


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ಮಟ್ಟದಲ್ಲಿ ” ಉತ್ತಮ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ ” ಎಂಬ ಪ್ರಶಸ್ತಿಗೆ ಭಾಜನವಾದ ವಜ್ರಳ್ಳಿಯ ಭಾಗ್ಯಶ್ರೀ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರು ಮತ್ತು ಹುಣಸೇನಹಳ್ಳಿ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟದ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಎರಡು ದಿನಗಳ ಕಾಲ ಅಧ್ಯಯನ ಕಲಿಕಾ ಪ್ರವಾಸವನ್ನು ಕೈಗೊಂಡರು. ಭಾಗ್ಯಶ್ರೀ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟದ ಸ್ವ ಸಹಾಯ ಸಂಘಗಳು, ವಾರ್ಡ ಮಟ್ಟದ ಒಕ್ಕೂಟಗಳು ಮತ್ತು ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟಗಳ ಕಾರ್ಯವೈಖರಿಗಳು, ದಾಖಲಾತಿಗಳ ನಿರ್ವಹಣೆ, ಮತ್ತು ಜೀವನೋಪಾಯ ಚಟುವಟಿಕೆಗಳ ಕುರಿತು ಅಧ್ಯಯನ ನಡೆಸಿ ಮಾಹಿತಿ ಪಡೆದುಕೊಂಡರು.

ಅಧ್ಯಯನ ಪ್ರವಾಸವನ್ನು ಜ್ಞಾನೋದಯ ಗ್ರಾಮೀಣ ವಿದ್ಯಾ ಟ್ರಸ್ಟ್ ಚಿಕ್ಕಬಳ್ಳಾಪುರದವರು ಆಯೋಜಿಸಿದ್ದರು. ಸಮಾಲೋಚನಾ ಕಾರ್ಯಕ್ರಮವನ್ನು ವಜ್ರಳ್ಳಿ ಗ್ರಾ.ಪಂ ಅಧ್ಯಕ್ಷೆ ವೀಣಾ ಗಾಂವ್ಕಾರ ಉದ್ಘಾಟಿಸಿದರು. ಭಾಗ್ಯಶ್ರೀ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟದ ಅಧ್ಯಕ್ಷೆ ಗಾಯತ್ರಿ ಗಾಂವ್ಕಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಉಪಾಧ್ಯಕ್ಷೆ ರತ್ನಾ ಬಾಂದೇಕರ ಗ್ರಾ.ಪಂ ಸದಸ್ಯರಾದ ಪುಷ್ಪಾ ಆಗೇರ ಮತ್ತು ಗಂಗಾ ಗಾಂವ್ಕಾರ ಜ್ಞಾನೋದಯ ಟ್ರಸ್ಟ್ ನ ಮುಖ್ಯಸ್ಥರಾದ ರಾಜೇಂದ್ರಪ್ರಸಾದ್ ಮತ್ತು ಲತಾ ಹಾಗು ಭಾಗ್ಯಶ್ರೀ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟದ ಸಿಬ್ಬಂದಿಗಳಾದ ಹೇಮಾ ಆಚಾರಿ ಉಮಾ ಭಟ್ಟ ನಾಗವೇಣಿ ನಾಯ್ಕ ಮತ್ತು ಭುವನೇಶ್ವರಿ ನಾಯ್ಕ ಉಪಸ್ಥಿತರಿದ್ದರು.

ಒಕ್ಕೂಟದ ಪದಾಧಿಕಾರಿಗಳು ಸ್ವ ಸಹಾಯ ಸಂಘದ ಸದಸ್ಯರು ಸಮಾಲೋಚನೆಯಲ್ಲಿ ಪಾಲ್ಗೊಂಡರು. ಸಮಾಲೋಚನಾ ಕಾರ್ಯಕ್ರಮವನ್ನು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಮೂಲಕ ವಲಯ ಮೇಲ್ವಿಚಾರಕ ರಾಜಾರಾಮ ವೈದ್ಯ ಮತ್ತು ಮುಖ್ಯ ಪುಸ್ತಕ ಬರಹಗಾರ್ತಿ ಶರೀಫಾಬಿ ಮುಲ್ಲಾ ಮಾಹಿತಿ ಸಂವಾದದೊಂದಿಗೆ ನಡೆಸಿಕೊಟ್ಟರು. ಸಂಗೀತಾ ಗಾಂವ್ಕಾರ ನಿರೂಪಿಸಿದರು ಒಕ್ಕೂಟದ ಉಪಾಧ್ಯಕ್ಷೆ ಅನ್ನಪೂರ್ಣ ಭಟ್ಟ ಸ್ವಾಗತಿಸಿದರು ಕಾರ್ಯದರ್ಶಿ ಪಾರ್ವತಿ ಭಟ್ಟ ವಂದಿಸಿದರು.

