




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ವೃತ್ತಿಯಿಂದ ನಿವೃತ್ತಿಯಾಗಿ ಸಹೋದ್ಯೋಗಿಗಳ ಮನಸ್ಸಿನಲ್ಲಿ ಉಳಿಯುವಂತಹ ಬಾಂಧವ್ಯ ಬೆಳೆಸಿಕೊಂಡಿದ್ದರೆ ಮಾತ್ರ ಇಂತಹ ಭಾವನಾತ್ಮಕ ಬೀಳ್ಕೊಡುಗೆ ಸಿಗಲು ಸಾಧ್ಯ. ಹಿರಿಯ ಅಧಿಕಾರಿಗಳು ಹೇಳುವ ಕೆಲಸಗಳನ್ನು ಚಾಚೂ ತಪ್ಪದೇ ಮಾಡುವುದಲ್ಲದೇ ಹೇಳಿದ ಕೆಲಸಗಳಲ್ಲಿ ತಪ್ಪುಗಳಿದ್ದರೆ ಸರಿಪಡಿಸಿ ಹೇಳುವ ಗುಣ ಹೊಂದಿರುವವರು ಕೆಲವೇ ಕೆಲವರು. ಅವರಲ್ಲಿ ಪ್ರಥಮ ದರ್ಜೆ ಸಹಾಯಕ ಪರಶುರಾಮ್ ಒಬ್ಬರು. ಅವರ ಬೀಳ್ಕೊಡುಗೆ ಯಲ್ಲಾಪುರ ತಾಲೂಕು ಆಸ್ಪತ್ರೆಗೆ ದುಃಖದ ವಿಚಾರವಾಗಿದೆ. ಆದರೂ ಸರ್ಕಾರಿ ನಿಯಮದಂತೆ ನಿವೃತ್ತಿ ಸಹಜ ಪ್ರಕ್ರಿಯೆ ಎಂದು ತಾಲೂಕು ಆರೋಗ್ಯಾಧಿಕಾರಿ, ಆಸ್ಪತ್ರೆ ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ್ ಹೇಳಿದರು.

ಅವರು ಬಹು ಸಮಯದಿಂದ ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಾ ನಿವೃತ್ತಿ ಹೊಂದಿದ ಪರಶುರಾಮ ಬಂಕಾಪುರ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಶುರಾಮ್ ಅವರು ದಂಪತಿ ಸಹಿತರಾಗಿ ಗೌರವ ಸನ್ಮಾನ, ನೆನಪಿನ ಕಾಣಿಕೆ ಸ್ವೀಕರಿಸಿ ಶುಭ ನುಡಿಗಳ ಮೂಲಕ ಸಹೋದ್ಯೋಗಿಗಳಿಗೆ ವಂದನೆ ಸಲ್ಲಿಸಿದರು.

ಪರಶುರಾಮ ಅವರ ವೃತ್ತಿ ಜೀವನದ ಕುರಿತು ಕಿರವತ್ತಿಯ ಇರ್ಫಾನ್ ಶೇಖ, ಮಹೇಶ್ ಗಚ್ಚಿನಮನಿ, ಶೃಷೂಶಕಿ ಕೃಪಾ, ಕಲ್ಪನಾ ಮಾತನಾಡಿದರು.

ಡಾ.ಆಶಾ ಪರಿಚಯಿಸಿದರು. ಡಾ.ಸೌಮ್ಯಾ ನಿರೂಪಿಸಿ ವಂದಿಸಿದರು. ಡಾ.ದೀಪಕ್ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭನುಡಿಗಳನ್ನಾಡಿದರು. ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು , ಡಿ ದರ್ಜೆ ನೌಕರರು ಉಪಸ್ಥಿತರಿದ್ದರು.

ಡಿ ದರ್ಜೆ ನೌಕರರೆಲ್ಲರೂ ಸೇರಿ ನೆನಪಿನ ಕಾಣಿಕೆ ನೀಡಿದ್ದು ವಿಶೇಷವೆನಿಸಿತ್ತು.