥರಿಗು ಸಮಸ್ಯೆಯಾಗುವುದಿಲ್ಲ ಮತ್ತು ಗ್ರಾಹಕರಿಗೆ ಆಯ್ಕೆಯ ಅವಕಾಶ ಲಭಿಸಿದಂತಾಗಲಿದೆ ಮತ್ತು ಬಹಳ ಮುಖ್ಯವಾಗಿ ಎಲ್ಲೆಂದರಲ್ಲಿ ಮೀನು ಮಾಂಸ ಮಾರಾಟಕ್ಕೆ ಕಡಿವಾಣ ಬೀಳಲಿದೆ ಈ ಕುರಿತು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಗಮನ ಹರಿಸಬೇಕಿದೆ ಎಂದು ತಿಳಿಸಿದ್ದಾರೆ.