Breaking News

ನಿವೃತ್ತಿ ಹೊಂದಿದ ಅಜಾತಶತ್ರು, ಶಿಕ್ಷಣ ಪ್ರೇಮಿ ಮುಖ್ಯ ಶಿಕ್ಷಕ “ಸಂತೋಷ ಹೊನ್ನಪ್ಪ ಕೊಳಗೇರಿ” ಅವರಿಗೆ ಇಂದು ಬೀಳ್ಕೊಡುಗೆ.

ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಸುಧೀರ್ಘ 40 ವರ್ಷಗಳ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದುತ್ತಿರುವ ಸಂತೋಷ ಹೊನ್ನಪ್ಪ ಕೊಳಗೇರಿ ಹುಟ್ಟಿದ್ದು ಕುಮಟಾ ತಾಲೂಕಿನ ಹನೇಹಳ್ಳಿಯ ಬಡಕುಟುಂಬದಲ್ಲಿ. ಶ್ರೀಮಂತಿಕೆ ಇಲ್ಲದಿದ್ದರೂ ಜ್ಞಾನ ಸಂಪತ್ತಿನಲ್ಲಿ ಆಗರ್ಭ ಶ್ರೀಮಂತರು. ಅಜಾತಶತ್ರು, ಸರ್ವರನ್ನೂ ಅತ್ಯಾಪ್ತರಾಗಿ ಕಂಡು ಶಿಕ್ಷಣ ವಲಯವಲ್ಲದೇ ಸಾಮಾಜಿಕ , ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ಜನಮಾನಸದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.


1985ರಲ್ಲಿ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ಪಾದಾರ್ಪಣೆ ಮಾಡಿ ಜೋಯಿಡಾ ತಾಲೂಕಿನಿಂದ ವೃತ್ತಿಜೀವನ ಪ್ರಾರಂಭಿಸಿದರು. 05 ವರ್ಷಗಳ ನಂತರ ಯಲ್ಲಾಪುರ ತಾಲೂಕಿಗೆ ಆಗಮಿಸಿದ ಸಂತೋಷ ಕೊಳಗೇರಿ 1991 ರಲ್ಲಿ ತಾಲೂಕಿನ ವಜ್ರಳ್ಳಿಯಲ್ಲಿ 08ವರ್ಷಗಳ ಸೇವೆ ಸಲ್ಲಿಸಿದರು. ನಂತರ 1999ರಲ್ಲಿ ಇಡಗುಂದಿಯ ಚಿನ್ನಾಪುರದ ಶಾಲೆಗೆ ವರ್ಗಾವಣೆಗೊಂಡು 16ವರ್ಷ ಸುಧೀರ್ಘ ಸೇವೆ ಸಲ್ಲಿಸಿ ಚಿನ್ನಾಪುರ ಜನತೆಯ ಮನೆಮಗನಂತಾದರು. ನಂತರ 2015ರಲ್ಲಿ ಪದೋನ್ನತಿ ಹೊಂದಿ ಮುಖ್ಯೋಪಾಧ್ಯಾಯರಾಗಿ ಮಲವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಸತತ 9 ವರ್ಷಗಳ ಕಾಲ ವೃತ್ತಿ ನಿರ್ವಹಿಸಿ ಮಕ್ಕಳ, ಜನತೆಯ ಪ್ರೀತಿಗಳಿಸಿ ಇಂದು ನಿವೃತ್ತಿ ಹೊಂದುತ್ತಿದ್ದು ಸ.ಹಿ.ಪ್ರಾ.ಶಾಲೆ ಮಲವಳ್ಳಿ ಹಾಗೂ ರಾಮಲಿಂಗ ದೇವಸ್ಥಾನ ಯುವಕ ಮಂಡಳ ಉತ್ಸವ ಸಮಿತಿಯವರ ಸಂಯುಕ್ತಾಶ್ರಯದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದೆ.


