Breaking News

ಕಿರವತ್ತಿಯಲ್ಲಿ ಸಿಡಿದೆದ್ದ ಸಾರ್ವಜನಿಕರು ; ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆ , ಮನವಿ ಸಲ್ಲಿಕೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : 6ವರ್ಷದ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ ತಾಲೂಕಿನ ಕಿರವತ್ತಿಯಲ್ಲಿ ಸಾವಿರಾರು ಜನ ಗುರುವಾರ ರಾತ್ರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ


ಅತ್ಯಾಚಾರಿ ಆರೋಪಿ ಅಸ್ಲಾಂ’ಗೆ ಮರಣ ದಂಡನೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ‘ಅಕ್ರಮ ಸರಾಯಿ ಹಾಗೂ ಗಾಂಜಾ ನಶೆಯಲ್ಲಿ ಹೇಯಕೃತ್ಯ ನಡೆದಿದ್ದು, ಅಕ್ರಮ ಚಟುವಟಿಕೆಯನ್ನು ಮೊದಲು ತಡೆಯಿರಿ’ ಎಂದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಒತ್ತಾಯಿಸಿದ್ದಾರೆ.


ಕಿರವತ್ತಿಯ ಪೊಲೀಸ್ ಹೊರಠಾಣೆ ಬಳಿ ಜಮಾಯಿಸಿದ ಜನ ತಮ್ಮೊಳಗಿನ ಆಕ್ರೋಶವನ್ನು ಹೊರ ಹಾಕಿದರು. ‘ಪುಟ್ಟ ಬಾಲಕಿಯ ಬದುಕು ಹಾಳು ಮಾಡಿದ ಪಾಪಿಯನ್ನು ಗಲ್ಲಿಗೆ ಏರಿಸಬೇಕು’ ಎಂದು ಆಗ್ರಹಿಸಿದರು. ಸಂತ್ರಸ್ತ ಬಾಲಕಿ ಕುಟುಂಬದವರು ಸಹ ಆಗಮಿಸಿ ಕಣ್ಣೀರು ಹಾಕಿದರು.
‘ಮಕ್ಕಳ ಮೇಲಿನ ದೌರ್ಜನ್ಯ ತಡೆಯಿರಿ. ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಿ’ ಎಂದು ಪ್ರತಿಭಟನಾಕಾರರು ಆಕ್ರೋಶದಿಂದ ಆಗ್ರಹಿಸಿದರು.

‘ಸಂತ್ರಸ್ತ ಬಾಲಕಿ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು. ಬಾಲಕಿಯ ಆರೋಗ್ಯ ಸ್ಥಿತಿಯ ಬಗ್ಗೆ ದಿನಕ್ಕೆ ಎರಡು ಬಾರಿ ಊರಿನವರಿಗೆ ಮಾಹಿತಿ ಒದಗಿಸಬೇಕು’ ಎಂಬ ಬೇಡಿಕೆಗಳನ್ನು ಕಿರವತ್ತಿ ಗ್ರಾ ಪಂ ಸದಸ್ಯ ಸುನೀಲ ಕಾಂಬಳೆ ಆಗ್ರಹಿಸಿದರು. ನೆರೆದಿದ್ದ ಪ್ರತಿಭಟನಾಕಾರರು ಈ ಮಾತನ್ನು ಬೆಂಬಲಿಸಿದರು.


ಕಿರವತ್ತಿಯ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಅತ್ಯಾಚಾರ ಘಟನೆ ಖಂಡಿಸಿದರು.’ಸAತ್ರಸ್ಥ ಬಾಲಕಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು. ಅತ್ಯಾಧುನಿಕ ಗುಣಮಟ್ಟದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು’ ಎಂದು ಒತ್ತಾಯಿಸಿದರು.


ಮಹಿಳಾ ಸಂಘಟನೆಗಳಿಂದಲೂ ಮನವಿ:
ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ವಿವಿಧ ಮಹಿಳಾ ಸಂಘಟನೆಯವರು ಶಿಕ್ಷಕಿ ಹಾಗೂ ಲೇಖಕಿ ಶಿವಲೀಲಾ ಹುಣಸಗಿ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಹತ್ತು-ಹಲವು ಸಂಘಟನೆಯವರು ಪ್ರತಿಭಟನೆಯಲ್ಲಿ ಭಾಗವಹಿಸಿ ‘ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಹಕ್ಕೊತ್ತಾಯ ಮಾಡಿದರು.


