

ಯಲ್ಲಾಪುರ : ಬೀದಿ ನಾಯಿಗಳು, ಹಂದಿಗಳು, ಬೀಡಾಡಿ ದನಗಳು, ಮಂಗ-ಕೋತಿಗಳ ಕಾಟ ವಿಪರೀತವಾಗುತ್ತಿದ್ದು ಇದಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಸಮಾಜದಲ್ಲಿ ಯಾವುದಾದರೂ ಸಮಸ್ಯೆಗೆ ಜನರೆಲ್ಲ ಒಗ್ಗಟ್ಟಾಗಿ ಪ್ರತಿಭಟಿಸಬಹುದು. ಮೇಲಿನ ಎಲ್ಲಾ ಪ್ರಾಣಿಗಳ ಕಾಟಕ್ಕೆ ಪ್ರತಿಭಟನೆಯೂ ಇಲ್ಲ, ಹಿಡಿದು ದಂಡಿಸುವಂತೆಯೂ ಇಲ್ಲ. ಕಾಟವನ್ನು ಅನುಭವಿಸಿಯೇ ತೀರಬೇಕಾದ ದುರ್ಗತಿ ಯಲ್ಲಾಪುರ ಪಟ್ಟಣದ ಜನರೊಂದಿಗೆ ಪರಿಸ್ಥಿತಿಯಾಗಿದೆ.

ಸೋಮವಾರ ಯಲ್ಲಾಪುರದ ನೂತನ ನಗರ ಜಡ್ಡಿಯ ಚಮ್ಮಾರಕೆರೆ ಸಮೀಪ ಪುಟ್ಟ ಬಾಲಕನೋರ್ವ ಶಾಲೆಗೆ ಹೊರಡಲು ಬ್ಯಾಗ್ ಹೆಗಲಿಗೇರಿಸಿ ಮನೆಯಿಂದ ಹೊರಬೀಳುತ್ತಿದ್ದಂತೆ ಶ್ವಾನಗಳ ಹಿಂಡು ರಸ್ತೆಗೆ ಅಡ್ಡಲಾಗಿ ನಿಂತಿದ್ದವು. ಅತ್ತ ಮುಂದೆ ಹೋಗಲೂ ಸಾಧ್ಯವಿಲ್ಲ, ಎಲ್ಲಿ ಮೈಮೇಲೆರಗುವುದೋ ಎಂಬ ಭಯದಲ್ಲಿ ನಿಂತಲ್ಲಿಯೇ ತಟಸ್ಥನಾಗಿದ್ದಾನೆ. ಇದನ್ನು ದೂರದಿಂದ ಗಮನಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲಿನಲ್ಲಿ ಚಿತ್ರ ಸೆರೆ ಹಿಡಿದು ತಕ್ಷಣ ಸ್ಥಳಕ್ಕೆ ಧಾವಿಸಿ ನಾಯಿಗಳನ್ನು ಗದರಿ ಓಡಿಸಿದ್ದಾರೆ.ಒಂದೊಮ್ಮೆ ಯಾರೂ ನೋಡದಿದ್ದಲ್ಲಿ ಒಂದು ದುರ್ಘಟನೆಯೇ ಸಂಭವಿಸುವ ಸಾಧ್ಯತೆಗಳಿತ್ತು.

ಇಷ್ಟೆಲ್ಲಾ ಗಂಭೀರ ಸಮಸ್ಯೆಗಳು ಪ್ರಾಣಿಗಳಿಂದ ಆಗುತ್ತಿದ್ದರೂ ಯಾರೂ ಏನನ್ನೂ ಮಾಡದ ಪರಿಸ್ಥಿತಿಯಲ್ಲಿರುವುದು ಶೋಚನೀಯವಾಗಿದೆ. ಒಂದೆಡೆ ಪ್ರಾಣಿ ದಯಾ ಸಂಘ ಪ್ರಾಣಿಗಳನ್ನು ಹಿಂಸಿಸಿದರೆ ಕಾನೂನಿನ ಪರಧಿಯೊಳಗೆ ಸಿಲುಕಿಸಿ ಸಮಸ್ಯೆ ತಂದೊಡ್ಡುತ್ತಾರೆ. ಅದಕ್ಕಾಗಿ ಯಾವ ಇಲಾಖೆಯೂ ಸಹ ಗಂಭೀರವಾಗಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ.
ಮಂಗಗಳ ಹಾವಳಿ ತಡೆಯಲು ಅರಣ್ಯ ಇಲಾಖೆ ಚಿಂತಿಸುತ್ತಿದೆ. ಹಂದಿ ಮತ್ತು ನಾಯಿಗಳ ಕಾಟ ತಪ್ಪಿಸಲು ಪಟ್ಟಣ ಪಂಚಾಯತ ಹರಸಾಹಸ ಪಡುತ್ತಿದೆ. ಜೊತೆಯಲ್ಲಿ ಬೀಡಾಡಿ ದನಗಳ ಸಮಸ್ಯೆಯೂ ಕೂಡ. ಏನೇ ಇರಲಿ ಸಮಸ್ಯೆಯಂತೂ ಗಂಭೀರವಾಗಿದೆ. ಪತ್ರಿಕೆಗಳು, ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣ ಸಮಸ್ಯೆಗಳನ್ನು ಬಿಂಬಿಸದ ದಿನಗಳಿಲ್ಲ. ಆದರೂ ಹೇಳಿಕೊಳ್ಳುವುದು ಅನಿವಾರ್ಯವಾಗಿದೆ. ಈ ಸಮಸ್ಯೆಯನ್ನು ಲಘುವಾಗಿ ಪರಿಗಣಿಸದೇ ಸಮಾಜದ ವಿವಿಧ ಸ್ತರದ ಅಧಿಕಾರಿಗಳು, ಪ್ರಾಜ್ಞರು, ಸಂಘ ಸಂಸ್ಥೆಗಳ ಪ್ರಮುಖರು ಕುಳಿತು ದಾರಿ ಹುಡುಕಬೇಕಿದೆ ಎಂಬುದು ಸಮಸ್ತರ ಅಭಿಪ್ರಾಯವಾಗಿದೆ.
ದಿನದಿಂದ ದಿನಕ್ಕೆ ನಾಯಿಗಳ ಸಂಖ್ಯೆ ಹೆಚ್ಚುತ್ತಿದೆ. ಹಿಂದೆಲ್ಲೋ ಕೇಳಿದ ನೆನಪು; ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡುವ ಮೂಲಕ ಸಂತತಿ ಬೆಳೆಯುವ ಪ್ರಕ್ರಿಯೆಗೆ ಕಡಿವಾಣ ಹಾಕುತ್ತಾರೆಂದು. ಆದರೆ ಅದು ಇಲ್ಲಿಯವರೆಗೂ ಕಂಡು ಬಂದಿಲ್ಲ. ಹಂದಿಗಳ ಕಾಟ ವಿಪರೀತವಾಗಿದೆ. ಮಂಗಗಳ ಕಾಟವಂತೂ ನಿನ್ನೆ ಮೊನ್ನೆಯದ್ದಲ್ಲ, ಇದಕ್ಕೊಂದು ಪರಿಹಾರ ಹುಡುಕಬೇಕಿದೆ. ಇಲ್ಲವಾದಲ್ಲಿ ಪುಟ್ಟ ಮಕ್ಕಳ ಮೇಲೆ ನಾಯಿಗಳ ಗುಂಪು ಎರಗಿದರೆ ಘನಘೋರ ಅವಘಡ ನಡೆಯುವುದಂತೂ ಸತ್ಯ. – ಮಂಜುಳಾ ರವಿ ನಾಯ್ಕ, ನೂತನನಗರ
ಪಟ್ಟಣದ 19 ವಾರ್ಡುಗಳಲ್ಲಿಯೂ ಈ ಸಮಸ್ಯೆ ಗಂಭೀರವಾಗಿ ಕೇಳಿಬರುತ್ತಿದೆ. ಹಾಗೆಂದು ಶ್ವಾನಗಳ, ಹಂದಿಗಳ ಕಾಟ ತಪ್ಪಿಸಲು ಪ.ಪಂ ಯಾವುದೇ ಕ್ರಮ ಕ್ಯಗೊಂಡಿಲ್ಲ ಎಂದೇನಲ್ಲ. ಆದರೆ ದೇಶದ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ನಾಯಿಗಳನ್ನು ಹಿಂಸಿಸುವಂತಿಲ್ಲ, ಆದರೂ ಸಂತಾನಹರಣದೊಂದಿಗೆ ಸಂಖ್ಯೆ ಕಡಿಮೆ ಮಾಡುವ ಪ್ರಯತ್ನವಂತೂ ಸಾಗುತ್ತಿದೆ. ಅದೂ ಸಹ ಅತ್ಯಂತ ದುಬಾರಿಯಾಗಿದೆ. ಒಂದು ನಾಯಿಗೆ 1400 ರೂ ಖರ್ಚು ಬೀಳುತ್ತದೆ. ಅಲ್ಲದೇ ಈ ಕೆಲಸಕ್ಕೆ ಬರುವ ಜನರ ಖರ್ಚು ವೆಚ್ಛವನ್ನು ಪಟ್ಟಣ ಪಂಚಯತ ಭರಿಸಬೇಕಾಗುತ್ತದೆ. ಸದ್ಯ ಸಮಸ್ಯೆ ಬಹಳ ಕೇಳಿಬರುತ್ತಿದ್ದು ಮೇಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಕ್ರಮ ಜರುಗಿಸಲಾಗುವುದು. ಸುನಿಲ್ ಸುಭಾಷ್ ಗಾವಡೆ, ಮುಖ್ಯಾಧಿಕಾರಿ ಪಟ್ಣ ಪಂಚಯತ, ಯಲ್ಲಾಪುರ.





