


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ: ಕನ್ನಡ ಭಾಷೆಯಲ್ಲಿ ಶೇಕಡಾ ೧೦೦ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ವಿಧಾಯಕ ಕಾರ್ಯಕ್ರಮವನ್ನು ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುತ್ತಿರುವ ಶ್ರೇಷ್ಠ ಪರಂಪರೆಗೆ ಹೆಮ್ಮೆಯಿದೆ. ಇಂತಹ ಸಾರ್ಥಕ ಪ್ರೋತ್ಸಾಹದಾಯಕ ಕಾರ್ಯಕ್ರಮವನ್ನು ಆಳುವ ಸರ್ಕಾರಗಳು ಮಾಡಬೇಕಿದೆ. ಕನ್ನಡ ,ಭಾಷೆಯ ಮೇಲೆ ಅನ್ಯ ಭಾಷೆಗಳ ಆಕ್ರಮಣ ಸಹಿಸುವುದಿಲ್ಲ. ಏನಾದರಾಗು ಮೊದಲು ಮಾನವನಾಗು ಎಂಬ ಉಕ್ತಿಯಂತೆ ಕನ್ನಡತನವನ್ನು ಬಿಟ್ಟುಕೊಡದೇ ಯಾವುದೆ ಉದ್ಯೋಗದಲ್ಲಿರಲಿ ಉನ್ನತ ಸ್ಥಾನಮಾನದಲ್ಲಿರಲಿ ಮಾತೃಭಾಷೆಗೆ ಸಲ್ಲಬೇಕಾದ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ನಿಮ್ಮ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್ ವಾಸರೆ ಹೇಳಿದರು.

ಅವರು ಪಟ್ಟಣದ ಟಿ.ಎಂ.ಎಸ್ ಸಭಾಭವನದಲ್ಲಿ ೨೦೨೨-೨೩ ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಕನ್ನಡ ಭಾಷೆಯಲ್ಲಿ ಶೇಕಡಾ ನೂರು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಕ.ಸಾ.ಪ ವತಿಯಿಂದ ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂವಹನದ ಭಾಷೆಯಾಗಿ ಇಂಗ್ಲಿಶ್ ಕಲಿಕೆ ಅಗತ್ಯ. ಆದರೆ ಪರಿಣಾಮಕಾರಿಯಾದ, ಧೀರ್ಘಕಾಲ ನೆನಪಿನಲ್ಲಿ ಉಳಿಯುವಂತ ಶಿಕ್ಷಣ ಪಡೆಯಲು ಮಾತೃಭಾಷೆಯಾದ ಕನ್ನಡದಿಂದ ಮಾತೃ ಸಾಧ್ಯ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಹೇಳಿದರು.

ತಾ.ಕ.ಸಾ.ಪ ಸಮ್ಮೇಳನಾಧ್ಯಕ್ಷ ಟಿ.ವಿ.ಕೋಮಾರ ಮಾತನಾಡಿ,ಜೀವನದಲ್ಲಿ ಪ್ರಾಮಾಣಿಕರಾಗಿದ್ದು ಸಮಾಜದ ಉತ್ತಮ ಪ್ರಜೆಗಳಾಗಿ’ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ ಫರ್ನಾಂಡಿಸ್ ಮಾತನಾಡಿ ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಎಲ್ಲ ಭಾಷೆಗಳಲ್ಲೂ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಸಾಧನೆ ಮಾಡಬೇಕಿದೆ. ಅದರಲ್ಲಿ ಕನ್ನಡಕ್ಕೆ ವಿಶೇಷ ಆಸಕ್ತಿ ನೀಡಬೇಕಿದೆ. ಬುದ್ಧಿ ಕಲಿಕೆಯೊಂದಿಗೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವತ್ತ ವಿದ್ಯಾರ್ಥಿಗಳು ಗಮನ ಹರಿಸಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಕ್ರಿಯಾಶೀಲರಾಗಬೇಕಿದೆ ಎಂದರು.

ಪತ್ರಕರ್ತ ಕೇಬಲ್ ನಾಗೇಶ ಮಾತನಾಡಿ, ಮಾತೃಭಾಷೆಗಿರುವ ಶಕ್ತಿ ಅನ್ಯ ಭಾಷೆಗಿರುವುದಿಲ್ಲ. ಅದು ಅನ್ನ ಭಾಷೆಯೂ, ಅಮ್ಮ ಭಾಷೆಯೂ ಹೌದು ಎಂಬ ಭಾವ ಎಲ್ಲರಲ್ಲೂ ಮೂಡಬೇಕು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ, ತಾಲ್ಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಜಯ್ ನಾಯಕ, ತಾಲೂಕಾ ಅಧ್ಯಕ್ಷ ಚಂದ್ರಶೇಖರ ಎಸ್.ಸಿ. ಜಿಲ್ಲಾ ಕ.ಸಾ.ಪ ಕಾರ್ಯಕಾರಣಿ ಸಮಿತಿ ಸದಸ್ಯೆ ಸುಮಂಗಲಾ ಹನುಮರೆಡ್ಡಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇಕಡಾ ನೂರು ಅಂಕ ಗಳಿಸಿದ ೯೩ ವಿದ್ಯಾರ್ಥಿಗಳಿಗೆ ಕನ್ನಡದ ಶಾಲು ಹೊದಿಸಿ, ಅಭಿನಂದನಾ ಪತ್ರ, ಪಟ್ಟಿ ನೀಡಿ ಅಭಿನಂದಿಸಲಾಯಿತು.
ಸಾಹಿತ್ಯಾಸಕ್ತರು, ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಜಿ.ಎನ್.ಭಟ್ಟ ತಟ್ಟಿಗದ್ದೆ ಸ್ವಾಗತಿಸಿ ಅಭಿನಂದನಾ ಸಮಾರಂಭ ನಿರೂಪಿಸಿದರು. ಸಂಜೀವಕುಮಾರ ಹೊಸ್ಕೇರಿ ಕಾರ್ಯಕ್ರಮ ನಿರ್ವಹಿಸಿದರು. ಸುಧೀರ ಕೋಡ್ಕಣಿ ವಂದಿಸಿದರು.






Prathidvani Yellapura