
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಮೌಲ್ಯಗಳೇ ಮರೆಯಾಗಿರುವ ಇಂದಿನ ಸನ್ನಿವೇಶದಲ್ಲಿ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಆಧಾರದ ಮೇಲೆ ಮೊನ್ನೆ ತಾನೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ವ್ಯಕ್ತಿಯ ನಡತೆ ಮತ್ತು ಪ್ರಾಮಾಣಿಕತೆ ಸಾರ್ವಜನಿಕ ಜೀವನದಲ್ಲಿ ಪ್ರಮುಖ ಪಾತ್ರವಹಿಸಿ ಫಲ ನೀಡುತ್ತದೆ ಎಂಬುದಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಗುರುರಾಜ ಗಂಟಿಹೊಳಿ ಸಾಕ್ಷಿಯಾಗಿದ್ದಾರೆ ಎಂದು ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೈಂದೂರಿನ ನೂತನ ಶಾಸಕ ಗುರುರಾಜ ಗಂಟಿಹೊಳೆಯವರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರ ವ್ಯಕ್ತಿತ್ವದ ಕುರಿತು ಮಾತನಾಡುತ್ತಿದ್ದರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ನಿರ್ದೇಶಕರೂ ಆಗಿರುವ ಗುರುರಾಜರು, ಪ್ರವಾಹದ ವಿರುದ್ದ ಈಜಿ, ಕೇವಲ ಪ್ರಾಮಾಣಿಕ ವ್ಯಕ್ತಿತ್ವದ ಬಲದಿಂದಲೇ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಪರೂಪದ ವ್ಯಕ್ತಿಯಾಗಿದ್ದಾರೆ. ಗುರುರಾಜರಿಗಿರುವ ಶೈಕ್ಷಣಿಕ ಮೌಲ್ಯಗಳ ಪ್ರಭಾವ ಸಾಕಷ್ಟು ಜನಸಾಮಾನ್ಯರ ಮೇಲೆಯೂ ಆಗಿದ್ದು, ಆತ್ಮವಿಶ್ವಾಸದ ಪ್ರತೀಕವಾಗಿರುವ ಗುರುಜಿಯವರಿಗೆ ಅವರ ವಿವಿಧ ಆದರ್ಶದ ಸಾಧನೆಗಳೇ ಕಾರಣವಾಗಿದೆ ಎನ್ನಬಹುದಾಗಿದೆ. ಇಂದು ಇಂತಹ ವ್ಯಕ್ತಿಯನ್ನು ಸನ್ಮಾನಿಸುತ್ತಿರುವುದು ಅರ್ಥಪೂರ್ಣ ಎಂದರು.
ಜಾತಿ, ಮತ, ಧರ್ಮ, ಅಂತಸ್ಥಿನ ಭೇದ ತೋರದೇ ಜನಸಾಮಾನ್ಯರಿಗೆ ಸಾಧ್ಯವಿದ್ದಷ್ಟು ನ್ಯಾಯ ನೀಡುವಂತಾಗಬೇಕು. ಸತ್ಯ, ಪ್ರಾಮಾಣಿಕತೆ, ಸೇವಾ ಮನೋಭಾವ ಹೊಂದಿದ್ದರೆ ೫ ವರ್ಷಗಳ ಕಾಲ ಜನಪರ ಕಾರ್ಯವನ್ನು ಸುಸೂತ್ರವಾಗಿ ಮಾಡಬಹುದಾಗಿದ್ದು, ಎಲ್ಲ ಸಂದರ್ಭಗಳಲ್ಲಿಯೂ ಸಾರ್ವಜನಿಕರಿಂದ ಕೇಳಿಬರುವ ಕುಡಿಯುವ ನೀರಿನ ಕುರಿತಾಗಿ ನಿಮ್ಮ ಕಾಳಜಿ ಸದಾ ಇರಲಿ ಎಂದು ಶಿರಸಿಯ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅಪೇಕ್ಷಿಸಿದರು.