ಪ್ರತಿಭಟನೆಯಲ್ಲಿ ಭಾಷಣ ಮಾಡಿದ ಎಲ್ಲರೂ ನ್ಯಾಯಕ್ಕಾಗಿ ಒತ್ತಾಯಿಸಿದ್ದು, ಉಪತಹಶೀಲ್ದಾರ್ ಎಚ್.ಎನ್ ರಾಘವೇಂದ್ರ ಮನವಿ ಸ್ವೀಕರಿಸಿದರು. ನೆರೆದಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದರು. ಕಾನೂನಿನ ಅಡಿ ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸಲು ಪ್ರಯತ್ನಿಸುವುದಾಗಿ ಅಧಿಕಾರಿಗಳು ಹೇಳಿದರು. ಅದಾಗಿಯೂ, ‘ನಿಗದಿತ ಸಮಯದ ಒಳಗೆ ಶಿಕ್ಷೆ ವಿಧಿಸಬೇಕು. ಇಲ್ಲವಾದಲ್ಲಿ ಮತ್ತೆ ಪ್ರತಿಭಟಿಸುತ್ತೇವೆ’ ಎಂದು ಎಚ್ಚರಿಸಿದರು.


ಪೊಲೀಸರಿಗೆ ತಲೆಬಿಸಿ ತಂದ ಗಾಂಜಾ ಗುಂಗು!
‘ಕಿರವತ್ತಿ ಹಾಗೂ ಸುತ್ತಲಿನ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಗಾಂಜಾ ಮಾರಾಟ ನಡೆದಿದೆ. ಅಕ್ರಮ ಸರಾಯಿ ಮಾರಾಟ ಸಹ ಜೋರಾಗಿದೆ. ದೂರು ನೀಡಿದರೂ ಕ್ರಮವಾಗಿಲ್ಲ’ ಎಂದು ಪ್ರತಿಭಟನೆಯಲ್ಲಿದ್ದ ಮಹಿಳೆಯರು ದೂರಿದರು. ‘ನಶೆಯ ಗುಂಗಿನಲ್ಲಿಯೇ ಅತ್ಯಾಚಾರ ನಡೆದಿದೆ. ಮೊದಲು ಅಕ್ರಮ ತಡೆಯಿರಿ’ ಎಂದು ಪೊಲೀಸರ ಕಾರ್ಯವೈಖರಿ ವಿರುದ್ಧ ಅಸಮಧಾನ ಹೊರಹಾಕಿದರು.


ಪ್ರಮುಖರಾದ ರಜತ್ ಖಾನಾಪುರ, ಬೇಬಿ ಅಮಿನಾ, ರಾಘು ಗೊಂದಿ, ಶಾಹಿನ್ ಮುಜಾವರ, ಬಾಬಾಜಾನ್ ಶೇಖ್, ಗಂಗಾಧರ ಲಮಾಣಿ, ಮಾರುತಿ ಕಳಸೂರಕರ್, ಮಹೇಶ ಪೂಜಾರ್, ಮಧುರಾ ಹೆಗಡೆ, ವಿಲ್ಸನ್ ಫರ್ನಾಂಡಿಸ್, ಬಾಬು ಸಿದ್ದಿ, ವಿಠಲ ಶೆಳಕೆ, ಅನ್ವರ್ ನಜೀರ ಅಹ್ಮದ್ ನದಾಫ, ಸಲೀಂ ಅಲ್ಲಾಭಕ್ಷ ವಂಟನಾಳ, ಪರಶುರಾಮ ಚಲವಾದಿ,ಕಲ್ಲಪ್ಪ ಹೊಳಿ, ರವಿ ನಾಯ್ಕ, ರಿಯಾನ್ ಉಸ್ಮಾನ್ ಪಟೇಲ್ ಸೇರಿ ಸುತ್ತಲಿನ ಹಲವು ಹಳ್ಳಿಗಳ ಸಾವಿರಾರು ಜನ ಪ್ರತಿಭಟನಾ ಮೆರವಣಿಗೆಯಲ್ಲಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *