
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ- ಬೇಸಿಗೆ ರಜೆಕಾಲ ಮುಗಿದು ಶಾಲೆಯ ಗಂಟೆ ಸದ್ದು ಮೊಳಗಿ ಚಿಣ್ಣರ ಚಿಲಿಪಿಲಿ ಕಲರವ ಶಾಲೆಯ ಆವರಣದಲ್ಲಿ ಕೇಳುವ ದಿನ ಬಂದಾಯಿತು ಜೂನ್ 1 ರಿಂದ ಪ್ರಸಕ್ತ ವರ್ಷದ ಶೈಕ್ಷಣಿಕ ಚಟುವಟಿಕೆ ಪ್ರಾರಂಭವಾಗಿ ಪಾಠ ಪ್ರವಚನ ಆರಂಭಗೊಳ್ಳಲಿದೆ.

ತಾಲೂಕಿನಲ್ಲಿ 181 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಡಶಾಲೆ ಗಳಿದ್ದು 9 ಅನುದಾನಿತ 13 ಅನುದಾನರಹಿತ ಶಾಲೆಗಳು ಸೇರಿ ಒಟ್ಟು 203 ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ಶಾಲೆಗಳಲ್ಲಿ ಕಳೆದ ಸಾಲಿನಲ್ಲಿ 11,584 ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಪ್ರಸಕ್ತ ವರ್ಷ ಮತ್ತಷ್ಟು ಹೆಚ್ಚಾಗಲಿದ್ದು ಮೂಲಭೂತ ಸೌಕರ್ಯಗಳ ಕೊರತೆ ಕಾಡುವ ಸಾದ್ಯತೆ ಇದೆ.

ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಒಟ್ಟು 574 ಶಿಕ್ಷಕರ ಅವಶ್ಯಕತೆ ಇದ್ದುಸದ್ಯ 410 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 164 ಶಿಕ್ಷಕರ ಕೊರತೆ ಇದ್ದು ಕೈಗಾ , ನಿಯೋಜನೆ ಆದಾರದಲ್ಲಿ ಮತ್ತು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವುದರೊಂದಿಗೆ ಸಮಸ್ಯೆ ಬರದಂತೆ ಸರಿದೂಗಿಸಿಕೊಂಡು ಸಾಗಲಾಗುತ್ತಿದೆ.

ಕಳೆದ ವರ್ಷ 67 ಶಾಲಾ ಕಟ್ಟಡಗಳ ದುರಸ್ತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಅದರೆ 35 ಶಾಲೆಗಳಿಗಷ್ಟೆ ಅನುದಾನ ನೀಡಿದ್ದರು ಮತ್ತೆ 32 ಶಾಲೆಗಳ ಬಗ್ಗೆ ಸರ್ಕಾರಕ್ಕೆ ಬರೆಯಲಾಗಿದೆ.
ತಾಲೂಕಿನಲ್ಲಿ ಈ ವರ್ಷ ಉತ್ತಮ ಮಳೆಯಾಗಿಲ್ಲ ಬಹುತೇಕ ಶಾಲೆಗಳಲ್ಲಿ ಕುಡಿಯುವ ಮತ್ತು ಬಿಸಿಯೂಟಕ್ಕೆ ಬಳಸುವ ನೀರಿನ ಕೊರತೆ ಶಾಲಾ ಪ್ರಾರಂಭದಲ್ಲೆ ಕಾಡಲು ಪ್ರಾರಂಭವಾಗಿದೆ. ಕಿರವತ್ತಿ, ಮದನೂರು ಪಂಚಾಯತ ವ್ಯಾಪ್ತಿಯ ಶಾಲೆಗಳಲ್ಲಿ ಮತ್ತು ಮಲವಳ್ಳಿ ಶಾಲೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿ ಎದುರಿಸುತ್ತಿದ್ದಾರೆ. ಸರ್ಕಾರದ ಗಮನಕ್ಕೆ ವಿಷಯ ತರಲಾಗಿದೆ.

67 ಶಾಲೆಗಳಲ್ಲಿ ಸುಸಜ್ಜಿತ ಆಟದ ಮೈದಾನದ ಕೊರತೆ ಇದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕಿನಲ್ಲಿ 11 ಶಾಲೆಗಳಲ್ಲಿ ಮಣ್ಣಿನ ಗೋಡೆಯ ಕೊಠಡಿಗಳಿದ್ದು ಅಪಾಯದ ಸ್ಥಿತಿಯಲ್ಲಿದೆ ಇದನ್ನು ಸಹ ಸರ್ಕಾರದ ಗಮನಕ್ಕೆ ತರಲಾಗಿದೆ. ಬಹುತೇಕ ಶಾಲೆಗಳಲ್ಲಿ ಶೌಚಾಲಯ ಉತ್ತಮ ಗುಣಮಟ್ಟದಲ್ಲಿದ್ದು ನೀರಿನ ಕೊರತೆ ಕಾಡಲಿದೆ.

ಈಗಾಗಲೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ತಾಲೂಕಿನ 203 ಶಾಲೆಯ ಶಿಕ್ಷಕರೊಂದಿಗೆ ಗೂಗಲ್ ಮೀಟ್ ಮೂಲಕ ಪ್ರಸಕ್ತ ಸಾಲಿನ ಪಾಠದ ಬಗ್ಗೆ, ಆಡಳಿತಾತ್ಮಕ ವಿಷಯಗಳು, ಪಠ್ಯೇತರ ಚಟುವಟಿಕೆ ಕುರಿತು ಸಭೆಗಳನ್ನು ನಡೆಸಿ ಸೂಚನೆಗಳನ್ನು ರವಾನಿಸಲಾಗಿದೆ. ಬಿಸಿಯೂಟದ ವ್ಯವಸ್ಥೆಗೆ ಬೇಕಾದ ದವಸ ಧಾನ್ಯಗಳು ಆಯಾ ಶಾಲೆಗಳಿಗೆ ತಲುಪಿಸಲಾಗಿದೆ. ವಿಶೇಷವಾಗಿ ಪ್ರತಿಯೊಂದು ಶಾಲೆಗಳಿಗು ಸಾಕಷ್ಟು ಪ್ರಮಾಣದ ಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಗಿದೆ.
ಒಟ್ಟಿನಲ್ಲಿ ರಜದ ಮಜದಲ್ಲಿದ್ದ ಮಕ್ಕಳು ಶಾಲೆ ಕಡೆ ಮುಖ ಮಾಡಿ ಶಿಕ್ಷಣದ ಕಡೆ ಗಮನ ಹರಿಸುವಂತಹ ಪೂರಕ ವಾತಾವರಣ ಸೃಷ್ಟಿಮಾಡಿದ್ದು ಮಕ್ಕಳ ಆಗಮನಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

ಮಕ್ಕಳಿಗೆ ಒತ್ತಡದ ಶಿಕ್ಷಣಕ್ಕಿಂತ ಉತ್ತಮ ಶಿಕ್ಷಣ ನೀಡಬೇಕಿದೆ. ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಅಳವಡಿಸಿಕೊಳ್ಳಬೇಕಿದೆ.ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಜವಾಬ್ದಾರಿ ಶಿಕ್ಷಕರಮೇಲಿದ್ದು ಯಲ್ಲಾಪುರ ತಾಲೂಕಿನ ದೇವದುರ್ಲಬ ಶಿಕ್ಷಕರ ತಂಡ ಮಕ್ಕಳ ಭವಿಷ್ಯ ಉಜ್ವಲಗೊಳಿಸುವತ್ತ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಬೇರೆಲ್ಲು ಸಿಗಲು ಸಾದ್ಯವಿಲ್ಲ. ಬಣ್ಣದ ಬದುಕಿಗೆ ಮರುಳಾಗಿ ಸಾರವಿಲ್ಲದ ಶಿಕ್ಷಣಕ್ಕೆ ಮಾರುಹೋಗದೆ ಗಟ್ಟಿತನದ ಸಂಸ್ಕಾರವಂತ ಶಿಕ್ಷಣಕ್ಕೆ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಿ.ಎನ್.ಆರ್.ಹೆಗಡೆ , ಕ್ಷೇತ್ರ ಶಿಕ್ಷಣಾಧಿಕಾರಿ, ಯಲ್ಲಾಪುರ





