
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಕಸಮುಕ್ತ ಗೊಳಿಸಿ ಸ್ವಚ್ಚ ಮತ್ತು ಸುಂದರ ಯಲ್ಲಾಪುರದ ಕನಸು ಕಾಣುತ್ತಿರುವ ಪಟ್ಟಣ ಪಂಚಾಯತ್ ಕನಸು ಎಂದಿಗು ನನಸಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ ಕಾರಣ ಕಳ್ಳದಾರಿಯಲ್ಲಿ ಕಸ ಸುರಿಯುವವರಿಗೆ ಕಡಿವಾಣವೆ ಇಲ್ಲದಾಗಿದ್ದು ಪಟ್ಟಣದ ಹೊರವಲಯ ಗ್ರಾಮೀಣ ಭಾಗಗಳಿಗೆ ತೆರಳುವ ಮಾರ್ಗದಲ್ಲಿ ಕಸದರಾಶಿಯೆ ಸ್ವಾಗತಿಸುತ್ತದೆ. ಇಲ್ಲಿ ಕಸ ಸುರಿಯಬೇಡಿ ಎಂಬ ಫಲಕದ ಅಡಿಯಲ್ಲಿಯೇ ಕಸ ಸುರಿದಿರುವುದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಿದೆ.

ಘಟ್ಟದ ಕೆಳಗಿನಿಂದ ಮೇಲ್ಬಾಗಕ್ಕೆ ಬರುತ್ತಲೆ ಮೊದಲಿಗೆ ಸಿಗುವ ಹಸಿರ ವನಸಿರಿಯ ನಡುವೆ ಕಂಗೊಳಿಸುವ ಸುಂದರ ಯಲ್ಲಾಪುರ ಇತ್ತೀಚೆಗೆ ಯಲ್ಲಾಪುರಕ್ಕೆ ಪ್ರವೇಶಕ್ಕು ಮುನ್ನ ಅದರಲ್ಲು ಹೆದ್ದಾರಿಗೆ ಅಡ್ಡಲಾಗಿ ಹಾಕಿರುವ ಸ್ವಾಗತ ಕಮಾನಿಗು ಮುನ್ನ ಬಳ್ಳಾರಿ-ಕಾರವಾರ ಹೆದ್ದಾರಿ ಅಂಚಿನಲ್ಲಿ ಸುರಿದಿರುವ ಗುಡ್ಡೆ ಗಾತ್ರದ ಕಸ ಸ್ವಾಗತಿಸುತ್ತಿದೆ. ವಿಪರ್ಯಾಸ ಎಂದರೆ ಇದೇ ಹೆದ್ದಾರಿಯಲ್ಲಿ ಘಟಾನುಘಟಿ ಅಧಿಕಾರಿಗಳು ನಿತ್ಯವು ಸಂಚರಿಸುತ್ತಿರುತ್ತಾರೆ. ಆದರೆ ಅವರಾರ ಕಣ್ಣಿಗೂ ಕಾಣದೇ ಇರುವುದು ದುರಂತವಾಗಿದೆ.

ಹೆದ್ದಾರಿ ಪಕ್ಕದಲ್ಲಿ ಸುರಿದಿರುವ ಕಸದಲ್ಲಿ ಭಾರಿ ಪ್ರಮಾಣದ ಮದ್ಯದ ಸ್ಯಾಚಟ್ ಗಳು ಬಿಯರ್ ಬಾಟಲಿಗಳು ಮತ್ತು ನವೀಕರಣ ಸಂದರ್ಭದಲ್ಲಿ ಉಳಿಯುವ ಕಟ್ಟಡದ ತ್ಯಾಜ್ಯವೆ ಆಗಿದೆ. ಇದನ್ನು ಕೂಲಂಕುಷವಾಗಿ ಪರಿಶೀಲಿಸಿ ಕಸ ಸುರಿದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕಿದೆ. ಇಲ್ಲವಾದಲ್ಲಿ ಊರಿನ ಸ್ವಚ್ಚತೆ ನಮ್ಮ ಕೆಲಸವಲ್ಲ ಎನ್ನುವವರ ಎಗ್ಗಿಲ್ಲದಂತೆ ಮನಸೋ ಇಚ್ಛೆ ಎಲ್ಲೆಂದರಲ್ಲಿ ಕಸ ಸುರಿಯುವ ವಿಕೃತ ಮನಸ್ಥಿತಿಗೆ ಕಡಿವಾಣವೇ ಇಲ್ಲದಂತಾಗುತ್ತದೆ.