ಧಾರವಾಡದ ಉಚ್ಚ ನ್ಯಾಯಾಲಯದ ನ್ಯಾಯವಾದಿ ನಾರಾಯಣ ಯಾಜಿ ಮಾತನಾಡಿ, ಗುರುರಾಜರನ್ನು ಸರಳ, ಸಜ್ಜನಿಕೆಗಳೇ ಶಾಸಕರನ್ನಾಗಿಸಲು ಪ್ರಮುಖ ಕಾರಣವಾಗಿದೆ. ಯೋಗ್ಯ ವ್ಯಕ್ತಿಗೆ ಸೂಕ್ತ ಸ್ಥಾನ ಲಭ್ಯವಾಗಿದೆ ಎಂದರು.

ಸನ್ಮಾನವನ್ನು ಸ್ವೀಕರಿಸಿದ ಗುರುರಾಜ ಗಂಟೀಹೊಳೆ ಮಾತನಾಡಿ, ಅತಿ ವಿಚಿತ್ರವಾಗಿರುವ ಇಂದಿನ ರಾಜಕೀಯ ಅಖಾಡದಲ್ಲಿ ಬದಲಾವಣೆಗೋಸ್ಕರ ಈ ರಂಗವನ್ನು ಪ್ರವೇಶಿಸಿ, ಗೆಲುವು ಸಾಧಿಸಿದ್ದೇನೆ. ಇದಕ್ಕೆ ಮತದಾರರ ನೆರವು ಕಾರಣವಾಗಿದ್ದು, ಯಲ್ಲಾಪುರದಲ್ಲಿಯೂ ಸಾರ್ವಜನಿಕರು ತೋರಿದ ಪ್ರೀತಿ ವಿಶ್ವಾಸಗಳಿಗೆ ಚಿರಋಣಿಯಾಗಿರುವ ತಾನು ಉತ್ತಮ ನಾಯಕನಾಗಿ ಬೆಳೆದು ತನ್ನನ್ನು ನಂಬಿದ ಮತದಾರರಿಗೆ ಸಾಧ್ಯವಿರುವ ನೆರವು ನೀಡುವ ಹಂಬಲವನ್ನು ಹೊಂದಿದ್ದೇನೆ ಎಂದ ಅವರು, ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ನನಗೆ ಉತ್ತಮ ತಂಡದ ಅವಶ್ಯಕತೆಯಿದೆ. ಒಟ್ಟಾರೆ ಸಾರ್ವಜನಿಕರು ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿಭಾಯಿಸುತ್ತೇನೆ ಎಂದರು.
ಅಧ್ಯಕ್ಷತೆವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೇಮನೆ ಮಾತನಾಡಿ, ಅರ್ಹತೆಗನುಸಾರ ಶಾಸಕರಾಗಿ ಗುರುರಾಜ ಗಂಟೀಹೊಳೆ ಆಯ್ಕೆಯಾಗಿ ನಮಗೆ ಸಂತಸವನ್ನುಂಟುಮಾಡಿದ್ದಾರೆ ಎಂದರು.
ನಿರ್ವತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಸಾಂದರ್ಭಿಕ ಮಾತನಾಡಿದರು. ಭಾಜಪ ಮಂಡಲಾಧ್ಯಕ್ಷ ಜಿ.ಎನ್.ಗಾಂವ್ಕರ್, ಸಿ.ಎ ವಿಘ್ನೇಶ್ವರ ಗಾಂವ್ಕರ್ ವೇದಿಕೆಯಲ್ಲಿದ್ದರು.
ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿದ್ಯಾರ್ಥಿನಿ ದೀಕ್ಷಾ ದೇಶಭಕ್ತಿಗೀತೆ ಹಾಡಿದರು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೇಮನೆ ಸ್ವಾಗತಿಸಿದರು. ಪಿ.ಯು ಕಾಲೇಜು ಪ್ರಾಂಶುಪಾಲ ಡಿ.ಕೆ.ಗಾಂವ್ಕರ್ ನಿರ್ವಹಿಸಿದರು. ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ವಂದಿಸಿದರು.