ಸಂತೋಷ ಕೊಳಗೇರಿ ಯವರು ಎಂದಿಗು ಪ್ರಶಸ್ತಿ ಪುರಸ್ಕಾರ ದ ಹಿಂದೆ ಬಿದ್ದವರಲ್ಲ ಹಾಗೆಂದು ಗೌರವದಿಂದ ಅರಸಿ ಬಂದ ಪುರಸ್ಕಾರವನ್ನು ತಿರಸ್ಕರಿಸಲು ಇಲ್ಲ. ತಾಲೂಕು ಉತ್ತಮ ಶಿಕ್ಷಕ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ, ಸಮ್ಮಾನಗಳು ಅರಸಿ ಬಂದಿವೆ. ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು ಕ್ರಿಕೆಟ್ ಅವರ ಅಚ್ಚುಮೆಚ್ಚಿನ ಆಟವಾಗಿದೆ. ಸಂಘಟನಾ ಶಿಲ್ಪಿ ಎಂದರೆ ತಪ್ಪಾಗಲಾರದು. ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ನಾಟಕರಂಗಗಳಲ್ಲಿ ಮಿಂಚಿದವರು ನೂರಾರು ಪ್ರತಿಭೆಗಳನ್ನು ಬೆಳಕಿಗೆ ತಂದವರು. ರಂಗಕಲೆಯಲ್ಲಿ ನಿಷ್ಣಾತರಾಗಿ ನಾಟಕಗಳಲ್ಲಿ ನಟಿಸಿ ನಿರೂಪಕರಾಗಿ ಕಾರ್ಯನಿರ್ವಹಿಸಿ ಹೆಸರಾದವರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮಂಡಲ ಸಾಕ್ಷರತಾ ಸಮನ್ವಯಾಧಿಕಾರಿಯಾಗಿ ಸೇವೆ ಸಲ್ಲಿಸಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿದ್ದೂ ಅಲ್ಲದೇ ಯಲ್ಲಾಪುರದಲ್ಲಿ ನೌಕರರ ಸಂಘದ ಕಟ್ಟಡ ನಿರ್ಮಾಣದಲ್ಲಿ ಅವಿರತವಾಗಿ ಶ್ರಮಿಸಿ ನೌಕರ ಸಂಘಕ್ಕೊಂದು ನೆಲೆ ತಂದುಕೊಟ್ಟವರು ಸಂತೋಷ ಹೊನ್ನಪ್ಪ ಕೊಳಗೇರಿಯವರು.


ಶಿಕ್ಷಕ ಸಮಾಜದ ಶಿಲ್ಪಿಯಾಗಿ ತಿದ್ದಿ ತೀಡುವವರು, ಸರಿದಾರಿಯಲ್ಲಿ ನಡೆದು ಸಾತ್ವಿಕ ನಡೆಯೊಂದಿಗೆ ಸಮಾಜಮುಖಿ ಚಿಂತಕರಾಗಿ ವಿದ್ಯಾ ದೇಗುಲದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ವಿದ್ಯಾ ಬ್ರಹ್ಮನಿಗೆ ಅಕ್ಷರ ಪೂಜೆ ಸಲ್ಲಿಸಿ 40 ವರ್ಷದ ಸುಧೀರ್ಘ ಸಾರ್ಥಕ ಸೇವೆಗೆ ವಿದಾಯ ಹೇಳಿ ವೃತ್ತಿಯಿಂದ ನಿವೃತ್ತಿಯಾಗಿ ಪ್ರವೃತ್ತಿಯೆಡೆಗೆ ಸಾಗುತ್ತಿರುವ ಸಂತೋಷ ಹೊನ್ನಪ್ಪ ಕೊಳಗೇರಿಯವರ ಜೀವನ ಇತರರಿಗೂ ಆದರ್ಶ, ಕಲಿತ ಸಹಸ್ರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶ. ಪತ್ನಿ ಸುಚೇತಾ ಮಿರಾಶಿ ಬೆನ್ನೆಲುಬಾಗಿ ನಿಂತು ತಾವೂ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಾ ಪತಿಯ ಸಾತ್ವಿಕ ಬದುಕಿನೊಂದಿಗೆ ಬಾಳ ಸಂಗಾತಿಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ಅವರ ಭವಿಷ್ಯದ ಬದುಕು ಹಸನಾಗಿರಲೆಂಬುದು ಸಹಸ್ರಾರು ವಿದ್ಯಾರ್ಥಿಗಳ, ಪೋಷಕರ,ಇಲಾಖೆ ಪ್ರಮುಖರ ಆಶಯವಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *